ವಿಜಯಪುರ: ದೇಶದೆಲ್ಲೆಡೆ ಕರೊನಾ 3ನೇ ಅಲೆ ವ್ಯಾಪಿಸುವ ಮತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೈಕೆಗಾಗಿ ಪ್ರತಿ ತಾಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಜತೆಗೆ ಮಕ್ಕಳ ಆರೈಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರಿಸ್ಥಿತಿ ತಕ್ಕಂತೆ ಹೆಚ್ಚಿನ ಅನುಕೂಲ ಮಾಡಿಕೊಳ್ಳಲಾಗುವುದು ಎಂದು ಆಡಳಿತ ಮತ್ತು ಸುಧಾರಣಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ. ಹೇಮಲತಾ ಹೇಳಿದರು.
ವಿಜಯಪುರದ ದೇವನಹಳ್ಳಿ ರಸ್ತೆಯ ಸರ್ಕಾರಿ ಮಕ್ಕಳ ವಸತಿ ನಿಲಯದಲ್ಲಿ ಸಜ್ಜುಗೊಳಿಸಿರುವ 50 ಹಾಸಿಗೆ ಸೌಲಭ್ಯದ ಮಕ್ಕಳ ಕೋವಿಡ್ ಕೇರ್ ಸೆಂಟರ್ ಅನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿದರು.
ಲಸಿಕೆ ಲಭ್ಯತೆಯನ್ನು ಆಧರಿಸಿ ಪ್ರತಿದಿನವೂ ಕರೊನಾ ಲಸಿಕೆಯನ್ನು ಕೊಡಲಾಗುತ್ತಿದೆ. ಈ ಕಾರ್ಯ ತೃಪ್ತಿಕರವಾಗಿ ಸಾಗಿದೆ ಎಂದರು.
ರಿಸ್ಕ್ ಇನ್ಸೆಂಟೀವ್ ಬಿಡುಗಡೆಗೆ ಭರವಸೆ: ಕಳೆದ ಸಾಲಿನಲ್ಲಿ ಕೋವಿಡ್ ಸಂದರ್ಭದಲ್ಲಿ ಸರ್ಕಾರ ಆರೋಗ್ಯ ಸಿಬ್ಬಂದಿಗೆ 6 ತಿಂಗಳು (ಮಾಹೆಯಾನ 10 ಸಾವಿರ ರೂ.) ಪ್ರೋತ್ಸಾಹಧನ ನೀಡಲು ನಿರ್ಧರಿಸಿತ್ತು. ಗುತ್ತಿಗೆ ನೌಕರರಿಗೆ ಇದುವರೆಗೂ ಪ್ರೋತ್ಸಾಹಧನ ಸಿಕ್ಕಿಲ್ಲ ಎಂಬುದನ್ನು ಸಮುದಾಯ ಆರೋಗ್ಯ ಕೇಂದ್ರದ ಡಿ ದರ್ಜೆ ನೌಕರರು ಪಿ. ಹೇಮಲತಾ ಅವರ ಗಮನಕ್ಕೆ ತಂದರು. ಈ ಬಗ್ಗೆ ಪರಿಶೀಲಿಸಿ, ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಸಿಇಒ ರವಿಕುಮಾರ್ ಅವರು, ಕೋವಿಡ್ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲೆಯಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗಳ ಬಗ್ಗೆ ಪಿ. ಹೇಮಲತಾ ಅವರಿಗೆ ಮಾಹಿತಿ ನೀಡಿದರು.
ತಹಸೀಲ್ದಾರ್ ಅನಿಲ್ ಕುಮಾರ್ ಆರೋಲಿಕರ್, ಜಿಲ್ಲಾ ಆರೋಗ್ಯಾಧಿಕಾರಿ ತಿಪ್ಪೇಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಸಂಜಯ್, ಜಿಲ್ಲಾ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿ ಪುಷ್ಪಾ ಜಿ ರಾಯ್ಕರ್, ಸಿಡಿಪಿಒ ಹೇಮಾ. ವಿಜಯಪುರ ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ಕುಮಾರ್, ಸಿಪಿಐ ಟಿ. ಶ್ರೀನಿವಾಸ್. ಸಮುದಾಯ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ಯಾಮಸುಂದರ್, ಕಂದಾಯಾಧಿಕಾರಿಗಳಾದ ಸಿ.ವೈ. ಕುಮಾರ್, ಮಹೇಶಾಚಾರ್, ವಿಐಗಳಾದ ಮಡಿವಾಳಪ್ಪ, ಸುನೀಲ್ ಮತ್ತಿತರರಿದ್ದರು.