ನವದೆಹಲಿ: ಕೊವಿಡ್ -19ರ ಲಾಕ್ಡೌನ್ ಕರ್ತವ್ಯದಲ್ಲಿದ್ದ ಮೂವರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಲಾಗಿದೆ. ಇದಕ್ಕೆ ಕಾರಣ ಸುಳ್ಳು ಹೇಳಿದ್ದು.
ಮೂವರು ಪೊಲೀಸ್ ಪೇದೆಗಳೂ ಶಾಸ್ತ್ರಿ ಪಾರ್ಕ್ ಪೊಲೀಸ್ ಠಾಣೆಯವರು. ಆ ಠಾಣೆಯ ಸಬ್ ಇನ್ಸ್ಪೆಕ್ಟರ್ಗೆ ಏಪ್ರಿಲ್ 28ರಂದು ಕರೊನಾ ಸೊಂಕು ಇರುವುದು ದೃಢಪಟ್ಟಿತ್ತು.
ಸಬ್ ಇನ್ಸ್ಪೆಕ್ಟರ್ಗೆ ಕರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನೆಲ್ಲ ಗುರುತಿಸಿ, ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ. ಈ ಮೂವರು ಪೇದೆಗಳು ತಾವೂ ಸಹ ಸೋಂಕಿತ ಸಬ್ ಇನ್ಸ್ಪೆಕ್ಟರ್ ಜತೆಗೇ ಕಾರ್ಯನಿರ್ವಹಿಸಿದ್ದೇವೆ. ಅವರ ಪ್ರೈಮರಿ ಸಂಪರ್ಕ ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದರು.
ಅದನ್ನು ಮೊದಲು ಹಿರಿಯ ಅಧಿಕಾರಿಗಳು ನಂಬಿಕೊಂಡು, ಅವರನ್ನು ಕ್ವಾರಂಟೈನ್ಗೆ ಒಳಪಡಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ಮೂವರೂ ಪೇದೆಗಳು ಕರ್ತವ್ಯವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಸುಳ್ಳು ಹೇಳಿದ್ದಾರೆ. ಇವರ್ಯಾರೂ ಆ ಪೊಲೀಸ್ ಅಧಿಕಾರಿಯ ಸಂಪರ್ಕಕ್ಕೆ ಹೋಗೇ ಇಲ್ಲ ಎಂಬುದು ಪರಿಶೀಲನೆ ಬಳಿಕ ಬೆಳಕಿಗೆ ಬಂತು.
ಸೋಂಕಿತ ಸಬ್ ಇನ್ಸ್ಪೆಕ್ಟರ್ಗೆ ಮೊದಲು ಏಪ್ರಿಲ್ 21ರಂದು ಜ್ವರ ಕಾಣಿಸಿಕೊಂಡಿತ್ತು. ಅಂದೇ ಅವರಿಗೆ ರಜೆ ಕೊಟ್ಟು ಮನೆಗೆ ಕಳಿಸಲಾಗಿತ್ತು. ಆ ಮೇಲೆ ಅವರು ಠಾಣೆಗೆ ಬಂದೇ ಇರಲಿಲ್ಲ. ಮೊದಲೂ ಕೂಡ ಈ ಮೂವರು ಪೇದೆಗಳು ಅವರ ಸಂಪರ್ಕಕ್ಕೆ ಹೋಗಿರಲಿಲ್ಲ ಎಂದು ಪೊಲೀಸ್ ಉಪ ಆಯುಕ್ತ ಹರೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪೇದೆಗಳು ಹೀಗೆ ಸುಳ್ಳು ಹೇಳುವ ಬದಲು ರಜೆ ಕೇಳಬಹುದಿತ್ತು. ವಿಶ್ರಾಂತಿ ಬೇಕು ಎಂದು ಹೇಳಬಹುದಿತ್ತು. ಪೊಲೀಸ್ ಸಿಬ್ಬಂದಿಯನ್ನು ರೊಟೇಶನ್ನಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ. ಹಾಗಾಗಿ ಯಾರಿಗೂ ಬರ್ಡನ್ ಆಗುತ್ತಿಲ್ಲ. ಇಷ್ಟಾದರೂ ಸುಳ್ಳು ಹೇಳಿದ್ದರಿಂದ ಅಮಾನತು ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ.
ಇವರನ್ನು ಹೊರತು ಪಡಿಸಿ ಇನ್ನು ಮೂವರು ಪೇದೆಗಳು ಸೋಂಕಿತ ಸಬ್ ಇನ್ಸ್ಪೆಕ್ಟರ್ ಜತೆ ಕೆಲಸ ಮಾಡಿದ್ದರು. ಹಾಗಾಗಿ ಅವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಕೊವಿಡ್-19 ಟೆಸ್ಟ್ ಮಾಡಲಾಗಿದ್ದು ಇನ್ನೂ ವರದಿ ಬಂದಿಲ್ಲ. (ಏಜೆನ್ಸೀಸ್)
ಇದನ್ನೂ ಓದಿ: ಸುಂದರಿ ಅಂತ ನಿನ್ನ ಸೆಲೆಕ್ಟ್ ಮಾಡಿಲ್ಲ … ಹಾಗಂತ ಅನುಷ್ಕಾ ಶರ್ಮಗೆ ಹೇಳಿದ್ದು ಯಾರು?