ಬೆಂಗಳೂರು: ಅಕ್ರಮ ಗಣಿಗಾರಿಕೆಯಿಂದ ನಲುಗಿರುವ ರಾಜ್ಯದ 466 ಹಳ್ಳಿಗಳು ಇಂದಿಗೂ ಮೂಲಸೌಕರ್ಯದಿಂದ ವಂಚಿತವಾಗಿವೆ. ಜತೆಗೆ, ಗಣಿಗಾರಿಕೆಯಿಂದ ಅತಿ ಹೆಚ್ಚು ಅರಣ್ಯ ಪ್ರದೇಶಗಳು ನಾಶವಾಗಿದೆ. ಬಳ್ಳಾರಿ 238, ವಿಜಯನಗರ 85, ತುಮಕೂರು 83 ಚಿತ್ರದುರ್ಗ 60 ಸೇರಿ ಒಟ್ಟು 466 ಹಳ್ಳಿಗಳು ಭಾದಿತವಾಗಿವೆ. ಗಣಿಬಾಧಿತ ಪ್ರದೇಶಗಳ ಮರು ನಿರ್ಮಾಣಗೊಳಿಸುವ ಪುನರ್ಜ್ಜೀವನ ಮತ್ತು ಪುನರ್ವಸತಿ (ಆರ್ಆ್ಯಂಡ್ಆರ್)ಮಾಡದ ಹಿನ್ನೆಲೆಯಲ್ಲಿ ಗಣಿಬಾಧಿತ ಗ್ರಾಮದ ಜನರು ಸರಿಯಾಗಿ ಜೀವನ ನಡೆಸಲಾಗದೆ ಸಂಕಷ್ಟದಲ್ಲೇ ಕಾಲ ದೂಡುವಂತಾಗಿದೆ. ಅನೇಕರು ಅಸ್ತಮಾ, ಉಸಿರಾಟದ ತೊಂದರೆ, ಚರ್ಮ ಸಮಸ್ಯೆ ಸೇರಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಗಣಿಬಾಧಿತ ಗ್ರಾಮಗಳ ಜನರಿಗೆ ಮೂಲಸೌಕರ್ಯ ಒದಗಿಸಲು ಜಿಲ್ಲಾ ಖನಿಜ ನಿಧಿ (ಡಿಎಂಎಫ್) ರಚಿಸಲಾಯಿತು. ಪ್ರಧಾನ ಮಂತ್ರಿ ಖನಿಜ ಕೇಂದ್ರ ಕಲ್ಯಾಣ ಯೋಜನೆ (ಪಿಎಂಕೆಕೆವೈ) ಅಡಿಯಲ್ಲಿ ಕುಡಿಯುವ ನೀರು ಪೂರೈಕೆ, ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರಿಗೆ ಮತ್ತು ಅಂಕವಿಕಲರಿಗೆ ಸೌಲಭ್ಯ, ಕೌಶಲ ಅಭಿವೃದ್ಧಿ, ನೈರ್ಮಲ್ಯ, ಭೌತಿಕ ಮೂಲಸೌಕರ್ಯ ಮತ್ತು ಜಲಾಯನ ಸೇರಿ 12 ಅಭಿವೃದ್ಧಿ ಕಾರ್ಯಕ್ರಮಗಳ ಹೆಸರಿನಲ್ಲಿ ಅನುದಾನ ನೀಡಲಾಗುತ್ತಿದೆ. ಸರ್ಕಾರ ಹಾಗೂ ಅಧಿಕಾರಿಗಳ ರ್ನಿಲಕ್ಷ್ಯ ಭ್ರಷ್ಟಚಾರ ಸೇರಿ ಇತರ ಕಾರಣಗಳಿಂದ ಡಿಎಂಎಫ್ ರಚನೆಯಾದರೂ ಗಣಿ ಭಾದಿತ ಪ್ರದೇಶಗಳಲ್ಲಿ ಈವರೆಗೆ ಹೇಳಿಕೊಳ್ಳುವಂತಹ ಕೆಲಸಗಳು ಕಾರ್ಯಗತವಾಗಿಲ್ಲ.ಗಣಿಗಾರಿಕೆಯಿಂದ ನರಳುತ್ತಿರುವ ಪ್ರದೇಶಗಳ ಅಭಿವೃದ್ಧಿಗೆ ಪರಿಷತ ಆರ್ಆ್ಯಂಡ್ಆರ್ ಯೋಜನೆ ರೂಪಿಸಲು ಈಗಾಗಲೇ ಹಲವು ಬಾರಿ ಸಭೆ ನಡೆದರೂ ಪ್ರಯೋಜನವಾಗಿಲ್ಲ.
ಏನೇನು ಮೂಲಸೌಕರ್ಯ ಕಲ್ಪಿಸಬೇಕಿದೆ
ಅರಣ್ಯ, ಪರಿಸರ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ, ಕುಡಿಯುವ ನೀರಿ, ನೈರ್ಮಲ್ಯ, ರಸ್ತೆಗಳು, ಆರೋಗ್ಯ, ಜಿಲ್ಲಾ, ತಾಲೂಕು ಆಸ್ಪತ್ರೆ, ವಿಶೇಷ ಆರೋಗ್ಯ ಕೇಂದ್ರ, ಮೀಸಲು ಅರಣ್ಯ ಪ್ರದೇಶ, ಪ್ರಾಣಿ ಆವರಣಗಳು, ಸೌರ ವಿದ್ಯುತ್, ಬೀದಿ ದೀಪ, ರೈಲ್ವೆ, ಕೌಶಲ ಅಭಿವೃದ್ಧಿ, ಹೊಸ ಅಂಗನವಾಡಿಗಳು, ಚೆಕ್ ಡ್ಯಾಂ ನಿರ್ಮಾಣ, ಕೆರೆಗಳ ಪುನಶ್ಚೇತನ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಲವರ್ಧನೆ, ಪಿಯು ಕಾಲೇಜುಗಳು ಸ್ಥಾಪನೆ, ಸಾರ್ವಜನಿಕರ ಗ್ರಂಥಾಲಯಗಳ ಉನ್ನತಿಕರಣ, ವಿದ್ಯಾರ್ಥಿ ನಿಲಯ, ಜಾನುವಾರುಗಳಿಗೆ ಚಿಕಿತ್ಸಾ ಟಕ, ಪಶು ವೈದ್ಯ ಕೇಂದ್ರಗಳ ಅಭಿವೃದ್ಧಿ, ಕುರಿ ಮತ್ತು ಮೇಕೆ ಮಾರುಕಟ್ಟೆ ಯಾರ್ಡ್, ಜಲಾನಯನ ಪ್ರದೇಶ, ಮನೆಗಳ ನಿರ್ಮಾಣ.
ನೇಹಾ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಾಳೆ
ಕೊಳೆಯುತ್ತಿರುವ ಅನುದಾನ?
ಗಣಿಗಾರಿಕೆಯಿಂದ ಸಂಪೂರ್ಣವಾಗಿ ಹಾಳಾಗಿರುವ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ 2014ರ ಜೂ.26ರಂದು ಕರ್ನಾಟಕ ಮೈನಿಂಗ್ ಎನ್ವಿರಾನ್ಮೆಂಟ್ ರಿಸ್ಟೋರೇಷನ್ ಕಾಪೋರ್ರೇಷನ್ (ಕೆಎಂಇಆರ್ಸಿ) ಸ್ಥಾಪಿಸಲಾಗಿತ್ತು. ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಲು ಗಣಿಬಾಧಿತ ಪ್ರದೇಶಗಳ ಸಮಗ್ರ ಪರಿಸರ ಯೋಜನೆ ರೂಪಿಸಲಾಗಿತ್ತು. ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ವ್ಯಾಪಿಯ ಪ್ರದೇಶದಲ್ಲಿ ಕೆಟಗರಿ ‘ಸಿ’ ಅಡಿ ಬರುವ ಅಕ್ರಮ ಅದಿರು ಗಣಿ ಗುತ್ತಿಗೆಗಳನ್ನು ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಗಣಿಗಾರಿಕೆಯಿಂದ ಹಾಳಾಗಿರುವ ಪ್ರದೇಶಗಳನ್ನು ಆರ್ಆ್ಯಂಡ್ ಆರ್ ನಿಯಮ ಜಾರಿಗೆ ತಂದಿರುವುದಲ್ಲದೆ ಈ ಹಣವನ್ನು ಗಣಿ ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ಕಲ್ಯಾಣಕ್ಕೆ ಬಳಸಬೇಕೆಂಬ ನಿಟ್ಟಿನಲ್ಲಿ ಕೆಎಂಇಆಆರ್ಸಿ ಅಡಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಬೇಕೆಂಬ ಆದೇಶಿಸಿತ್ತು. ಆದರೆ,ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ 2013ರಲ್ಲಿ ಜಾರಿಗೆ ಬಂದಿರುವ ಪುನರ್ಜ್ಜೀವನ ಮತ್ತು ಪುನರ್ವಸತಿ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.
ಅಪಾಯಕಾರಿ ಉದ್ಯಮ:
ಗಣಿಗಾರಿಕೆ ಅತ್ಯಂತ ಅಪಾಯಕಾರಿ ಉದ್ಯಮ. ಕೆಲವು ಉತ್ಪನ್ನಗಳು ಗಣಿಗಳಿಂದ ಉತ್ಖನನ ಮಾಡಲ್ಪಟ್ಟ ಕಚ್ಚಾ ವಸ್ತುಗಳಿಂದ ತಯಾರಿಸಲ್ಪಟ್ಟಿದೆ. ಭೂಮಿಯ ಒಳಗಿನ ಸಂಪನ್ಮೂಲಗಳಾದ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ಉಕ್ಕು, ಅದಿರು ಹಾಗೂ ಖನಿಜ ಸೇರಿ ಇತರ ಲೋಹ ಹೊರತೆಗೆಯಲು ಭೂಮಿಯ ಒಳಗೆ ಅಳವಾಗಿ ಅಗೆಯುವುದಕ್ಕೆ ಗಣಿಗಾರಿಕೆ ಎನ್ನಲಾಗುತ್ತದೆ. ಗಣಿಗಾರಿಕೆಯಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಸಿಗುವುದಂತೂ ನಿಜ. ಆದರೆ, ಅದೇ ಗಣಿಗಾರಿಕೆಯಿಂದ ಪರಿಸರ,ಮಾನವನ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಅಮೂಲ್ಯ ಸಂಪತ್ತು ಬರಿದಾಗುತ್ತಿದೆ. ಗಣಿಗಾರಿಗೆ ವೇಳೆ ಸಂಭವಿಸುವ ಸ್ಫೋಟದಿಂದ ಹೆಚ್ಚು ಅನಾಹುತ,ಪ್ರಾಣಹಾನಿ ಉಂಟಾಗುತ್ತಿದೆ. ಜಲ್ಲಿ, ಸೈಜುಗಲ್ಲು, ಬೋಲ್ಡರ್ಸ್, ದಿಂಡಿಗಲ್ಲು, ಕಲ್ಲುಪುಡಿ, ಅಲಂಕಾರಿಕಾ ಶಿಲೆ ಮತ್ತು ಗ್ರಾನೈಟ್ ಗಣಿಗಾರಿಕೆಯಿಂದಾಗಿ ಪರಿಸರಕ್ಕೆ ಅಪಾರ ಹಾನಿಯಾಗುತ್ತಿದೆ. ಕ್ವಾರಿಗಳಿಂದ ಬರುವ ಧೂಳು,ಸ್ಫೋಟಕ ವಸ್ತು ಬಳಕೆಯಿಂದ ಸ್ಥಳಿಯರಿಗೆ ತೊಂದರೆಯಾಗುತ್ತಿದೆ. ಅಧಿಕೃತ, ಅನಧಿಕೃತ ಕಲ್ಲು ಗಣಿಗಾರಿಕೆ ಸಂಪೂರ್ಣವಾಗಿ ರದ್ದು ಮಾಡಬೇಕೆಂದು ಪರಿಸರವಾದಿಗಳು, ರೈತರು ಸೇರಿ ನಾನಾ ಸಂಟನೆಗಳ ಈಗಾಗಲೇ ಸಾಕಷ್ಟು ಬಾರಿ ಹೋರಾಟ ನಡೆಸಿದ್ದರೂ ಸರ್ಕಾರ ಸುರಕ್ಷತಾ ಕ್ರಮ ಕೈಗೊಂಡಿಲ್ಲ.
ಬಾಧಿತವಾಗಿರುವ ಪ್ರದೇಶಗಳ ವಿವರ
ಜಿಲ್ಲೆ ತಾಲೂಕು ಗ್ರಾಮ
ಬಳ್ಳಾರಿ 4 238
ವಿಜಯನಗರ 3 85
ತುಮಕೂರು 3 83
ಚಿತ್ರದುರ್ಗ 3 60
ಒಟ್ಟು 13 466