ಬೆಂಗಳೂರು: ಮಹಿಳೆಯನ್ನು ಕೊಲೆ ಮಾಡಿ ಆಕೆಯ ಶವವನ್ನು ನಗರದ ಹೊರ ವಲಯದಲ್ಲಿ ಎಸೆದು ತಲೆ ಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಹುಣಸಮಾರನಹಳ್ಳಿ ನಿವಾಸಿ ಭೀಮರಾವ್(22) ಬಂಧಿತ. ಆರೋಪಿ ಫೆ.೨೭ರಂದು ಇಂದಿರಾನಗರ ನಿವಾಸಿ ದೀಪಾ(48) ಎಂಬಾಕೆಯನ್ನು ಕಬ್ಬಿಣ ರಾಡ್ನಿಂದ ಹೊಡೆದು ಕೊಲೆಗೈದಿದ್ದ. ಬಳಿಕ ಬಾಗಲೂರು ಠಾಣೆ ವ್ಯಾಪ್ತಿಯ ಸಾತನೂರು ಹೊಸಹಳ್ಳಿ ಗ್ರಾಮದ ಬಳಿ ಮೃತದೇಹ ಎಸೆದು ಪರಾರಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸಿಬಿಐ ಬಳಿಕ ಮನೀಶ್ ಸಿಸೋಡಿಯಾಗೆ ಇಡಿ ಶಾಕ್: ಅಕ್ರಮ ಹಣ ವರ್ಗಾವಣೆ, ಎಎಪಿ ನಾಯಕನ ಬಂಧನ
ತಮಿಳುನಾಡು ಮೂಲದ ದೀಪಾ ಅವಿವಾಹಿತವಾಗಿದ್ದು, ತಂದೆ-ತಾಯಿ ಇಲ್ಲ. ಮಾವ ಕೃಷ್ಣಮೂರ್ತಿ ಎಂಬುವರು ದೀಪಾ ಅವರನ್ನು ನೋಡಿಕೊಳ್ಳುತ್ತಿದ್ದರು. ದೀಪಾ ಇಂದಿರಾನಗರದ ಅಪಾರ್ಟ್ಮೆಂಟ್ವೊಂದರಲ್ಲಿ ಒಬ್ಬರೇ ವಾಸವಾಗಿದ್ದರು. ಹೊಸಕೋಟೆ ಸಮೀಪದ ಕಂಪನಿಯಲ್ಲಿ ಅಕೌಂಟ್ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಆರೋಪಿ ಭೀಮರಾವ್ ಕಲಬುರಗಿ ಮೂಲದವನಾಗಿದ್ದು, ಹುಣಸಮಾರನಹಳ್ಳಿ ಸೋದರ ಸಂಬಂಧಿ ಮನೆಯಲ್ಲಿ ವಾಸವಾಗಿದ್ದ. ದೀಪಾ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಈತ ಕ್ಯಾಬ್ ಚಾಲಕನಾಗಿದ್ದ. ಈತನ ಕ್ಯಾಬ್ನಲ್ಲೇ ದೀಪಾ ನಿತ್ಯ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಹೀಗಾಗಿ ಇಬ್ಬರು ಆತ್ಮೀಯತೆ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಆಗಾಗ್ಗೆ ಹೊರಗಡೆ ಹೋಗುತ್ತಿದ್ದರು. ಈ ಮಧ್ಯೆ ಇಬ್ಬರ ನಡುವೆ ಸಣ್ಣ-ಪುಟ್ಟ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು ಎಂದು ಹೇಳಲಾಗಿದೆ.
ಜಾಕ್ ರಾಡ್ನಿಂದ ಹೊಡೆದು ಕೊಂದ:
ಫೆ.27 ರಂದು ಸಂಜೆ 8 ಗಂಟೆ ಸುಮಾರಿಗೆ ಅಪಾರ್ಟ್ಮೆಂಟ್ನಲ್ಲಿದ್ದ ದೀಪಾರನ್ನು ತನ್ನ ಕ್ಯಾಬ್ನಲ್ಲಿ ಕರೆದೊಯ್ದ ಆರೋಪಿ ಮಾರ್ಗ ಮಧ್ಯೆಯೇ ಆಕೆ ಜತೆ ಜಗಳ ತೆಗಿದಿದ್ದಾನೆ. ಅದರಿಂದ ಆಕ್ರೋಶಗೊಂಡ ಆರೋಪಿ ಹಲಸೂರು ಠಾಣೆ ವ್ಯಾಪ್ತಿಯ ಕೇಂಬ್ರಿಡ್ಜ್ ರಸ್ತೆಯಲ್ಲಿ ನಿಲ್ಲಿಸಿದ್ದಾನೆ. ಈ ವೇಳೆ ಕ್ಯಾಬ್ನಿಂದ ಕೆಳಗೆ ಇಳಿದ ದೀಪಾ, ಮತ್ತೊಮ್ಮೆ ಕರೆ, ಸಂದೇಶ ಕಳುಹಿಸಬೇಡ. ತನ್ನೊಂದಿಗೆ ಮಾತನಾಡಬೇಡ, ನಿನ್ನ ನಂಬರ್ನನ್ನು ಬ್ಲಾಕ್ ಲಿಸ್ಟ್ಗೆ ಹಾಕುತ್ತೇನೆ ಎಂದಿದ್ದಾರೆ. ಇದರಿಂದ ಕೆರಳಿದ ಆರೋಪಿ, ಕ್ಯಾಬ್ನಲ್ಲಿದ್ದ ಜಾಕ್ ರಾಡ್ನಿಂದ ಮುಖಕ್ಕೆ ಹೊಡೆದಿದ್ದಾನೆ. ಆಗ ಜೋರಾಗಿ ಕೂಗಿಕೊಂಡ ಆಕೆಯನ್ನು ವೇಲ್ನಿಂದಲೇ ಕುತ್ತಿಗೆ ಬಿಗಿದು ಕೊಲೆಗೈದಿದ್ದಾನೆ. ಆಕೆ ಮೃತಪಟ್ಟಿರುವುದನ್ನು ದೃಢಪಡಿಸಿಕೊಂಡು ಬಾಗಲೂರು ಠಾಣೆ ವ್ಯಾಪ್ತಿಯ ಸಾತನೂರು ಹೊಸಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಮೃತ ದೇಹವನ್ನು ಎಸೆದು ಪರಾರಿಯಾಗಿದ್ದ.
ಮರುದಿನ ಸಾರ್ವಜನಿಕರು ಮಾಹಿತಿ ಮೇರೆಗೆ ಸ್ಥಳಕ್ಕೆ ಹೋದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ, ವೈದ್ಯರ ವರದಿಯಲ್ಲಿ ಹಲ್ಲೆ ನಡೆಸಿ, ಕುತ್ತಿಗೆ ಬಿಗಿದು ಕೊಲೆಗೈಯಲಾಗಿದೆ ಎಂದು ಮಾಹಿತಿ ನೀಡಿದ್ದರು. ಮತ್ತೊಂದೆಡೆ ಇಂದಿರಾನಗರ ಠಾಣೆಯಲ್ಲಿ ದೀಪಾ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ನಂತರ ಆಕೆ ಸಂಬಂಧಿಕರನ್ನು ಕರೆಸಿ ವಿಚಾರಣೆ ನಡೆಸಿದಾಗ ಮಾವ ಕೃಷ್ಣಮೂರ್ತಿ ಭೀಮರಾವ್ ಬಗ್ಗೆ ಸುಳಿವು ನೀಡಿದ್ದರು. ಈ ಹಿಂದೆ ಒಂದೆರಡು ಬಾರಿ ಮನೆಗೆ ಬಂದಿದ್ದು, ನಂದಿ ಬೆಟ್ಟ ಹೋಗೋಣ ಎಂದು ದೀಪಾಳನ್ನು ಕರೆಯುತ್ತಿದ್ದ. ಆಗ ನಾನೇ ದೀಪಾಗೆ ಬೇಡ. ಭೀಮರಾವ್ನ ವರ್ತನೆ ಸರಿಯಿಲ್ಲ ಎಂದು ಹೇಳಿದ್ದೆ ಎಂದಿದ್ದರು. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಕಂಪನಿ ಉದ್ಯೋಗಿ ದೀಪಾ ಕೊಲೆ ಪ್ರಕರಣ ಸಂಬಂಧ ಕ್ಯಾಬ್ ಚಾಲಕ ಭೀಮರಾವ್ ಎಂಬಾತನನ್ನು ಬಂಧಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಕೊಲೆಗೆ ವೈಯಕ್ತಿಕ ಕಾರಣ ಎಂದು ತಿಳಿದು ಬಂದಿದೆ. ಆರೋಪಿಯ ವಿಚಾರಣೆ ಬಳಿಕ ಸ್ಪಷ್ಟತೆ ಸಿಗಲಿದೆ.
ಲಕ್ಷ್ಮೀಪ್ರಸಾದ್, ಡಿಸಿಪಿ, ಈಶಾನ್ಯ ವಿಭಾಗ
ಸಿಬಿಐ ಬಳಿಕ ಮನೀಶ್ ಸಿಸೋಡಿಯಾಗೆ ಇಡಿ ಶಾಕ್: ಅಕ್ರಮ ಹಣ ವರ್ಗಾವಣೆ, ಎಎಪಿ ನಾಯಕನ ಬಂಧನ
ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟ ಉದಾಹರಣೆ ಇಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ