ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥಾಪೋರಾದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಯೋಧರು ತೆರಳುತ್ತಿದ್ದ ವಾಹನಗಳ (ಕಾನ್ವಾಯ್) ಮೇಲೆ ಪಾಕ್ ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ ನಾಲ್ಕು ವರ್ಷ (ಫೆ.14) ತುಂಬಿದ್ದು, ಇದನ್ನು ಕರಾಳ ದಿನವನ್ನಾಗಿ ಆಚರಿಸಲಾಗುತ್ತದೆ.
ಕಾರ್ ಬಾಂಬ್ ದಾಳಿಯಲ್ಲಿ ಹುತಾತ್ಮರಾದ 40 ಯೋಧರಿಗೆ ದೇಶಾದ್ಯಂತ ಗೌರವ ನಮನ ಸಲ್ಲಿಸಲಾಗುತ್ತಿದ್ದು, ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಬೆಳಗ್ಗೆ ಟ್ವೀಟ್ ಮಾಡಿ ಹುತಾತ್ಮ ಯೋಧರು ತ್ಯಾಗ, ಬಲಿದಾನವನ್ನು ಸ್ಮರಿಸಿದ್ದಾರೆ.
ಪುಲ್ವಾಮಾದಲ್ಲಿ ಈ ದಿನ ನಾವು ಕಳೆದುಕೊಂಡ ನಮ್ಮ ಪರಾಕ್ರಮಿಗಳನ್ನು ನೆನಪಿಸಿಕೊಳ್ಳುತ್ತೇವೆ. ಅವರ ಅತ್ಯುನ್ನತ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಧೈರ್ಯವು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ಯೋಧರ ತ್ಯಾಗವನ್ನು ನೆನಪಿಸಿ, ಗೌರವ ಸಲ್ಲಿಸಿದ್ದಾರೆ.
Remembering our valorous heroes who we lost on this day in Pulwama. We will never forget their supreme sacrifice. Their courage motivates us to build a strong and developed India.
— Narendra Modi (@narendramodi) February 14, 2023
2019ರಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ನಾನು ಗೌರವ ಸಲ್ಲಿಸುತ್ತೇನೆ. ಹುತಾತ್ಮ ಸೈನಿಕರ ಧೈರ್ಯ ಮತ್ತು ತ್ಯಾಗಕ್ಕೆ ಈ ದೇಶ ವಂದಿಸುತ್ತದೆ. ಇಡೀ ದೇಶವು ಹುತಾತ್ಮ ಯೋಧರ ಕುಟುಂಬದೊಂದಿಗೆ ದೃಢವಾಗಿ ನಿಂತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
साल 2019 में पुलवामा में हुए आतंकी हमले में अपना बलिदान देने वाले बहादुर जवानों के प्रति मैं अपनी श्रद्धांजलि अर्पित करता हूँ। यह देश वीरगति को प्राप्त हुए इन जवानों के साहस और बलिदान को नमन करता है। उनके परिवारों के साथ पूरा देश मज़बूती के साथ खड़ा है।
— Rajnath Singh (@rajnathsingh) February 14, 2023
ನಡೆದದ್ದೇನು?
2019ರ ಫೆ. 14ರ ಮುಂಜಾನೆ ಜಮ್ಮುವಿನಿಂದ 78 ವಾಹನಗಳಲ್ಲಿ 2,547 ಯೋಧರ ಕಾನ್ವಾಯ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಶ್ರೀನಗರದ ಕಡೆಗೆ ಹೊರಟಿತ್ತು. ಆವಂತಿಪೋರಾ ಸಮೀಪ ಲೆಥಾಪೋರಾದಲ್ಲಿ ಮಧ್ಯಾಹ್ನ 3.15ಕ್ಕೆ ಭದ್ರತಾ ಸಿಬ್ಬಂದಿಯಿದ್ದ ಒಂದು ಬಸ್ಗೆ ಸ್ಫೋಟಕ ತುಂಬಿದ್ದ ಕಾರನ್ನು 22 ವರ್ಷದ ಅದಿಲ್ ಅಹ್ಮದ್ ದರ್ ಎಂಬಾತ ಡಿಕ್ಕಿ ಹೊಡೆಸಿ ಸ್ಫೋಟಿಸಿದ, ಇದರಿಂದ 76ನೇ ಬೆಟಾಲಿಯನ್ನ 40 ಯೋಧರು ಹುತಾತ್ಮರಾದರು. ಸ್ಫೋಟಕ್ಕೆ ಸುಮಾರು 80 ಕೆಜಿ ಸ್ಫೋಟಕ ಬಳಸಲಾಗಿತ್ತು. ಭಾರತದ ತನಿಖಾ ಸಂಸ್ಥೆಗಳು 19 ಆರೋಪಿಗಳನ್ನು ಗುರುತಿಸಿದವು. 2021ರ ಆಗಸ್ಟ್ ಹೊತ್ತಿಗೆ ಇತರ ಆರು ಜನರೊಂದಿಗೆ ಪ್ರಮುಖ ಆರೋಪಿಗಳು ಹತರಾದರು. ಏಳು ಜನರನ್ನು ಬಂಧಿಸಲಾಯಿತು.
ಪಾಕ್ ನೆಲಕ್ಕೇ ನುಗ್ಗಿ ಭಯೋತ್ಪಾದಕರ ತಾಣ ಧ್ವಂಸ
ಉಗ್ರರ ಅಟ್ಟಹಾಸಕ್ಕೆ ಉತ್ತರ ನೀಡಲು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಬಾಲಾಕೋಟ್ನಲ್ಲಿರುವ ಜೈಷ್-ಎ-ಮೊಹಮ್ಮದ್ ಸಂಟನೆಯ ಉಗ್ರಗಾಮಿಗಳ ತಾಣಗಳ ಮೇಲೆ ಫೆ. 26ರಂದು ಭಾರತೀಯ ವಾಯುಪಡೆಯು 12 ಫೈಟರ್ ವಿಮಾನಗಳ ಮೂಲಕ ಬಾಂಬ್ ದಾಳಿ ನಡೆಸಿತು. ಇದರಿಂದ ಉಗ್ರಗಾಮಿಗಳ ಅನೇಕ ಶಿಬಿರಗಳು ನಿರ್ನಾಮ ಆದವು. ಮರುದಿನ (ಫೆ.27) ಬೆಳಗ್ಗೆ ಪಾಕ್ ವಿಮಾನಗಳು (ಅಮೆರಿಕದ ಎಫ್16 ಫೈಟರ್ ಜೆಟ್ ಸಹಿತ) ಭಾರತದೊಳಗೆ ನುಗ್ಗಿದವು. ಇದನ್ನು ಹಿಮ್ಮೆಟ್ಟಿಸಲು ಮಿಗ್-21, ಸುಖೋಯ್, ಮಿರಾಜ್ 2000 ವಿಮಾನಗಳು ಮುಂದಾದವು.
ಮಿಗ್-21 ಬೈಸನ್ ವಿಮಾನದಲ್ಲಿ ಪಾಕ್ ವಿಮಾನವನ್ನು ಬೆನ್ನಟ್ಟಿದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್, ಈ ಪ್ರಯತ್ನದಲ್ಲಿ ಯಶಸ್ವಿಯಾದರು. ಆದರೆ, ಅವರ ವಿಮಾನ ಪತನವಾಯಿತು. ಅವರು ಪ್ಯಾರಾಚೂಟ್ ಮೂಲಕ ಇಳಿದ ಜಾಗ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ವಾಗಿತ್ತು. ಅಲ್ಲಿ ಅವರನ್ನು ಬಂಧಿಸಲಾಯಿತು. ಸುಮಾರು 60 ತಾಸಿನ ನಂತರ ಅವರನ್ನು ವಾಪಸು ಕರೆತರುವ ಭಾರತದ ರಾಜತಾಂತ್ರಿಕ ಪ್ರಯತ್ನ ಲಪ್ರದವಾಯಿತು. ತನ್ನ ಧೀರಯೋಧರ ಸಾವಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕ್ ನೆಲದೊಳಗೇ ನುಗ್ಗಿ ಸಾಹಸಗೈದಿತು. ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹುಯಿಲೆಬ್ಬಿಸಿದರೂ ಭಾರತ ಇದನ್ನು ಜಾಣ್ಮೆಯ ಕಾರ್ಯತಂತ್ರದಿಂದ ನಿಭಾಯಿಸಿತು.
ಪುಲ್ವಾಮಾ ಉಗ್ರದಾಳಿಗೆ ನಾಲ್ಕು ವರ್ಷ: ಇಂದು ಕರಾಳ ದಿನ, ಅಂದು ನಡೆದದ್ದೇನು?
ಮೂರೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಪೂಜಾರಿಗೆ 45 ವರ್ಷ ಜೈಲು ಶಿಕ್ಷೆ, 80 ಸಾವಿರ ರೂ. ದಂಡ!
ಆಪರೇಷನ್ ಜೆಡಿಎಸ್ಗೆ ಕೈ ಹಾಕಿದ ಎಚ್ಡಿಕೆ: ಹುಬ್ಬಳ್ಳಿಯಲ್ಲಿ ಬಿಜೆಪಿಯ ವಿಕೆಟ್ ಪತನ ಆಗೋದು ಖಚಿತ