ಬೆಂಗಳೂರು: ಮುಖ್ಯಮಂತ್ರಿ, ಸಚಿವರು ಸೇರಿ ವಿಧಾನ ಮಂಡಲ ಸದಸ್ಯರ ಪ್ರಯಾಣ ಹಾಗೂ ದಿನ ಭತ್ಯೆ ಹೊರತುಪಡಿಸಿ, ಒಂದು ವರ್ಷದ ಅವಧಿಗೆ ವೇತನ ಮತ್ತು ಭತ್ಯೆಗಳಲ್ಲಿ ಶೇ.30 ಕಡಿತಗೊಳಿಸಿ ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ ಆದೇಶ ಹೊರಡಿಸಿದೆ.
ಕರೊನಾ ಸಂಕಷ್ಟಕ್ಕೆ ನೆರವಾಗಲೆಂದು ವೇತನ ಹಾಗೂ ಭತ್ಯೆ ಕಡಿತಕ್ಕೆ ಶಾಸಕರು ಪಕ್ಷಭೇದ ಮರೆತು ಒಪ್ಪಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಏಪ್ರಿಲ್ 1 ರಿಂದ ಅನ್ವಯವಾಗುವಂತೆ 1 ವರ್ಷದ ಅವಧಿಗೆ ವೇತನ ಮತ್ತು ಭತ್ಯೆ ಕಡಿತಗೊಳಿಸುವ ಕುರಿತು ಸಚಿವ ಸಂಪುಟದ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಈ ಸಂಬಂಧ ಕರ್ನಾಟಕ ವಿಧಾನ ಮಂಡಲದ ಸದಸ್ಯರ ವೇತನ, ಪಿಂಚಣಿ ಮತ್ತು ಇತರ ಭತ್ಯೆಗಳು ಹಾಗೂ ಇತರ ಕಾನೂನು (ತಿದ್ದುಪಡಿ) ಅದ್ಯಾದೇಶ 2020ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದರು. ಪ್ರಯಾಣ ಹಾಗೂ ದಿನಭತ್ಯೆ ಹೊರತುಪಡಿಸಿ, ಇತರ ಭತ್ಯೆಗಳಲ್ಲಿ ನಿಗದಿತ ಪ್ರಯಾಣ ಭತ್ಯೆಗೆ ಶೇ.30 ಕಡಿತ ಮಾಡಿ ಪಾವತಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: 2ನೇ ಅವಧಿಗೆ ಪ್ರಧಾನಿಯಾಗಿ ಒಂದು ವರ್ಷ: ದೇಶದ ಜನರಿಗೆ ಮೋದಿ ಭಾವನಾತ್ಮಕ ಪತ್ರ
ಯಾವ್ಯಾವುದು ಕಡಿತ?: ಸಂಬಳ, ದೂರವಾಣಿ ವೆಚ್ಚ, ಚುನಾವಣಾ ಕ್ಷೇತ್ರ ಭತ್ಯೆ, ಅಂಚೆ ವೆಚ್ಚ, ಕೊಠಡಿ ಸೇವಕರ ಭತ್ಯೆ, ಚುನಾವಣಾ ಕ್ಷೇತ್ರ ಪ್ರಯಾಣ ಭತ್ಯೆ, ನಿಗದಿತ (ಫಿಕ್ಸ್ಡ್ವಿಮಾನ ಮತ್ತು ರೈಲ್ವೆ ಪ್ರಯಾಣ ಭತ್ಯೆ (ವಾರ್ಷಿಕ).
ಯಾವುದು ಅಬಾಧಿತ?: ರಾಜ್ಯದ ಒಳ-ಹೊರಗಿನ ಸಭೆಗಳಿಗೆ ಹಾಜರಾಗಲು ದಿನ ಭತ್ಯೆ, ಪ್ರಯಾಣ ಭತ್ಯೆ, ವಾಹನ ಭತ್ಯೆ (ಪ್ರತಿ ಕಿ.ಮೀ.ಗೆ) ಪಾವತಿಸಲಾಗುತ್ತದೆ.