ಒಂದು ಕಾಲಕ್ಕೆ ಬಾಲಿವುಡ್ ಎಂದರೆ ಅಲ್ಲಿ ಬರೀ ಮಸಾಲ, ಪಕ್ಕಾ ಕಮರ್ಷಿಯಲ್ ಮತ್ತು ಸೇಡಿನ ಚಿತ್ರಗಳೇ ಹೆಚ್ಚು ಬರುತ್ತಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ ಪಥ ಬದಲಿಸಿದೆ. ದೇಶಪ್ರೇಮ ಸಾರುವ, ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ, ಯುದ್ಧದಲ್ಲಿ ಹೋರಾಡಿ ಮಡಿದ ವೀರಯೋಧರ, ಕ್ರೀಡಾ ದಿಗ್ಗಜರ, ಬೇರೆ ಬೇರೆ ಕ್ಷೇತ್ರಗಳ ಸಾಧಕರ, ನೈಜ ಘಟನೆಗಳ ಆಧಾರಿತ ಚಿತ್ರಗಳತ್ತ ಗಮನ ಹರಿಸಿದೆ.
ಕಳೆದ ನಾಲ್ಕು ವರ್ಷಗಳಿಂದ ಬಾಲಿವುಡ್ನಲ್ಲಿ 50ಕ್ಕೂ ಹೆಚ್ಚು ಬಯೋಪಿಕ್ಗಳು ಬಿಡುಗಡೆ ಆಗಿದ್ದು, ಅವುಗಳಲ್ಲಿ 20 ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿವೆ. 2018ರಲ್ಲಿ ಎಂಟು, 2019ರಲ್ಲಿ 16 ನೈಜ ಘಟನೆ ಆಧಾರಿತ ಚಿತ್ರಗಳು ಬಿಡುಗಡೆಯಾಗಿದ್ದವು. 2020 ಹಾಗೂ 2021ರಲ್ಲಿ ಕರೋನಾ, ಲಾಕ್ಡೌನ್ ಅಬ್ಬರದ ನಡುವೆಯೂ ಒಂಬತ್ತು ಹಾಗೂ 15 ಬಯೋಪಿಕ್ ಮತ್ತು ನೈಜ ಘಟನೆ ಆಧಾರಿತ ಚಿತ್ರಗಳು ರಿಲೀಸ್ ಆಗಿದ್ದವು.
ಇನ್ನು, ‘ಗಂಗೂಬಾಯಿ ಕಾಥಿಯಾವಾಡಿ’ ಎಂಬ ಬಯೋಪಿಕ್ ಮೂಲಕವೇ ಈ ವರ್ಷ ಪ್ರಾರಂಭವಾಯಿತು. ನಂತರದ ದಿನಗಳಲ್ಲಿ ‘ಝುುಂಡ್’, ‘ತುಳಸೀದಾಸ್ ಜೂನಿಯರ್’, ‘ದಿ ಕಾಶ್ಮೀರ್ ಫೈಲ್ಸ್’, ‘ಕೌನ್ ಪ್ರವೀಣ್ ತಾಂಬೆ’, ‘ಹುರದಂಗ್’, ‘ರನ್ವೇ 34’, ‘ಹೇಮೋಲಿಂಫ್ – ಇನ್ವಿಸಿಬಲ್ ಬ್ಲಡ್’, ‘ಸಾಮ್ರಾಟ್ ಪೃಥ್ವಿರಾಜ್’, ‘ಮೇಜರ್’, ‘ರಾಕೆಟ್ರಿ – ದಿ ನಂಬಿ ಎಫೆಕ್ಟ್’, ‘ಶಭಾಷ್ ಮಿಥು’ ಸೇರಿದಂತೆ ಈಗಾಗಲೇ ಕಳೆದ ಎಂಟು ತಿಂಗಳಲ್ಲಿ 10ಕ್ಕೂ ಹೆಚ್ಚು ನೈಜ ಘಟನೆ ಆಧಾರಿತ ಚಿತ್ರಗಳು ಬಿಡುಗಡೆಯಾಗಿದ್ದು, ಇನ್ನೂ ಏಳೆಂಟು ತೆರೆಗೆ ಬರಲು ಸಿದ್ಧತೆ ನಡೆಯುತ್ತಿದೆ.
ದೊಡ್ಡ ಸ್ಟಾರ್ ಸಿನಿಮಾಗಳು ಮಕಾಡೆ ಮಲಗುತ್ತಿದ್ದರೂ ‘ದಿ ಕಾಶ್ಮೀರ್ ಫೈಲ್ಸ್’, ‘ರಾಕೆಟ್ರಿ’ಯಂತಹ ಕಡಿಮೆ ಬಜೆಟ್ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ನೂರಿನ್ನೂರು ಕೋಟಿ ಬಾಚಿಕೊಂಡಿವೆ. ಹೀಗಾಗಿಯೇ ಬಾಲಿವುಡ್ ಮಂದಿ ಈಗ ಬಯೋಪಿಕ್ಗಳು, ನೈಜ ಘಟನೆ ಆಧಾರಿತ ಚಿತ್ರಗಳತ್ತ ಮುಖ ಮಾಡಿದ್ದಾರೆ. ಸದ್ಯ ‘ಸ್ವತಂತ್ರವೀರ್ ಸಾವರ್ಕರ್’, ‘ದಿ ಗುಡ್ ಮಹಾರಾಜ’, ‘ಎಮರ್ಜೆನ್ಸಿ’, ‘ಸ್ಯಾಮ್ ಬಹದ್ದೂರ್’, ‘ಗೋರ್ಖಾ’, ‘ಕ್ಯಾಪ್ಸೂಲ್ ಗಿಲ್’, ‘ತೇಜಸ್’, ‘ಪಿಪ್ಪಾ’, ‘ಮೈದಾನ್’, ‘ಚಕ್ಡಾ ಎಕ್ಸ್ಪ್ರೆಸ್’, ‘ಶ್ರೀಕಾಂತ್ ಬೊಳ್ಳ’, ‘ದಿ ಡೆಲ್ಲಿ ಫೈಲ್ಸ್’, ‘ಸ್ಟಾರ್ಟಪ್’, ‘ಜೋಗಿ’ ಚಿತ್ರಗಳಲ್ಲದೆ ಯುವರಾಜ್ ಸಿಂಗ್, ಕ್ಯಾಪ್ಟನ್ ಗೋಪಿನಾಥ್, ಉಷಾ ಮೆಹ್ತಾ, ಡಾ. ಚಂಪಕರಾಮನ್ ಪಿಳ್ಳೈ… ಸೇರಿದಂತೆ ಇನ್ನೂ ಹಲವಾರು ಬಯೋಪಿಕ್ಗಳು ಮತ್ತು ನೈಜ ಘಟನೆಗಳನ್ನಾಧರಿಸಿದ ಚಿತ್ರಗಳು ತೆರೆಗೆ ಬರುವ ಸಾಧ್ಯತೆಯಿದೆ.
ಬೇರೆ ಕಥೆಗಳಿಗೆ ಹೋಲಿಸಿದರೆ ಬಯೋಪಿಕ್ಗಳ ಸಕ್ಸಸ್ ರೇಟ್ ಕೂಡ ಹೆಚ್ಚಿರುವ ಕಾರಣ, ವರ್ಷದಿಂದ ವರ್ಷಕ್ಕೆ ಬಯೋಪಿಕ್, ನೈಜ ಘಟನೆ ಆಧಾರಿತ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ. ಆ ಮೂಲಕ ಒಂದೊಳ್ಳೆಯ ಬದಲಾವಣೆಗೆ ಬಾಲಿವುಡ್ ಮುನ್ನುಡಿ ಬರೆದಿದೆ.
ಮುರುಘಾ ಮಠದ ಶ್ರೀಗಳ ಬಂಧನ: ಚಿತ್ರದುರ್ಗ-ದಾವಣಗೆರೆ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್
ಚೌತಿ ಮೆರವಣಿಗೆ ವೇಳೆ ಮಸೀದಿ ಆವರಣಕ್ಕೆ ಬಣ್ಣ ಎರಚಿದ ಯೋಧ; ಸೈನಿಕನ ಬಂಧನ, ಪ್ರಕರಣ ದಾಖಲು..