ಕಲಘಟಗಿ: ಡಿಸೆಂಬರ್ ತಿಂಗಳೊಳಗೆ ತಾಲೂಕಿನ ಸರ್ವ ಸಮಸ್ಯೆಗಳಿಗೂ ಪರಿಹಾರ ಒದಗಿಸಲು ಸಾಧ್ಯವಾಗದಿದ್ದರೆ, ಸೂಕ್ತ ಕಾರಣವನ್ನಾದರೂ ವರದಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜರುಗಿದ ತ್ರೖೆ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ, ತಾಲೂಕಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರು ಕೇಳಿಬರುತ್ತಿವೆ. ಸಮಸ್ಯೆಗಳಿಗೆ ಮುಕ್ತಿ ಹಾಡಲು ಅಧಿಕಾರಿಗಳು ಮುಂದಾಗಬೇಕು. ಎಲ್ಲ ಅಧಿಕಾರಿಗಳಿಗೆ ಮೂರು ತಿಂಗಳು ಗಡುವು ನೀಡಲಾಗುವುದು. ಮುಂದಿನ ಸಭೆಗೆ ಬರುವ ಮುನ್ನ ದೂರುಗಳಿಗೆ ಪರಿಹಾರ ಅಥವಾ ಮಾಗೋಪಾಯ ಕಂಡುಕೊಳ್ಳಬೇಕು. ಇಲಾಖೆಯ ವರದಿಗಳನ್ನು ಸಭೆಗೆ ಕಡ್ಡಾಯ ತರಬೇಕು. ಲಿಖಿತ ರೂಪದಲ್ಲಿಯೇ ಪ್ರಸ್ತುತಪಡಿಸಬೇಕು ಎಂದು ಎಚ್ಚರಿಕೆ ನೀಡಿದರು. ಸಿಡಿಮಿಡಿ: ತಾಲೂಕು ಕ್ರೀಡಾಂಗಣ ನಿರ್ಮಾಣ ಸಂಬಂಧ ಸಾರಿಗೆ ಹಾಗೂ ಕಂದಾಯ ಇಲಾಖೆಯ ನಡುವಿನ ತಾಂತ್ರಿಕ ಸಮಸ್ಯೆ ಆಲಿಸಿದ ಸಚಿವರು, ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು. ಎರಡೂ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು. ಜಿಪಂ ಸಿಇಒ ಸ್ವರೂಪ ಟಿ.ಕೆ., ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ತಹಸೀಲ್ದಾರ್ ಯಲ್ಲಪ್ಪ ಗೊಣೆಣ್ಣವ್ವರ, ತಾಪಂ ಇಒ ಪರಶುರಾಮ ಸಾವಂತ, ಸಿಪಿಐ ಶ್ರೀಶೈಲ ಕೌಜಲಗಿ, ಇತರರಿದ್ದರು.
30 ಸಾವಿರ ಕೋಟಿಗೆ ಕೇಂದ್ರಕ್ಕೆ ಕೋರಿಕೆ
ಅಳ್ನಾವರ, ಕಲಘಟಗಿ ಹಾಗೂ ಅಣ್ಣಿಗೇರಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಸರ್ಕಾರ ಘೊಷಣೆ ಮಾಡಿದೆ. ತ್ವರಿತ ಪರಿಹಾರ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಂತೋಷ ಲಾಡ್ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರಕ್ಕೆ 30 ಸಾವಿರ ಕೋಟಿ ರೂ. ಬರ ಪರಿಹಾರ ನೀಡುವಂತೆ ಕೋರಲಾಗಿದೆ. ರಾಜ್ಯ ಸರ್ಕಾರದಿಂದಲೂ ಪರಿಹಾರ ಒದಗಿಸಲಾಗುವುದು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಬಾಬು ಅಂಚಟಗೇರಿ, ಸೋಮಶೇಖರ ಬೆನ್ನೂರು, ಬಾಳು ಖಾನಾಪುರ, ಗುರು ಬೆಂಗೇರಿ, ಕುಮಾರ ಕಂಡೇಕರ, ಶಿವಲಿಂಗ ಮೂಗಣ್ಣವರ, ಲಕ್ಷ್ಮಣ ಲಮಾಣಿ ಇತರರಿದ್ದರು.