ಚೆನ್ನೈ: ಬಡ ದಂಪತಿ ಬಳಿ ಮಕ್ಕಳನ್ನು ಖರೀದಿ ಮಾಡಿ ಮಾರಾಟ ಮಾಡುತ್ತಿದ್ದ ವೈದ್ಯೆಯನ್ನು ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಬಂಧಿತ ವೈದ್ಯೆಯನ್ನು ಅನುರಾಧ ಎಂದು ಗುರುತಿಸಲಾಗಿದೆ. ಈಕೆ ನಾಮಕಲ್ನ ತಿರುಚೆಂಗೋಡ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಳಾಗಿ ಸೇವೆ ಸಲ್ಲಿಸುತ್ತಿದ್ದರು. ಆಕೆಯ ಸಹಾಯಕಿ ಲೋಕಂಬಲ್ ಎಂಬಾಕೆಯನ್ನು ಸಹ ಬಂಧಿಸಲಾಗಿದೆ. 49 ವರ್ಷದ ಅನುರಾಧಾ, ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುತ್ತಿದ್ದ ಬಡವರನ್ನೇ ಟಾರ್ಗೆಟ್ ಮಾಡುತ್ತಿದ್ದಳು.
ಇಬ್ಬರು ಮಕ್ಕಳಿರುವ ತಾಯಿಯ ಬಳಿ ತನ್ನ ಸಹಾಯಕಿ ಲೋಕಂಬಾಲ್ಳನ್ನು ವೈದ್ಯೆ ಕಳುಹಿಸುತ್ತಿದ್ದಳು. ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ತಾಯಂದಿರು ದುಡ್ಡಿಗಾಗಿ ಮಕ್ಕಳನ್ನು ಮಾರುತ್ತಿದ್ದರು. ಮಕ್ಕಳನ್ನು ಖರೀದಿಸುತ್ತಿದ್ದ ವೈದ್ಯೆ, ಸ್ವಲ್ಪ ಸಮಯದ ಬಳಿಕ ಮಕ್ಕಳನ್ನು ಹಣವಂತರಿಗೆ ಮತ್ತು ಅಗತ್ಯ ಇರುವವರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಈವರೆಗೂ 7 ಮಕ್ಕಳನ್ನು ಮಾರಾಟ ಮಾಡಿರುವುದಾಗಿ ಆರೋಪಿ ವೈದ್ಯೆ ಅನುರಾಧಾ ತಪ್ಪೊಪ್ಪಿಕೊಂಡಿದ್ದಾಳೆ.
ತಮ್ಮ ನವಜಾತ ಶಿಶುವಿನ ಆರೋಗ್ಯ ಸರಿಯಿಲ್ಲದ ಕಾರಣ ಅ.12ರಂದು ದಿನೇಶ್ ಮತ್ತು ನಾಗಜ್ಯೋತಿ ದಂಪತಿ ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಲೋಕಂಬಲ್ ಅವರ ಬಳಿ ಮಗು ಮಾರಾಟದ ಕುರಿತು ಮಾತನಾಡುತ್ತಿದ್ದರು. ಇದರಿಂದ ಅನುಮಾನಗೊಂಡ ದಂಪತಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದಾಗ, ವೈದ್ಯೆ ಅನುರಾಧ ಮತ್ತು ಲೋಕಂಬಲ್ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿಗಳಿಬ್ಬರು ಅಂಗಾಂಗ ಕಳ್ಳಸಾಗಾಣೆಯಲ್ಲೂ ತೊಡಗಿರುವ ಸುಳಿವು ಸಹ ಸಿಕ್ಕಿದೆ. ಇಬ್ಬರು ಜಾಲ ಬೇರೆ ಆಸ್ಪತ್ರೆಗೂ ಹಬ್ಬಿದ್ದು, ತಿರುಚಿರಪಲ್ಲಿ ಮತ್ತು ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಯ ಕೆಲ ಸಿಬ್ಬಂದಿಯೂ ಸಹ ಆರೋಪಿಗಳಿಗೆ ಸಹಾಯ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತಮಿಳುನಾಡಿನ ಆರೋಗ್ಯ ಸಚಿವರು ಅನುರಾಧಾಳನ್ನು ಕೆಲಸದಿಂದಲೇ ವಜಾಗೊಳಿಸಿದ್ದಾರೆ. ಅಲ್ಲದೆ. ಇಡೀ ಪ್ರಕರಣದ ತನಿಖೆಗೆಂದು ವಿಶೇಷ ತನಿಖಾ ತಂಡವೊಂದನ್ನು ನೇಮಿಸಿದ್ದಾರೆ.
ನಾಮಕ್ಕಲ್ ಜಿಲ್ಲಾ ಕಲ್ಯಾಣ ಜಂಟಿ ನಿರ್ದೇಶಕ ರಾಜಮೋಹನ್ ನೇತೃತ್ವದಲ್ಲಿ ತಿರುಚೆಂಗೋಡ್ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಯಿತು. ಕೆಲವು ವರ್ಷಗಳ ಹಿಂದೆ ಸೇಲಂ ಮತ್ತು ಈರೋಡ್ ಜಿಲ್ಲೆಗಳಲ್ಲಿ ನವಜಾತ ಶಿಶುಗಳನ್ನು ಮಾರಾಟ ಮಾಡುತ್ತಿದ್ದ ಕೆಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗಲೇ ಶಿಶುಗಳನ್ನು ಮಾರಾಟ ಮಾಡುತ್ತಿದ್ದ ಮತ್ತೊಬ್ಬ ಮಹಿಳಾ ವೈದ್ಯೆಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್)
ಸಲಿಂಗಿಗಳ ಹಕ್ಕುಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನಗಳೇನು?
ಬಿಗ್ ಬಾಸ್ ಮನೆಯಲ್ಲಿ ಹೊಸದೊಂದು ಲವ್ ಸ್ಟೋರಿ; ಸಂಗೀತಾ – ಕಾರ್ತಿಕ್ ಮಧ್ಯೆ ಸ್ನೇಹನಾ ಪ್ರೀತಿನಾ?