ನವದೆಹಲಿ: ಇಸ್ರೇಲ್ ಪರ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳಿಗೆ ಕತಾರ್ ದೇಶವು ಮರಣದಂಡನೆ ಶಿಕ್ಷೆಯನ್ನು ವಿಧಿಸಿರುವುದಾಗಿ ಗುರುವಾರ ವರದಿಯಾಗಿದ್ದು, ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಭಾರತೀಯ ವಿದೇಶಾಂಗ ಸಚಿವಲಾಯ ಪ್ರಕರಣವನ್ನು ಎದುರಿಸುವುದಾಗಿ ತಿಳಿಸಿದೆ.
ಒಂದು ಕಾಲದಲ್ಲಿ ಪ್ರಮುಖ ಭಾರತೀಯ ಯುದ್ಧನೌಕೆಗಳಿಗೆ ಕಮಾಂಡರ್ಗಳಾಗಿದ್ದ ಅಧಿಕಾರಿಗಳು ಸೇರಿದಂತೆ 8 ಮಂದಿಯು ಕತಾರ್ನ ಸಶಸ್ತ್ರ ಪಡೆಗಳಿಗೆ ತರಬೇತಿ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುವ ಖಾಸಗಿ ಸಂಸ್ಥೆಯಾದ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್ಗಾಗಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡಿಕೊಂಡೆ ಇಸ್ರೇಲ್ ಪರ ಬೇಹುಗಾರಿಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ 8 ಮಂದಿಯನ್ನು ಬಂಧಿಸಲಾಗಿತ್ತು.
ಅನೇಕ ಬಾರಿ ಅಧಿಕಾರಿಗಳ ವಿರುದ್ಧ ಜಾಮೀನು ಅರ್ಜಿ ತಿರಸ್ಕೃತಗೊಂಡು ಕತಾರಿ ಅಧಿಕಾರಿಗಳಿಂದ ಬಂಧನವೂ ಸಹ ವಿಸ್ತರಣೆಯಾಗುತ್ತಿತ್ತು. ಆದರೆ, ಇಂದು ಕತಾರ್ನ ಪ್ರಥಮ ನಿದರ್ಶನದ ನ್ಯಾಯಾಲಯವು ತೀರ್ಪು ನೀಡಿದ್ದು, 8 ಅಧಿಕಾರಿಗಳಿಗೂ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ.
ಶಿಕ್ಷೆಗೆ ಒಳಗಾಗದ ಅಧಿಕಾರಿಗಳನ್ನು ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ಗಳಾದ ಬೀರೇಂದ್ರ ಕುಮಾರ್ ವರ್ಮಾ ಮತ್ತು ಸೌರಭ್ ವಶಿಷ್ಠ, ಕಮಾಂಡರ್ಗಳಾದ ಅಮಿತ್ ನಾಗ್ಪಾಲ್, ಪೂರ್ಣೆಂದು ತಿವಾರಿ, ಸುಗುಣಾಕರ್ ಪಾಕಲಾ, ಸಂಜೀವ್ ಗುಪ್ತ ಮತ್ತು ನಾವಿಕ ರಾಗೇಶ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದ್ದು, ಮರಣದಂಡನೆ ತೀರ್ಪಿನಿಂದ ಆಘಾತವಾಗಿರುವುದಾಗಿ ತಿಳಿಸಿದೆ. ಅಲ್ಲದೆ, ಸಂಪೂರ್ಣ ತೀರ್ಪುನ್ನು ಎದುರು ನೋಡುತ್ತಿರುವುದಾಗಿ ಹೇಳಿದೆ. ನಾವು ಮಾಜಿ ಅಧಿಕಾರಿಗಳ ಕುಟುಂಬದ ಸದಸ್ಯರು ಮತ್ತು ಕಾನೂನು ತಂಡದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ನಮ್ಮ ಮುಂದಿರುವ ಎಲ್ಲ ಕಾನೂನು ಆಯ್ಕೆಗಳನ್ನು ವಿಶ್ಲೇಷಿಸುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಈ ಪ್ರಕರಣಕ್ಕೆ ಬಹಳ ಮಹತ್ವವನ್ನು ನೀಡುತ್ತೇವೆ ಮತ್ತು ಬಹಳ ಹತ್ತಿರದಿಂದ ಪ್ರಕರಣವನ್ನು ಅನುಸರಿಸುತ್ತೇವೆ. ನಾವು ಎಲ್ಲ ಕಾನ್ಸುಲರ್ ಮತ್ತು ಕಾನೂನು ಸಹಾಯವನ್ನು ವಿಸ್ತರಿಸುವುದನ್ನು ಮುಂದುವರಿಸುತ್ತೇವೆ ಮತ್ತು ಕತಾರ್ ಅಧಿಕಾರಿಗಳೊಂದಿಗೆ ತೀರ್ಪಿನ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಜಲಾಂತರ್ಗಾಮಿ ಪ್ರೊಗ್ರಾಮ್ ಮೇಲೆ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಆರೋಪಿಗಳು ಆಗಸ್ಟ್ 2022 ರಿಂದ ಕತಾರ್ ಜೈಲಿನಲ್ಲಿದ್ದಾರೆ. ಅವರ ಬಿಡುಗಡೆಗಾಗಿ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಕಳೆದ ಮಾರ್ಚ್ ತಿಂಗಳಲ್ಲಿ 8 ಮಂದಿಯು ವಿಚಾರಣೆ ಎದುರಿಸಿದ್ದರು. (ಏಜೆನ್ಸೀಸ್)
ಕಾಂಗ್ರೆಸ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯನ ಕೊರಳಲ್ಲೂ ಹುಲಿ ಉಗುರು ಮಾದರಿ ಪೆಂಡೆಂಟ್!
ಸವಾಲು ಸ್ವೀಕರಿಸಿದ್ದೇನೆ ಯಾವುದೇ ದೇವಸ್ಥಾನಕ್ಕೂ ಬರಲು ರೆಡಿ: ನೀವೂ ಬನ್ನಿ ಎಂದು ಡಿಕೆಶಿಗೆ ಎಚ್ಡಿಕೆ ಪ್ರತಿ ಸವಾಲು