ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಲೌಕ್ಡೌನ್ ವೇಳೆ ಸಿಗರೇಟ್ ವ್ಯಾಪಾರಿಗಳ ಮೇಲೆ ದಾಳಿ ನಡೆಸಿ 37 ಲಕ್ಷ ರೂ. ಸುಲಿಗೆ ಮಾಡಿದ ಪ್ರಕರಣದ ಸಂಬಂಧ ಸಿಸಿಬಿ ಎಸಿಪಿ ಪ್ರಭುಶಂಕರ್ ಹಾಗೂ ಇಬ್ಬರು ಇನ್ಸ್ಪೆಕ್ಟರ್ಗಳು ಸೇವೆಯಿಂದ ಅಮಾನತುಗೊಂಡಿದ್ದಾರೆ.
ಒಂದು ಬ್ಯಾಚ್ನ ಇನ್ಸ್ಪೆಕ್ಟರ್ಗಳಾದ ಅಜಯ್ ಮತ್ತು ನಿರಂಜನ್, ಬೆಂಗಳೂರಿನಲ್ಲಿ 5 ವರ್ಷ ಸೇವೆ ಪೂರ್ಣಗೊಂಡರೂ ಪ್ರಭಾವ ಬಳಸಿ ಸಿಸಿಬಿಯಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದರು. ಲಾಕ್ಡೌನ್ ನೆಪ ಮಾಡಿಕೊಂಡು ಏ.18 ರಿಂದ ಸಿಗರೇಟ್ ವ್ಯಾಪಾರಿಗಳ ಮೇಲೆ ಕಾರ್ಯಾ ಚರಣೆ ಆರಂಭಿಸಿ ಸಗಟು ವ್ಯಾಪಾರಿಗಳ ಮನೆ ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು. 12 ದಿನಗಳಲ್ಲಿ ಪ್ರತ್ಯೇಕವಾಗಿ ನಾಲ್ವರು ವ್ಯಾಪಾರಿಗಳ ಮೇಲೆ ದಾಳಿ ನಡೆಸಿ 37 ಲಕ್ಷ ರೂ. ಸುಲಿಗೆ ಮಾಡಿದ್ದರು.
ಇದಾದ ಮೇಲೆ ಏ. 30ರಂದು ಕೆ.ಆರ್. ಪುರ ಠಾಣಾ ವ್ಯಾಪ್ತಿಯಲ್ಲಿ ಸಿಗರೇಟ್ ವ್ಯಾಪಾರಿ ಸಂತೋಷ್ ಎಂಬುವರ ಮನೆ ಮೇಲೆ ಅಜಯ್ ಮತ್ತು ನಿರಂಜನ್, ದಾಳಿ ನಡೆಸಿ ಕೇಸ್ ದಾಖಲಿಸದೆ ಇರಲು 40 ಲಕ್ಷ ರೂ.ಗೆ ಬೆದರಿಕೆ ಒಡ್ಡಿದ್ದರು. ಸಂತೋಷ್ ಮನೆಯಲ್ಲಿ 23 ಲಕ್ಷ ರೂ. ಮೌಲ್ಯದ ಸಿಗರೇಟ್ ಸಹ ಜಪ್ತಿ ಮಾಡಿದ್ದರು. ದಾಳಿ ವೇಳೆ ಸಂತೋಷ್, ಸಿಸಿಬಿ ಎಸಿಪಿ ಪ್ರಭುಶಂಕರ್ಗೆ ಲಂಚ ಕೊಟ್ಟಿರುವುದಾಗಿ ಹೇಳಿದ್ದ. ಅನುಮಾನ ಗೊಂಡ ಇನ್ಸ್ಪೆಕ್ಟರ್ಗಳು, ಸಿಸಿಬಿಯ ಡಿಸಿಪಿ-2 ಕೆ.ಪಿ. ರವಿಕುಮಾರ್ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು.
ಇದನ್ನೂ ಓದಿ 15ರೊಳಗೆ ದೇಶೀಯ ವಿಮಾನ ಸಂಚಾರ ಸಾಧ್ಯತೆ
ಅಲ್ಲದೆ, ಸಿಸಿಬಿ ವಿರುದ್ಧವೇ ಸಂತೋಷ್ ಲಂಚದ ಆರೋಪ ಮಾಡುತ್ತಿದ್ದ ಕಾರಣಕ್ಕೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರು. ಅನುಮಾನಗೊಂಡ ಡಿಸಿಪಿ, ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರು. ಆನಂತರ ಸಿಗರೇಟ್ ಮಾರಾಟದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಗುಮಾನಿ ಇರುವುದಾಗಿ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಅವರಿಗೆ ಡಿಸಿಪಿ ರವಿಕುಮಾರ್ ಮಾಹಿತಿ ನೀಡಿದ್ದರು. ಈ ವಿಚಾರ ತಿಳಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಆಂತರಿಕ ತನಿಖೆಗೆ ಸೂಚಿಸಿದರು. ಡಿಸಿಪಿ ರವಿಕುಮಾರ್ ತನಿಖೆ ಕೈಗೊಂಡು ವ್ಯಾಪಾರಿ ಸಂತೋಷ್ನನ್ನು ಕರೆಸಿ ವಿಚಾರಣೆ ನಡೆಸಿದಾಗ ಎಸಿಪಿ ಪ್ರಭುಶಂಕರ್ ಮತ್ತು ಇನ್ಸ್ಪೆಕ್ಟರ್ಗಳ ಬಣ್ಣ ಬಯಲಾಗಿದೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ತಕ್ಷಣವೇ ಅಜಯ್ ಮತ್ತು ನಿರಂಜನ್ನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಎಸಿಪಿಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ಸ್ಪೆಕ್ಟರ್-ಎಸಿಪಿ ಜಗಳ: ಸಿಗರೇಟ್ ಡೀಲ್ನ ಹಣ ಹಂಚಿಕೆಯಲ್ಲಿ ಎಸಿಪಿ ಮತ್ತು ಪಿಐಗಳಾದ ಅಜಯ್ ಮತ್ತು ನಿರಂಜನ್ ಮಧ್ಯೆ ಕಿತ್ತಾಟ ವಾಗಿತ್ತು. ಸಿಗರೇಟ್ ಮಾರಾಟಗಾರರಿಗೆ ಬೆದರಿಕೆ ಹಾಕಿ ಎಸಿಪಿ ಮತ್ತು ಪಿಐಗಳು ಪ್ರತ್ಯೇಕವಾಗಿ 99 ಲಕ್ಷ ರೂ. ಸುಲಿಗೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಒಡವೆ ಮಾರಿಸಿ 15 ಲಕ್ಷ ರೂ. ಸುಲಿಗೆ : ಸಿಗರೇಟ್ ವ್ಯಾಪಾರಿ ಸಂತೋಷ್ ಅವಿವಾಹಿತ. ಇನ್ಸ್ಪೆಕ್ಟರ್ಗಳ ಬೆದರಿಕೆಯಿಂದ ಭೀತಿಗೊಂಡ ವ್ಯಾಪಾರಿ, ತಮ್ಮ ಸೋದರನ ಪತ್ನಿಯ ಆಭರಣಗಳನ್ನು ಮಾರಾಟ ಮಾಡಿ ಅಜಯ್ ಮತ್ತು ನಿರಂಜನ್ಗೆ 15 ಲಕ್ಷ ರೂ. ಕೊಟ್ಟಿದ್ದರು. ಮೊದಲು 40 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಪೊಲೀಸರು ಕೊನೆಗೆ 15 ಲಕ್ಷ ರೂ. ಒಪ್ಪಿದ್ದರು ಎಂದು ಮೂಲಗಳು ಹೇಳಿವೆ.
ಕೇಸ್ ಮುಚ್ಚಿ ಹಾಕುವ ಪ್ಲಾನ್
ಏ.30ರಂದು ಕೆ.ಆರ್. ಪುರದಲ್ಲಿ ಸಿಗರೇಟ್ ವ್ಯಾಪಾರಿಗಳ ಮೇಲೆ ದಾಳಿ ನಡೆಸಿದ್ದ ಪ್ರಕರಣ ಮುಚ್ಚಿ ಹಾಕಲು ಎಸಿಪಿ ಪ್ರಭುಶಂಕರ್ ಪ್ಲಾ್ಯನ್ ಮಾಡಿದ್ದರು. ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆಗೆ ಮುಂದಾಗಿದ್ದರು. ಸಿಸಿಬಿ ಡಿಸಿಪಿ-2 ಕೆ.ಪಿ. ರವಿಕುಮಾರ್ ರಜೆ ಇದ್ದ ಕಾರಣಕ್ಕೆ ಸಿಸಿಬಿ ಡಿಸಿಪಿ-1 ಕುಲದೀಪ್ ಕುಮಾರ್ ಜೈನ್ ಬಳಿ ಅನುಮತಿ ಕೋರಿದ್ದರು. ಅದಕ್ಕೆ ಅವರು ಜಂಟಿ ಪೊಲೀಸ್ ಆಯುಕ್ತ(ಅಪರಾಧ) ಸಂದೀಪ್ ಪಾಟೀಲ್ ಅವರಿಂದ ಅನುಮತಿ ಪಡೆಯುವಂತೆ ಸೂಚಿಸಿದ್ದರು. ಫೈಲ್ ತೆಗೆದುಕೊಂಡು ಎಸಿಪಿ ಪ್ರಭುಶಂಕರ್ ಹೋದಾಗ ನಗರದಲ್ಲಿ ನಡೆದ ಹಲವು ಪ್ರಕರಣಗಳ ಪೈಕಿ ಕೆ.ಆರ್.ಪುರದ ಸಿಗರೇಟ್ ಕೇಸನ್ನೇ ಯಾಕೇ ವರ್ಗಾವಣೆ ಕೋರುತ್ತಿದ್ದಾರೆ ಎಂದು ಸಂದೀಪ್ ಪಾಟೀಲ್ ಪರಿಶೀಲನೆ ನಡೆಸಿದಾಗ ಲಂಚ ಪಡೆದಿರುವುದು ಬೆಳಕಿಗೆ ಬಂದಿದೆ.
ಎಸಿಬಿಗೆ ದೂರು ನೀಡಲು ಯಾಕೆ ಹಿಂದೇಟು?
ಸಿಗರೇಟ್ ಸಗಟು ವ್ಯಾಪಾರಿಗಳಿಂದ ಎಸಿಪಿ ಮತ್ತು ಇನ್ಸ್ಪೆಕ್ಟರ್ ಲಂಚ ಪಡೆದ ಆರೋಪ ಆಂತರಿಕ ತನಿಖೆಯಿಂದ ಸಾಬೀತಾಗಿದೆ. ಆದರೂ ಆರೋಪಿತ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಕೊಡಲು ಪೊಲೀಸ್ ಅಧಿಕಾರಿಗಳೇ ಹಿಂದೇಟು ಹಾಕಿದ್ದಾರೆ. ಅಮಾನತು ಶಿಕ್ಷೆಗೆ ಮುಕ್ತಾಯಗೊಳಿಸಿ ಆರೋಪಿ ಅಧಿಕಾರಿಗಳನ್ನು ರಕ್ಷಣೆ ಮಾಡಲು ಇಲಾಖೆ ಮುಂದಾಗಿದೆ ಎಂದು ಪೊಲೀಸ್ ಇಲಾಖೆಯಲ್ಲಿಯೇ ಅಸಮಾಧಾನ ವ್ಯಕ್ತವಾಗಿದೆ.
61,000 ಸೋಂಕು 2,000 ಸಾವು! ದೇಶದಲ್ಲಿ 40 ಸಾವಿರ ಸಕ್ರಿಯ ಪ್ರಕರಣ; ಮಹಾರಾಷ್ಟ್ರ, ಗುಜರಾತ್, ದೆಹಲಿ ಸ್ಥಿತಿ ಗಂಭೀರ