ಲಖನೌ : ಎಂಟನೇ ತರಗತಿಯ ವಿದ್ಯಾಭ್ಯಾಸವನ್ನೂ ಮುಗಿಸದ ವ್ಯಕ್ತಿಯೊಬ್ಬ ಸಿಸೇರಿಯನ್ ಆಪರೇಷನ್ನಿಂದ ಹೆರಿಗೆ ಮಾಡಿಸಿದ ಪ್ರಸಂಗವೊಂದರಲ್ಲಿ ತಾಯಿ ಮಗು ಇಬ್ಬರೂ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ನಕಲಿ ವೈದ್ಯರು ಮತ್ತು ದಾದಿಯರೊಂದಿಗೆ ನಡೆಸಲಾಗುತ್ತಿದ್ದ ಖಾಸಗಿ ಕ್ಲಿನಿಕ್ನಲ್ಲಿ ಈ ಘಟನೆ ನಡೆದಿದೆ.
ಸುಲ್ತಾನಪುರ ಜಿಲ್ಲೆಯ ಸೈನಿ ಗ್ರಾಮದ ನಿವಾಸಿಯಾಗಿದ್ದ ಪೂನಮ್ ಮತ್ತು ಆಕೆಯ ಮಗು ಈ ದುರಂತ ಸಾವಿಗೀಡಾಗಿರುವ ನತದೃಷ್ಟರು. ನೋಂದಣಿಯಾಗದ ಮಾ ಶಾರದಾ ಆಸ್ಪತ್ರೆಯಲ್ಲಿ ಶೇವಿಂಗ್ ಬ್ಲೇಡ್ ಬಳಸಿ ಸಿ-ಸೆಕ್ಷನ್ ಮಾಡಿದ ರಾಜೇಂದ್ರ ಶುಕ್ಲ(30) ಎಂಬುವನನ್ನೂ, ಆಸ್ಪತ್ರೆ ಮಾಲೀಕ ರಾಜೇಶ್ ಸಹನಿಯನ್ನೂ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !
ಪೂನಮ್ ಅವರ ಪತಿ ರಾಜಾರಾಮ್ ವೈದ್ಯಕೀಯ ನಿರ್ಲಕ್ಷ್ಯದಿಂದ ನನ್ನ ಹೆಂಡತಿ-ಮಗು ಸತ್ತಿದ್ದಾರೆ ಎಂದು ಪೊಲೀಸ್ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗೆ ಹೆರಿಗೆನೋವು ಕಾಣಿಸಿಕೊಂಡಿದ್ದ ಪೂನಮ್ರನ್ನು ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಅಲ್ಲಿನ ನರ್ಸ್ ಒಬ್ಬಳು ಈ ಆಸ್ಪತ್ರೆಗೆ ಕಳುಹಿಸಿದ್ದಳು. ಅಲ್ಲಿ ‘ಶಸ್ತ್ರಚಿಕಿತ್ಸೆ’ ಮಾಡಿ ಮಗುವನ್ನು ಹೊರತೆಗೆದಾಗ ಆಕೆ ವಿಪರೀತ ರಕ್ತ ಕಳೆದುಕೊಂಡರೆ, ಹುಟ್ಟಿದ ಮಗು ಕೆಲವೇ ನಿಮಿಷಗಳಲ್ಲಿ ಸಾವಪ್ಪಿದೆ.
ಏನೂ ಸೌಕರ್ಯಗಳಿಲ್ಲದ ಆಸ್ಪತ್ರೆಯಲ್ಲಿನ ಆಪರೇಷನ್ ಟೇಬಲ್ನಲ್ಲಿ ರಕ್ತಹರಿಯುತ್ತಾ ಬಿದ್ದಿದ್ದ ಪೂನಮ್ರನ್ನು ನಂತರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಆರೋಪಿ ಶುಕ್ಲ ಹೇಳಿದ. ಕೂಡಲೇ ಲಖನೌನ ಟ್ರಾಮಾ ಕೇರ್ ಸೆಂಟರ್ಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವಪ್ಪಿದ್ದಾಳೆ ಎಂದು ಹೆಂಡತಿ-ಮಗು ಎರಡನ್ನೂ ಕಳೆದುಕೊಂಡ ರಾಜಾರಾಂ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸೇರಿದ ತೆರೆಯ ಮೇಲಿನ ‘ರಾಮ’
ಸುಲ್ತಾನಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ನೋಂದಣಿಯಿಲ್ಲದೆ ಕಾನೂನುಬಾಹಿರವಾಗಿ ನಡೆಯುತ್ತಿರುವ ಈ ತೆರನ ಕ್ಲಿನಿಕ್ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಖ್ಯ ವೈದ್ಯಾಧಿಕಾರಿಗೆ ಪತ್ರ ಬರೆದಿರುವುದಾಗಿ ಸುಲ್ತಾನಪುರ ಎಸ್ಪಿ ಅರವಿಂದ ಚತುರ್ವೇದಿ ಹೇಳಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಮಾಸ್ಕ್ ಹಾಕಿಲ್ಲ ಎಂದು ದಂಡ ಕೇಳಿದ ಮಾರ್ಷಲ್ಗೆ, ಹಿಗ್ಗಾ ಮುಗ್ಗಾ ಹೊಡೆದ ಮಹಿಳೆ
“ನನ್ನ ಹೆಲಿಕಾಪ್ಟರ್ ಕೆಟ್ಟಿತ್ತು… ಆದರೆ ನಾನದನ್ನು ಸಂಚು ಎನ್ನುವುದಿಲ್ಲ…”
‘ಧೂಮ್ ಆರ್ ಡೂಮಡ್ ?’ – ಬೈಕ್ ಸ್ಟಂಟ್ ಮಾಡುವ ಜನರಿಗೆ ಪೊಲೀಸರ ಪ್ರಶ್ನೆ