ವಿಜಯಪುರ: ರಾಜ್ಯದ ಎರಡು ಕಡೆ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ 71 ದನ ಹಾಗೂ 13 ಒಂಟೆಗಳನ್ನು ರಕ್ಷಣೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳ ಬಳಿ ಹಸುಗಳ ರಕ್ಷಣೆ ನಡೆದಿದ್ದರೆ, ಬೆಂಗಳೂರಿನಲ್ಲಿ ಒಂಟೆಗಳ ರಕ್ಷಣೆ ಮಾಡಲಾಗಿದೆ.
ವಿಜಯಪುರದ ಇಟ್ಟಂಗಿಹಾಳ ಬಳಿ ಕಲ್ಲಿನ ಖಣಿಯ ಆಳವಾದ ನಿರ್ಜನ ಪ್ರದೇಶದಲ್ಲಿ ಕಟ್ಟಲಾಗಿದ್ದ ಆಕಳು ಹಾಗೂ ಕರುಗಳನ್ನು ಪ್ರಾಣಿದಯಾ ಸಂಘದವರು ಹಾಗೂ ಪೊಲೀಸರು ಜತೆಯಾಗಿ ತೆರಳಿ ರಕ್ಷಣೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಪ್ರಾಣೇಶ ಜಹಾಗಿರದಾರ, ಮಹಾನಗರ ಪಾಲಿಕೆ ಪಶುಸಂಗೋಪನೆ ಅಧಿಕಾರಿ ಪ್ರಕಾಶ ಗೂಳಪ್ಪಗೋಳ, ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ರಕ್ಷಣೆ ಮಾಡಲಾಗಿರುವ ಎಲ್ಲ ದನ-ಕರುಗಳನ್ನು ಗೋಶಾಲೆಗೆ ಸಾಗಿಸಲಾಗಿದ್ದು, ಹಲವರನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ಹೆಚ್ಚಿನ ತನಿಖೆಗಾಗಿ ಬಂಧಿತರ ವಿಚಾರಣೆ ಮುಂದುವರಿದಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ರಾಜಸ್ಥಾನದಿಂದ ಬೆಂಗಳೂರಿಗೆ ತರಲಾಗಿದ್ದ 13 ಒಂಟೆಗಳನ್ನು ಬೆಂಗಳೂರಿನಲ್ಲಿ ರಕ್ಷಣೆ ಮಾಡಲಾಗಿದೆ. ಬೆಂಗಳೂರಿನ ನಾನಾ ಭಾಗದಲ್ಲಿ ದಾಳಿ ಮಾಡಿದ ಬಿಬಿಎಂಪಿ ಹಾಗೂ ರಕ್ಷಣಾ ತಂಡದ ಸಿಬ್ಬಂದಿ 13 ಒಂಟೆಗಳನ್ನು ರಕ್ಷಣೆ ಮಾಡಿದ್ದಾರೆ. ಈ ಪೈಕಿ 2 ಒಂಟೆಗಳು ಸಾವಿಗೀಡಾಗಿದ್ದು, ಇನ್ನು 11 ಒಂಟೆಗಳನ್ನು ಮಹದೇವಪುರದ ಗೋಶಾಲೆಯಲ್ಲಿ ಇರಿಸಲಾಗಿದೆ. ಬಕ್ರೀದ್ ಸಂದರ್ಭದಲ್ಲಿ ಬಲಿ ಕೊಡಲೆಂದು ಇವುಗಳನ್ನು ತರಿಸಿಕೊಳ್ಳಲಾಗಿದೆ ಎಂಬ ಆರೋಪವಿದ್ದು, ಬಚ್ಚಿಟ್ಟಿದ್ದಾರೆ ಎನ್ನಲಾಗಿರುವ ಇನ್ನಷ್ಟು ಒಂಟೆಗಳ ಪತ್ತೆ ಕುರಿತು ಕಾರ್ಯಾಚರಣೆ ಮುಂದುವರಿದಿದೆ.
ಇವರು ಸಾಮಾನ್ಯ ಖದೀಮರಲ್ಲ; ಒಂದೇ ಖಾತೆಗೆ 102 ಬಾರಿ ಕನ್ನ ಹಾಕಿದ್ದರು, ತಮ್ಮದೇ ಹೆಸರಲ್ಲಿ 50 ಖಾತೆ ತೆರೆದಿದ್ದರು!
ಉಡುಪಿ ವಿಶಾಲಾ ಗಾಣಿಗ ಕೊಲೆ ಪ್ರಕರಣ: ಪತಿ ರಾಮಕೃಷ್ಣ ಹಾಗೂ ಬಾಡಿಗೆ ಹಂತಕನೊಬ್ಬನ ಬಂಧನ; ಇನ್ನೊಬ್ಬನಿಗಾಗಿ ಶೋಧ..