ನವದೆಹಲಿ: ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಏರ್ಬಸ್ ಎ320 ವಿಮಾನವು ಕರಾಚಿಯ ಜನನಿಬಿಡ ಪ್ರದೇಶದಲ್ಲಿ ನಿನ್ನೆ (ಶುಕ್ರವಾರ) ಮಧ್ಯಾಹ್ನ ಪತನಗೊಂಡ ಪರಿಣಾಮ 97 ಮಂದಿ ಸಾವಿಗೀಡಾಗಿದ್ದು, ಇಬ್ಬರು ಪವಾಡವೆಂಬಂತೆ ಬದುಕುಳಿದಿದ್ದಾರೆ.
ಇದನ್ನೂ ಓದಿ: VIDEO| ಸಿಸಿಟಿವಿಯಲ್ಲಿ ಸೆರೆಯಾಯ್ತು ಪಾಕ್ ವಿಮಾನ ಪತನದ ಭೀಕರ ದೃಶ್ಯ…!
ಪಿ.ಕೆ-8303 ನೋಂದಣಿಯ ವಿಮಾನದಲ್ಲಿ 99 ಪ್ರಯಾಣಿಕರು ಇದ್ದರು. ಲಾಹೋರ್ ವಿಮಾನ ನಿಲ್ದಾಣದಿಂದ ಹೊರಟು ಕರಾಚಿಯ ಜಿನ್ಹಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಶುಕ್ರವಾರ ಮಧ್ಯಾಹ್ನ ದುರ್ಘಟನೆ ಸಂಭವಿಸಿದೆ. ವಿಮಾನ ನಿಲ್ದಾಣದಿಂದ ಒಂದು ಕಿ.ಮೀ ಒಳಗಡೆಯೇ ಈ ಘಟನೆ ನಡೆದಿದ್ದು, ವಿಮಾನ ಲ್ಯಾಂಡ್ ಆಗುವ ಮುನ್ನ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದ ಕೆಲವೇ ಸೆಕೆಂಡುಗಳಲ್ಲಿ ಆ ಪ್ರದೇಶದ ಸುತ್ತ ದಟ್ಟ ಹೊಗೆ ಆವರಿಸಿತ್ತು.
ಈ ವೇಳೆ ವಿಮಾನದ ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ಹೊರತೆಗೆದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಮಾನದ ಪ್ರೀಮಿಯಂ ಎಕನಾಮಿ ಪ್ಯಾಸೆಂಜರ್ ಆಗಿದ್ದ ಪಂಜಾಬ್ ಪ್ರಾಂತ್ಯದ ಝಫರ್ ಮಸೂದ್ ಕೂಡ ಅವರಲ್ಲಿ ಒಬ್ಬರು. ಸಾವಿನ ದವಡೆಯಿಂದ ಪಾರಾಗಿರುವ ಮಸೂದ್, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಾವು ಚೆನ್ನಾಗಿರುವುದಾಗಿ ತಾಯಿಗೆ ಕರೆ ಮಾಡಿ ತಿಳಿಸಿದ್ದಾರೆ. ನಾನು ಗಾಯಗೊಂಡಿದ್ದೇನಷ್ಟೇ ಪ್ರಜ್ಞೆಯನ್ನು ಕಳೆದುಕೊಂಡಿಲ್ಲ. ಚಿಕಿತ್ಸೆಗೆ ಉತ್ತಮವಾಗೇ ಸ್ಪಂದಿಸುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: VIDEO: 107 ಜನರಿದ್ದ ಪಾಕಿಸ್ತಾನದ ವಿಮಾನ ಪತನ
ಮತ್ತೊಬ್ಬ ಪ್ರಯಾಣಿಕ ಅಮ್ಮರ್ ರಶೀದ್ ಕೂಡ ಬದುಕುಳಿದಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಅವರ ಕುಟುಂಬ ತಿಳಿಸಿದೆ.
ಮೊದಲ ಲ್ಯಾಂಡಿಂಗ್ ಪ್ರಯತ್ನವು ರದ್ದಾದ ಬಳಿಕ ವಿಮಾನವೂ ಎರಡನೇ ಲ್ಯಾಂಡಿಂಗ್ ಪ್ರಯತ್ನಕ್ಕೆ ಮುಂದಾಗಿತ್ತು ಎಂದು ತಿಳಿದುಬಂದಿದೆ. ವಿಮಾನ ಪತನಕ್ಕೂ ಮುನ್ನ ಓರ್ವ ಪೈಲಟ್ ತನ್ನ ಹೇಳಿಕೆಯನ್ನು ಫ್ಲೈಟ್ ಟ್ರ್ಯಾಕಿಂಗ್ ವೆಬ್ಸೈಟ್ನಲ್ಲಿ ದಾಖಲಿಸಿದ್ದು, ವಿಮಾನದ ಎರಡು ಇಂಜಿನ್ಗಳು ಸ್ಥಗಿತಗೊಂಡಿರುವುದನ್ನು ಏರ್ ಟ್ರಾಫಿಕ್ ನಿರ್ವಾಹಕರಿಗೆ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಯೊಬ್ಬರು ಹೇಳುವಂತೆ ಮೊದಲು ಮೊಬೈಲ್ ಟವರ್ಗೆ ಡಿಕ್ಕಿ ಹೊಡೆದ ವಿಮಾನ ನಂತರ ಮಲಿರ್ನಲ್ಲಿರುವ ಮಾಡೆಲ್ ಕಾಲನಿ ಬಳಿಯಿರುವ ಜಿನ್ಹಾ ಗಾರ್ಡನ್ ಏರಿಯಾ ಕಟ್ಟಡವೊಂದರ ಮೇಲೆ ಪತನವಾಯಿತು. ಇದರಿಂದ ಸಮೀಪದ ಅನೇಕ ಮನೆಗಳಿಗೆ ಬೆಂಕಿ ತಗುಲಿ ಹಾನಿಯಾಗಿದ್ದು, ಸಾಕಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವಿವರಿಸಿದ್ದಾರೆ.
ಕರೊನಾ ವೈರಸ್ ಲಾಕ್ಡೌನ್ನಿಂದ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಸ್ಥಬ್ಧವಾಗಿದ್ದ ವಿಮಾನ ಹಾರಾಟ ಮರು ಆರಂಭವಾದ ಒಂದೇ ವಾರದಲ್ಲಿ ಈ ದುರ್ಘಟನೆ ಸಂಭವಿಸಿದೆ. (ಏಜೆನ್ಸೀಸ್)
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ನೋಟಿಸ್ ನೀಡಿ ಶಾಕ್ ಕೊಟ್ಟ ಜಿಲ್ಲಾಡಳಿತ