More

    ಇಂದು ಡಾ.ಹೆಗ್ಗಡೆ 73ನೇ ಜನ್ಮದಿನ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸರಳ ಆಚರಣೆ

    ಬೆಳ್ತಂಗಡಿ: ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 73ನೇ ಹುಟ್ಟುಹಬ್ಬ ಸರಳವಾಗಿ ನ.25ರಂದು ಶ್ರೀಕ್ಷೇತ್ರದಲ್ಲಿ ನೆರವೇರಲಿದ್ದು, ಕುಟುಂಬಸ್ಥರು, ಬಂಧುಗಳು, ಆಪ್ತರು, ಅಭಿಮಾನಿಗಳು, ಭಕ್ತರು ಗೌರವ ಸಲ್ಲಿಸಲಿದ್ದಾರೆ.

    ಹಿಂದಿನ ಧರ್ಮಾಧಿಕಾರಿಯಾಗಿದ್ದ ರತ್ನವರ್ಮ ಹೆಗ್ಗಡೆ- ರತ್ನಮ್ಮ ದಂಪತಿಯ ಜೇಷ್ಠ ಪುತ್ರರಾಗಿ 1948ರ ನ.25ರಂದು ಜನಿಸಿದ ವೀರೇಂದ್ರ ಹೆಗ್ಗಡೆಯವರು, 1968ರ ಅ.24ರಂದು 20ನೇ ವಯಸ್ಸಿನಲ್ಲಿ ಕ್ಷೇತ್ರದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು.
    ಈ 52 ವರ್ಷಗಳಲ್ಲಿ ಅವರು ತಂದ ಜನಪರ ಕಾರ್ಯಕ್ರಮಗಳಿಂದ ಕ್ಷೇತ್ರದ ಖ್ಯಾತಿ ಜನ-ಮನಕ್ಕೆ ಮುಟ್ಟಿದೆ. ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ಧರ್ಮಸ್ಥಳ ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ, ಮಾನ್ಯತೆ ಪಡೆಯಲು ಡಾ.ಹೆಗ್ಗಡೆಯವರ ಆಡಳಿತ ವೈಖರಿ, ಅನುಪಮ ಸೇವೆ, ಧರ್ಮ ಮತ್ತು ಪರಂಪರೆಯ ರಕ್ಷಣೆಯೊಂದಿಗೆ ವಿಜ್ಞಾನ ಹಾಗೂ ತಂತ್ರಜ್ಞಾನ ಬಳಕೆ ಕಾರಣವಾಗಿದೆ.

    1982ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭಿಸಿ ಗ್ರಾಮಾಭಿವೃದ್ಧಿಯ ಕನಸನ್ನು ಸಾಕಾರಗೊಳಿಸಿರುವುದು, ಜಾತಿ- ಮತ- ಪಂಥದ ಬಂಧನದಲ್ಲಿದ್ದ ಸಮಾಜಕ್ಕೆ ವಿದ್ಯೆಯೊಂದೇ ದಾರಿದೀಪ ಎಂದು ಮನಗಂಡು ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು ನೀಡಿರುವುದು, ರಾಜ್ಯಾದ್ಯಂತ ಜಲಮರುಪೂರಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿ, ಸ್ವಚ್ಛ ಭಾರತ್ ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ವರ್ಷಕ್ಕೆ ಎರಡು ಬಾರಿ ಶ್ರದ್ಧಾಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನ, ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರಗಳ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆ, ಕ್ಷೇತ್ರದಲ್ಲಿ 39 ಅಡಿ ಎತ್ತರದ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ, ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹ, ಐತಿಹಾಸಿಕ ದೇಗುಲಗಳು ಹಾಗೂ ಸ್ಮಾರಕಗಳ ಜೀರ್ಣೋದ್ಧಾರ ಮತ್ತು ಸಂರಕ್ಷಣೆ, ಭಜನಾ ಕಮ್ಮಟ, ಮದ್ಯವರ್ಜನ ಶಿಬಿರ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಗೆ ಪ್ರೋತ್ಸಾಹ, ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅನುಷ್ಠಾನ, 2010ರಲ್ಲಿ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ ಸಂಘಟನೆ ಹೆಗ್ಗಡೆಯವರು ಕೈಗೊಂಡ ಸಮಾಜಮುಖಿ ಕಾರ್ಯಕ್ರಮಗಳ ಕಿರುಪರಿಚಯ.

    ವಾತ್ಸಲ್ಯ ಕಿಟ್ ವಿತರಣೆ: ವೀರೇಂದ್ರ ಹೆಗ್ಗಡೆಯವರ 73ನೇ ಹುಟ್ಟುಹಬ್ಬ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮಾಜ ಬಾಂಧವರಿಗೆ ಸಹಾಯಹಸ್ತ ನೀಡುವ ‘ವಾತ್ಸಲ್ಯ’ ಕಾರ್ಯಕ್ರಮದ ರಾಜ್ಯಾದ್ಯಂತ ವಿತರಿಸಲ್ಪಡುವ ವಾತ್ಸಲ್ಯ ಕಿಟ್ ಸಾಗಿಸುವ ಟ್ರಕ್‌ಗಳಿಗೆ ದೇವಸ್ಥಾನದ ಮುಂಭಾಗದಲ್ಲಿ ಬುಧವಾರ ಚಾಲನೆ ನೀಡಲಾಗುವುದು. ಹೆಗ್ಗಡೆಯವರು ಅಧ್ಯಕ್ಷತೆ ವಹಿಸಲಿದ್ದು, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮಗಳ ಅಧ್ಯಕ್ಷೆ ಹೇಮಾವತಿ ವಿ.ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್, ಡಾ.ಬಿ.ಯಶೋವರ್ಮ, ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ವಿ.ರಾಮಸ್ವಾಮಿ ಭಾಗವಹಿಸುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts