ನವದೆಹಲಿ: ಕೋವಿಡ್-19 ಹೊಡೆತಕ್ಕೆ ಎಲ್ಲೆಡೆ ಜನರು ಕೆಲಸ ಕಳೆದುಕೊಂಡು ಕಂಗಾಲಾಗಿದ್ದು, ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲೇ ನಿರುದ್ಯೋಗಿಗಳಾಗಿದ್ದಾರೆ. ಇಂಥದ್ದೊಂದು ಆತಂಕದ ಪರಿಸ್ಥಿತಿ ನಡುವೆಯೇ ಕೇಂದ್ರ ಸರ್ಕಾರ ಆಶಾದಾಯಕ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.
ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಮತ್ತು ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ ಹೊಸ ಉದ್ಯೋಗಗಳ ಸೃಷ್ಟಿಯ ಕುರಿತ ವಿಷಯವನ್ನು ಪ್ರಸ್ತಾಪಿಸಿದ್ದು, ಇದೀಗ ದೇಶದ ಯುವಜನತೆಯ ಕಣ್ಣುಗಳನ್ನು ಅರಳಿಸಿದೆ. ಆಗ್ರೋವಿಷನ್ ಫೌಂಡೇಷನ್ ಆಯೋಜಿಸಿದ್ದ ಅಗ್ರಿ-ಫುಡ್ ಪ್ರೊಸೆಸಿಂಗ್ ಸಮ್ಮಿಟ್ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಬಳಿಕ ಗಡ್ಕರಿ ಈ ವಿಷಯ ತಿಳಿಸಿದರು.
ಗ್ರಾಮೀಣ ಉದ್ಯೋಗಗಳ ವಹಿವಾಟು ಸದ್ಯ 80 ಸಾವಿರ ಕೋಟಿ ರೂ. ಇದ್ದು, ಅದನ್ನು ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂ.ಗೆ ಏರಿಸುವ ಗುರಿ ಇರಿಸಿಕೊಳ್ಳಲಾಗಿದೆ. ಈ ಮೂಲಕ ಐದು ಕೋಟಿ ಉದ್ಯೋಗಗಳನ್ನೂ ಸೃಷ್ಟಿಸಲಾಗುವುದು. ಗ್ರಾಮೀಣ ಹಾಗೂ ಕೃಷಿ ಕ್ಷೇತ್ರದಲ್ಲಿನ ಬೆಳವಣಿಗೆ ಮೂಲಕ ಈ ಗುರಿಯನ್ನು ಸಾಧಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. (ಏಜೆನ್ಸೀಸ್)