ನವದೆಹಲಿ: ಕರೊನಾ ವೈರಸ್ ಸೋಂಕು ಹರಡುವಿಕೆಯ ಪ್ರಧಾನ ಕೇಂದ್ರ ಎನಿಸಿರುವ ನಿಜಾಮುದ್ದೀನ್ನ ಧಾರ್ಮಿಕ ಕೇಂದ್ರದಲ್ಲಿ ತಬ್ಲಿಘಿ ಜಮಾತ್ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 1,306 ವಿದೇಶಿಗರು ಸೇರಿ ಒಟ್ಟು 9 ಸಾವಿರ ಸದಸ್ಯರನ್ನು ಕ್ವಾರಂಟೇನ್ನಲ್ಲಿ ಇಟ್ಟಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
9 ಸಾವಿರ ಜನರಲ್ಲಿ 1,306 ಸದಸ್ಯರು ವಿದೇಶಿಗರಾಗಿದ್ದರೆ ಉಳಿದವರು ಭಾರತೀಯರಾಗಿದ್ದಾರೆ. ಇವರೆಲ್ಲರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಪತ್ತೆಯಾದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದೆ.
ಕ್ವಾರಂಟೇನ್ನಲ್ಲಿರುವ ಜಮಾತ್ನ ಕಾರ್ಯಕರ್ತರ ಪೈಕಿ ಅಂಡಮಾನ್ ಮತ್ತು ನಿಕೋಬಾರ್, ದೆಹಲಿ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ತೆಲಂಗಾಣ, ರಾಜಸ್ಥಾನ, ಆಂಧ್ರಪ್ರದೇಶ, ಅಸ್ಸಾಂ, ಉತ್ತರ ಪ್ರದೇಶ ಮತ್ತು ಪುದುಚೆರಿ ಅವರು ಸೇರಿದ್ದಾರೆ ಎಂದು ತಿಳಿಸಿದೆ.
ಇದೇ ವೇಳೆ, 250 ವಿದೇಶಿಗರು ಸೇರಿ ದೆಹಲಿಯಲ್ಲಿ ಒಟ್ಟು 2 ಸಾವಿರ ಜಮಾತ್ ಕಾರ್ಯಕರ್ತರು ಇದ್ದರು. ಇವರಲ್ಲಿ 1,804 ಜನರನ್ನು ಕ್ವಾರಂಟೇನ್ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಸೋಂಕಿನ ಕುರುಹು ಹೊಂದಿದ್ದ 302 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯಾ ಸಲೀಲಾ ಶ್ರೀವಾಸ್ತವ ಹೇಳಿದ್ದಾರೆ.
400 ಸೋಂಕಿತರು: ಇದುವರೆಗೂ ದೇಶದಾದ್ಯಂತ ಪತ್ತೆಯಾಗಿರುವ ಸೋಂಕಿತರ ಪೈಕಿ ನಿಜಾಮುದ್ದೀನ್ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿದ್ದ 400 ಜನರು ಸೇರಿದ್ದಾರೆ. ಹೆಚ್ಚುವರಿ ಪರೀಕ್ಷೆಗಳು ಮುಂದುವರಿದಿದ್ದು, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯದ ಮತ್ತೊಬ್ಬ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ.