ಬೆಂಗಳೂರು: ವರ್ಷಾಂತ್ಯದಲ್ಲಿ ಮಹಾಮಾರಿ ಕೋವಿಡ್ ಮತ್ತೊಮ್ಮೆ ತನ್ನ ಆರ್ಭಟ ಶುರು ಮಾಡಿದ್ದು, ಇದರ ರೂಪಾಂತರ ತಳಿ JN.1 ವೈರಸ್ ರಾಜ್ಯಕ್ಕೆ ಕಾಲಿಟ್ಟಿದೆ. ಸುದ್ದಿ ಮೂಲಗಳ ಪ್ರಕಾರ ರಾಜ್ಯದಲ್ಲಿ ಸುಮಾರು 35 ಮಂದಿಗೆ JN.1 ವೈರಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಕೊಡಗು, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ಚಾಮರಾಜನಗರದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಹೊಸ ಸೋಂಕು ಸ್ಪೋಟದಿಂದ ಜನರಲ್ಲಿ ಆತಂಕ ಶುರುವಾಗಿದ್ದು, ಆರೋಗ್ಯ ಇಲಾಖೆ ಸೋಂಕಿತರ ಮಾಹಿತಿಯನ್ನು ಕಲೆಹಾಕುತ್ತಿದೆ.
ಇದನ್ನೂ ಓದಿ: ಯೇಸುಕ್ರಿಸ್ತನ ಆದರ್ಶಗಳು ನಮಗೆ ಮಾರ್ಗದರ್ಶಕ ಬೆಳಕಿನಂತೆ: ಪ್ರಧಾನಿ ನರೇಂದ್ರ ಮೋದಿ
ರಾಜ್ಯದಲ್ಲಿ ಸುಮಾರು 35 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ಬೆಂಗಳೂರಿನಲ್ಲಿ 20, ಮೈಸೂರಿನಲ್ಲಿ 4, ಮಂಡ್ಯದಲ್ಲಿ 3, ರಾಮನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಹಾಸನ ಹಾಗೂ ಚಾಮರಾಜನಗರದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈ ಬಗ್ಗೆ ಮಾಹಿತಿ ಮೊದಲೇ ಲಭಿಸಿತ್ತು. ಸೋಂಕಿನ ಕುರಿತು ತಿಳಿದು ಜಿನೋಮಿಕ್ ಸೀಕ್ವೆನ್ಸ್ಗೆ ಕಳಿಸಿದ್ದೆವು. ಬಹುತೇಕ JN.1 ಕೇಸ್ಗಳು ಬೆಂಗಳೂರಿನಲ್ಲೇ ಇದ್ದು, ಸೋಂಕಿನಿಂದ ಮೃತಪಟ್ಟವರ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಅವರಿಗೆ ಬೇರೆ ಬೇರೆ ಕಾಯಿಲೆ ಜತೆ ಕರೊನಾ ಸೋಂಕು ತಗುಲಿತ್ತು. JN.1 ಸೋಂಕಿನ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.