ವಿಜಯವಾಣಿ ಸುದ್ದಿಜಾಲ ರೋಣ
ಲಾಕ್ಡೌನ್ ಮಧ್ಯೆಯೂ ಗ್ರಾಮೀಣ ಭಾಗದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಪ್ರಸಕ್ತ ಆರ್ಥಿಕ ವರ್ಷದ ಮೊದಲ ತಿಂಗಳು ತಾಲೂಕಿನಲ್ಲಿ 36,181 ಮಾನವ ದಿನಗಳ ಸೃಜನೆ ಮಾಡಲಾಗಿದೆ.
ಸಾಮೂಹಿಕ ಬದು ನಿರ್ವಣ, ಕೆರೆ ಹೊಳೆತ್ತುವುದು, ಕೃಷಿಹೊಂಡ, ದನದ ಕೊಟ್ಟಿಗೆ, ಅರಣ್ಯೀಕರಣ ಹಾಗೂ ವಿವಿಧ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜನರಿಗೆ ವಹಿಸುತ್ತಿದ್ದಾರೆ. ಉದ್ಯೋಗ ಬೇಡಿಕೆಗೆ ತಕ್ಕಂತೆ ಕೆಲವು ಪಂಚಾಯಿತಿಗಳಲ್ಲಿ ಇನ್ನೂ ಉದ್ಯೋಗ ವಹಿಸಲು ಸಾಧ್ಯವಾಗುತ್ತಿಲ್ಲ. ಲಾಕ್ಡೌನ್ಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬೇರೆ ಜವಾಬ್ದಾರಿ ಕೂಡ ವಹಿಸಿರುವುದು, ಖಾತರಿ ಯೋಜನೆ ತ್ವರಿತಗೊಳಿಸಲು ಅಡ್ಡಿಯಾಗಿದೆ.
ತಾಲೂಕಿನ ರಾಜೂರ ಗ್ರಾ.ಪಂ. ನಲ್ಲಿ ಏಪ್ರಿಲ್ನಲ್ಲಿ ಅತಿ ಹೆಚ್ಚು 4,270 ಮಾನವ ದಿನಗಳ ಉದ್ಯೋಗ ಸೃಜನವಾಗಿದೆ. ಹಾಳಕೇರಿ ಗ್ರಾ.ಪಂ. ನಲ್ಲಿ ಅತಿ ಕಡಿಮೆ 10 ಮಾನವ ದಿನಗಳು ಸೃಜನವಾಗಿವೆ.
ಈ ವರ್ಷ ತಾಲೂಕಿನಲ್ಲಿ ಹೊಸದಾಗಿ ಒಟ್ಟು 39,181 ಜಾಬ್ಕಾರ್ಡ್ಗಳನ್ನು ಮಾಡಿಕೊಟ್ಟಿದ್ದು, ಅದರಲ್ಲಿ ಶೇ. 80ರಷ್ಟು ಕಾರ್ಡ್ಗಳು ಸಕ್ರಿಯವಾಗಿವೆ.
ತಾಲೂಕಿನಾದ್ಯಂತ ಗ್ರಾಮೀಣ ಭಾಗದಿಂದ ಬೇರೆಡೆ ತೆರಳಿದ್ದ 6 ಸಾವಿರದಷ್ಟು ಜನ ಮರಳಿ ಬಂದಿದ್ದಾರೆ. ಅದರಲ್ಲಿ ಮಕ್ಕಳನ್ನು ಹೊರತುಪಡಿಸಿ 5 ಸಾವಿರದಷ್ಟು ಕಾರ್ವಿುಕರು ಇರಬಹುದು. ಈಗಾಗಲೇ ಬಹುತೇಕ ಜನರಿಗೆ ಜಾಬ್ಕಾರ್ಡ್ ಇದೆ. ಇಲ್ಲದಿದ್ದರೆ ಮಾಡಿಕೊಡಲು ಗ್ರಾಮ ಪಂಚಾಯಿತಿಗೆ ಸೂಚಿಸಲಾಗಿದೆ. ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಿದವರಿಗೆ ಕೆಲಸ ನೀಡಲಾಗುವುದು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ ತಿಳಿಸಿದ್ದಾರೆ.