ಬೆಂಗಳೂರು: ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಮಾಹಿತಿ ಮೇರೆಗೆ ನಗರದ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿಗಳು ಹಲವಾರು ರೋಚಕ ಸಂಗತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಸುಲ್ತಾನ್ ಪಾಳ್ಯಕ್ಕೆ ಬಂದಿದ್ದ ಶಂಕಿತರು ಪೇಂಟಿಂಗ್ ಕೆಲಸ ಮಾಡುತ್ತೇವೆ ಎಂದು ಹೇಳಿದ್ದ ಆರೋಪಿಗಳು ಬೆಂಗಳೂರಿನ ಸುಲ್ತಾನ್ ಪಾಳ್ಯದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡಿದ್ದರು. ಹಿಂದುಗಳ ಮನೆಯಲ್ಲಿ ವಾಸವಾಗಿದ್ದ ಶಂಕಿತರು 6 ಸಾವಿರ ರೂ. ಮನೆ ಬಾಡಿಗೆ, 50 ಸಾವಿರ ರೂ. ಅಡ್ವಾನ್ಸ್ ಆಗಿ ಕೇಳಿದ್ದ ಮನೆ ಮಾಲೀಕರಿಗೆ ಬಾಡಿಗೆಯನ್ನು ಮಾತ್ರ ಕೊಟ್ಟಿದ್ದರು. ಆದರೆ ಅಡ್ವಾನ್ಸ್ನ್ನು ಕೊಟ್ಟಿರಲಿಲ್ಲ. ಅಲ್ಲದೇ ಆರೋಪಿಗಳು ಅನುಮಾನ ಬರುವ ರೀತಿಯಲ್ಲಿ ನಡೆದುಕೊಂಡಿದ್ದಿಲ್ಲ.
ಇದನ್ನೂ ಓದಿ: ವಿರೋಧ ಪಕ್ಷಗಳಿಂದ I.N.D.I.A. ಹೆಸರಿನ ಬಳಕೆ: ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಿಜೆಪಿ ನಾಯಕ
ಐವರೂ ಕೂಡ ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗುವುದಕ್ಕೆ ಸಂಚು ರೂಪಿಸಿದ್ದರು. ವಿಚಾರಣೆ ವೇಳೆಯೂ ಆರೋಪಿಗಳು ಒಪ್ಪಿಕೊಂಡಿದ್ದಾರೆ. 2008ರ ಸರಣಿ ಬಾಂಬ್ ಸ್ಫೋಟದ ರೂವಾರಿ ನಾಸಿರ್ ಮತ್ತು 2017ರ ಕೇಸ್ನ ಮುಖ್ಯ ಆರೋಪಿ ಈ ಐದು ಜನರಿಗೆ ತರಬೇತಿ ಕೊಟ್ಟಿದ್ದಾರೆ. ಮುಖ್ಯ ಆರೋಪಿ ವಿದೇಶಕ್ಕೆ ಎಸ್ಕೇಪ್ ಆಗಿದ್ದಾನೆ. ವಿಧ್ವಂಸಕ ಕೃತ್ಯ ಎಸಗುವುದಕ್ಕೆ ಇವರು ಏನೆಲ್ಲಾ ಪ್ಲ್ಯಾನ್ ಮಾಡಿಕೊಂಡಿದ್ದರು ಎಂಬುದನ್ನು ತಿಳಿಯಲು ತನಿಖೆ ಮಾಡಲಾಗುತ್ತದೆ. ಆರೋಪಿಗಳನ್ನು 15 ದಿನ ಕಸ್ಟಡಿಗೆ ಪಡೆಯಲಾಗಿದೆ.
ಸಿಸಿಬಿಯಿಂದ ಸುಲ್ತಾನ್ ಪಾಳ್ಯದ ಮನೋರಮಾ ಪಾಳ್ಯದಲ್ಲಿ ಶಂಕಿತರ ಬಂಧನವಾಗಿದ್ದು, ಸ್ಪೋಟಕ ವಸ್ತುಗಳು, 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಹಾಗೂ 4 ಗ್ರೆನೈಡ್ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.(ಏಜೆನ್ಸೀಸ್)