ಕುರುಕ್ಷೇತ್ರ : ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತ ನಾಯಕರು ಬಿಜೆಪಿಯ ಕುರುಕ್ಷೇತ್ರ ಲೋಕಸಭಾ ಸದಸ್ಯರಾದ ನಾಯಾಬ್ ಸಿಂಗ್ ಅವರನ್ನು ಎಳೆದಾಡಿ, ಕಾರಿನ ಗಾಜು ಒಡೆದು ಗಲಭೆ ಎಬ್ಬಿಸಿರುವ ಘಟನೆ ಹರಿಯಾಣದಿಂದ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು)ನ ನಾಲ್ಕು ಸದಸ್ಯರನ್ನು ಬಂಧಿಸಿರುವ ಪೊಲೀಸರು, ಗಲಭೆ, ಕಾರು ಜಖಂ ಮತ್ತು ಕೊಲೆಯ ಯತ್ನದ ಕೇಸು ದಾಖಲಿಸಿದ್ದಾರೆ.
ನಿನ್ನೆ ಸಂಸದ ನಾಯಾಬ್ ಸಿಂಗ್ ಅವರು ವೈಯಕ್ತಿಕ ಭೇಟಿಗಾಗಿ ಕುರುಕ್ಷೇತ್ರದ ಮಾಜ್ರಿ ಮೊಹಲ್ಲಾಗೆ ಹೋಗಿದ್ದಾಗ ಸ್ಥಳದಲ್ಲಿ ಜಮಾಯಿಸಿದ ರೈತ ಚಳುವಳಿಕಾರರು, ಸಿಂಗ್ ಅವರು ಕಾರಿನೊಳಗೆ ಕೂತಾಗ ಕಪ್ಪು ಬಾವುಟ ತೋರಿಸುತ್ತಾ ವಾಹನವನ್ನು ಸುತ್ತುವರೆದರು. ಘೋಷಣೆಗಳನ್ನು ಕೂಗುತ್ತಾ ಸಿಂಗ್ರನ್ನು ಹಿಡಿದು ಹೊರಗೆಳೆಯಲು ಪ್ರಯತ್ನಿಸಿದರು. ಕೆಲವರು ಕಾರಿನ ಬಾನೆಟ್ ಮೇಲೆ ಕೂತರೆ ಮತ್ತೆ ಕೆಲವು ಹಿಂಗಡೆಯ ಗಾಜನ್ನು ಒಡೆದರು. ಸಿಂಗ್ ಅವರು ಸ್ವಲ್ಪದರಲ್ಲೇ ಪಾರಾಗಿದ್ದು, ಅವರನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು ಎಂದು ಎಫ್ಐಆರ್ ನಲ್ಲಿ ಹೇಳಲಾಗಿದೆ.
ಈ ಬಗ್ಗೆ ಮೊಕದ್ದಮೆ ದಾಖಲಿಸಿದ ಶಹಬಾದ್ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಎಫ್ಐಆರ್ನಲ್ಲಿ ಇನ್ನೂ ಹನ್ನೊಂದು ಜನರನ್ನು ಹೆಸರಿಸಲಾಗಿದ್ದು, ಅವರ ಗುರುತು ಸಿಕ್ಕಿಲ್ಲ ಎನ್ನಲಾಗಿದೆ. ಬಂಧಿತರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಈ ಬಗ್ಗೆ ಮತ್ತೆ ಪ್ರತಿಭಟನೆ ಹಮ್ಮಿಕೊಂಡಿರುವ ರೈತರು, ಕುರುಕ್ಷೇತ್ರದ ಶಹಬಾದ್ ಪೊಲೀಸ್ ಠಾಣೆಯ ಮುಂದೆ ಇಂದು ಧರಣಿ ನಡೆಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಲಭ್ಯಗೊಳಿಸಿ, ಅಲ್ಪಾವಧಿ ಲಾಕ್ಡೌನ್ ವಿಧಿಸಿ : ಐಎಂಎ
VIDEO | ಅನುಷ್ಕಾ ಶಕ್ತಿ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಬೌಲ್ಡ್ ಔಟ್ !
‘ನಾನು ಬಂಗಾಳಿ ಮಾತನಾಡುವುದರ ಬಗ್ಗೆಯೂ ದೀದಿ ಸಿಟ್ಟಾಗ್ತಿದ್ದಾರೆ’ : ಮೋದಿ