ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ನೂತನ ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದ ಸಿಸೋಡಿಯಾ, ಇದೀಗ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳಿಂದ ಮತ್ತೆ ಬಂಧನವಾಗಿದ್ದಾರೆ.
ಜಾಮೀನು ಅರ್ಜಿ ವಿಚಾರಣೆ ನಡೆದ ಒಂದು ದಿನದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ನೂತನ ಅಬಕಾರಿ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಆರೋಪದ ಅಡಿಯಲ್ಲಿ ಸಿಸೋಡಿಯಾ ಅವರನ್ನು ಇಡಿ ಬಂಧಿಸಿದೆ. ಮನೀಶ್ ಸಿಸೋಡಿಯಾ ಅವರು ದೆಹಲಿ ಉಪ ಮುಖ್ಯಮಂತ್ರಿಯಾಗಿದ್ದರು. ಬಂಧನ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಫೆ. 26ರಂದು ಸುಮಾರು 8 ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಿ, ಸಿಸೋಡಿಯಾರನ್ನು ಸಿಬಿಐ ಬಂಧಿಸಿತ್ತು. ಈ ಸಂಬಂಧ ಜಾಮೀನು ಅರ್ಜಿ ವಿಚಾರಣೆ ನಡೆಯುವಾಗಲೇ ಅಕ್ರಮ ಹಣ ವರ್ಗಾವಣೆ ಸಂಬಂಧ ಎರಡು ದಿನಗಳ ನಿರಂತರವಾಗಿ ವಿಚಾರಣೆ ನಡೆಸಿದ ಬಳಿಕ ಇಡಿ ಬಂಧಿಸಿದೆ.
ಮಾರ್ಚ್ 20ರ ವರೆಗೆ ಮನೀಶ್ ಸಿಸೋಡಿಯಾ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಮಾರ್ಚ್ 6ರಂದು ರೌಸ್ ಅವೆನ್ಯೂ ಕೋರ್ಟ್ ಆದೇಶ ನೀಡಿದೆ. ತಮ್ಮ ಬಂಧನ ಹಿನ್ನೆಲೆಯಲ್ಲಿ ಸಿಬಿಐ ವಿರುದ್ಧ ಸಿಸೋಡಿಯಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಜಾಮೀನು ಅರ್ಜಿ ವಿಚಾರಣೆಯಲ್ಲಿ ಇರುವಾಗಲೇ ಇಡಿಯಿಂದ ಸಿಸೋಡಿಯಾ ಮತ್ತೆ ಬಂಧನವಾಗಿದ್ದಾರೆ. ಸಿಬಿಐ ಮತ್ತು ಇಡಿ ಇಕ್ಕಳದಲ್ಲಿ ಸಿಲುಕಿ ಸಿಸೋಡಿಯಾ ನಲುಗುತ್ತಿದ್ದಾರೆ.
ಏನಿದು ಕೇಸ್?
ದೆಹಲಿ ಸರ್ಕಾರ 2021-22ನೇ ಸಾಲಿನ ಅಬಕಾರಿ ನೀತಿಯನ್ನು ರೂಪಿಸಿತ್ತು. ಈ ನೀತಿಯ ಅನ್ವಯ 468 ಖಾಸಗಿ ಬಾರ್ಗಳಿಗೆ ಅನುಮತಿ ನೀಡಲಾಗಿತ್ತು. ಈ ಅನುಮತಿ ನೀಡುವ ಸಮಯದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ಈ ಕುರಿತು ದೆಹಲಿಯ ಉಪರಾಜ್ಯಪಾಲ ವಿ.ಕೆ.ಸಕ್ಸೇನಾ (Vinai Kumar Saxena) ಅವರು ಕಳೆದ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಸಚಿವ ಮನೀಶ್ ಸಿಸೋಡಿಯಾ (Manish Sisodia) ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದರು.
ಇದೇ ಸಂದರ್ಭದಲ್ಲಿ 11 ಅಬಕಾರಿ ಅಧಿಕಾರಿಗಳನ್ನು ಕೂಡ ಅಮಾನತು ಮಾಡಲಾಗಿತ್ತು. ಮದ್ಯದ ಲೈಸೆನ್ಸ್ ಪಡೆದುಕೊಂಡವರಿಗೆ ಟೆಂಡರ್ ನಂತರ ಅನೇಕ ಸವಲತ್ತುಗಳನ್ನು ನೀಡಲಾಗಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮದ್ಯದ ವ್ಯಾಪಾರಿ ಸಮೀರ್ ಮಹೇಂದ್ರು ಅವರು ಸಿಸೋಡಿಯಾ ಅವರ ಸಹಚರರಿಗೆ 5 ಕೋಟಿ ರೂ ಪಾವತಿಸಿದ್ದಾರೆ ಎಂದು ಸಿಬಿಐ 2021-22ರ ಅಬಕಾರಿ ನೀತಿ ರಚನೆ ಮತ್ತು ಅನುಷ್ಠಾನದ ಅಡಿ ಎಫ್ಐಆರ್ ದಾಖಲಿಸಿದೆ. ಈ ಪ್ರಕರಣದಲ್ಲಿ ಒಟ್ಟು 13 ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದ್ದು, ಈ ಪೈಕಿ ಮನೀಷ್ ಸಿಸೋಡಿಯಾ ಮೊದಲ ಆರೋಪಿಯಾಗಿದ್ದಾರೆ. (ಏಜೆನ್ಸೀಸ್)
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ; ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಿದ ಸಿಬಿಐ
ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ
ಅಬಕಾರಿ ನೀತಿ ಪ್ರಕರಣ; CBI ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಸಿಸೋಡಿಯಾ