ಹುಬ್ಬಳ್ಳಿ: ನಗರದಲ್ಲಿ ಮಾರುಕಟ್ಟೆಗಳು ಬಂದ್ ಆಗಿ, ಅಂಗಡಿಗಳು ಮುಚ್ಚಿದ್ದರೂ ಜನರ ಓಡಾಟ ಮಾತ್ರ ಲಾಕ್ಡೌನ್ ಅನ್ನೇ ಅಣಕಿಸುವಂತಿತ್ತು.
ಬೈಕ್, ಆಟೊ, ಕಾರು, ಪಾದಚಾರಿಗಳ ಸಂಚಾರ ಲಾಕ್ಡೌನ್ ಮಧ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನತಾ ಬಜಾರ, ಎಂ.ಜಿ. ಮಾರ್ಕೆಟ್ಗಳನ್ನು ಬಂದ್ ಮಾಡಲಾಗಿದ್ದರೂ ಬಹುತೇಕ ಬಡಾವಣೆಗಳಲ್ಲಿ ಜನರು ತರಕಾರಿ, ಹಣ್ಣುಗಳನ್ನು ಗುಂಪುಗೂಡಿ ಖರೀದಿಸುವುದು ಮಂಗಳವಾರವೂ ಮುಂದುವರಿದಿತ್ತು.
ಮುಖ್ಯ ರಸ್ತೆ, ಒಳ ರಸ್ತೆಗಳಲ್ಲಿ ಲಾಕ್ಡೌನ್ ನಿಯಮ ಗಾಳಿಗೆ ತೂರಿ ವಾಹನ ಸಂಚಾರ ಹೆಚ್ಚುತ್ತಿದ್ದರೂ ಪೊಲೀಸರು ತಮಗೇನೂ ಸಂಬಂಧವೇ ಇಲ್ಲವೆನ್ನುವಂತೆ ಕುಳಿತಿರುವುದು ಕುತೂಹಲ ಮೂಡಿಸುವಂತಿತ್ತು. ಕಳೆದ ನಾಲ್ಕೈದು ದಿನಗಳಿಂದ ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳದಿರುವುದು ವಾಹನ ಸವಾರರಿಗೆ ಮತ್ತಷ್ಟು ಪ್ರಚೋದನೆ ನೀಡುವಂತಾಗಿದೆ.
ಈ ಮಧ್ಯೆ ಪಿಂಚಣಿ ಪಡೆಯುವುದಕ್ಕಾಗಿ ಬ್ಯಾಂಕ್ ಹಾಗೂ ಎಟಿಎಂಗಳಿಗೆ ಹೋಗುವ ಹಿರಿಯ ನಾಗರಿಕರ ಸಂಖ್ಯೆಯೂ ಹೆಚ್ಚುತ್ತಿದೆ. ನಗರದ ವಿವಿಧ ಬ್ಯಾಂಕ್ ಹಾಗೂ ಎಟಿಎಂಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಿರಿಯ ನಾಗರಿಕರು ಸರದಿಯಲ್ಲಿ ನಿಂತಿದ್ದು ಕಂಡುಬಂದಿತು.
ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಂಡು ನಿಲ್ಲುವಂತೆ ಬ್ಯಾಂಕ್ನ ಭದ್ರತಾ ಸಿಬ್ಬಂದಿ ಹಲವು ಬಾರಿ ಸೂಚನೆ ನೀಡುತ್ತಿದ್ದರೂ, ಗ್ರಾಹಕರು ಮಾತ್ರ ಇದಾವುದೂ ತಮಗೆ ಕೇಳಿಯೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದರು.
ಎಸ್ಬಿಐ ಕೇಶ್ವಾಪುರ ಮುಖ್ಯ ಶಾಖೆಯಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಉದ್ದೇಶದಿಂದ ಮಧ್ಯದ ಕುರ್ಚಿಯಲ್ಲಿ ಯಾರೂ ಕೂಡದಂತೆ ದಾರ ಕಟ್ಟಲಾಗಿತ್ತು.
ಧಾರವಾಡದಲ್ಲಿ: ವಿದ್ಯಾಕಾಶಿಯಲ್ಲಿ ಹಲವು ಕಡೆ ಲಾಕ್ಡೌನ್ ಅರ್ಥ ಕಳೆದುಕೊಂಡಿದೆ. ದಿನಸಿ, ತರಕಾರಿ ಮತ್ತಿತರ ಅಗತ್ಯ ವಸ್ತು ಖರೀದಿಸುವಾಗ ಹಲವರು ಸಂಯಮ ತೋರದೇ ಇರುವುದರಿಂದ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಕೆಲಸವಿಲ್ಲದಿದ್ದರೂ ಬೈಕ್ನಲ್ಲಿ ಸುತ್ತಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಅಂಥವರಿಗೆ ಹೇಳಿ ಹೇಳಿ ಸುಸ್ತಾಗಿರುವ ಪೊಲೀಸರು ಅಲ್ಲಲ್ಲಿ ತಡೆದು ವಾಹನದ ದಾಖಲೆ ಪರಿಶೀಲಿಸುತ್ತಿದ್ದಾರೆ. ಆರಂಭದಲ್ಲಿಯಂತೆ ಲಾಠಿ ಏಟು ಕೊಟ್ಟು ಓಡಿಸುವುದನ್ನು ಪೊಲೀಸರು ಬಹುತೇಕ ಕೈಬಿಟ್ಟಿದ್ದಾರೆ.