ಗಾಂಧಿನಗರ: ಗುಜರಾತಿನಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಅವರ ಸಚಿವ ಸಂಪುಟಕ್ಕೆ 24 ಬಿಜೆಪಿ ಶಾಸಕರ ಸೇರ್ಪಡೆಯಾಗಿದೆ. ಇಂದು(ಸೆ.16) ನಡೆದ ಸರಳ ಸಮಾರಂಭದಲ್ಲಿ ರಾಜ್ಯದ ಗವರ್ನರ್ ಆಚಾರ್ಯ ದೇವವ್ರತ್ ಅವರು 24 ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಸಿಎಂ ಪಟೇಲ್ ಮತ್ತು ನಿಕಟಪೂರ್ವ ಸಿಎಂ ವಿಜಯ್ ರೂಪಾನಿ ಉಪಸ್ಥಿತರಿದ್ದರು.
ನೂತನ ಸಚಿವರ ಪಟ್ಟಿಯಲ್ಲಿ ಕಾನುಭಾಯಿ ದೇಸಾಯಿ, ಕಿರಿತ್ಸಿಂಹ ರಾಣಾ, ನರೇಶ್ ಪಟೇಲ್, ಪ್ರದೀಪ್ ಪರ್ಮಾರ್, ಅರ್ಜುನ್ಸಿಂಹ ಚೌಹಾಣ್, ರಾಜೇಂದ್ರ ತ್ರಿವೇದಿ, ಜಿತು ವಾಘಾನಿ, ಋಷಿಕೇಶ್ ಪಟೇಲ್, ಪೂರ್ಣೇಶ್ ಮೋದಿ ಮತ್ತು ರಾಘವಜಿ ಪಟೇಲ್ ಮುಂತಾದವರು ಇದ್ದಾರೆ. ನೂತನ ಸಚಿವ ಸಂಪುಟದ ಮೊದಲ ಸಭೆಯು ಇಂದು ಸಂಜೆ 4.30 ಕ್ಕೆ ನಡೆಯಲಿದೆ.
ಇದನ್ನೂ ಓದಿ: 6ರಿಂದ 8ನೇ ತರಗತಿ ವಿದ್ಯಾರ್ಥಿಗಳ ಹಾಜರಿಯಲ್ಲಿಲ್ಲ ಏರಿಕೆ, ಖಾಸಗಿ ಶಾಲೆಗಳಲ್ಲಿ ಆನ್ಲೈನ್ ಒಲವು!
ಡೆಪ್ಯುಟಿ ಸಿಎಂ ಆಗಿದ್ದು, ಎರಡನೇ ಬಾರಿ ಸಿಎಂ ಸ್ಥಾನದಿಂದ ವಂಚಿತರಾದ ಹಿರಿಯ ನಾಯಕ ನಿತಿನ್ ಪಟೇಲ್ ಬದಲಾಗಿ ಋಷಿಕೇಶ್ ಪಟೇಲ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಗುಜರಾತ್ ವಿಧಾನಸಭಾ ಸ್ಪೀಕರ್ ಆಗಿದ್ದ ರಾಜೇಂದ್ರ ತ್ರಿವೇದಿ ಅವರು, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸ್ವಲ್ಪ ಹೊತ್ತು ಮುಂಚೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಿರಿಯ ಶಾಸಕಿ ನೀಮಾಬೇನ್ ಆಚಾರ್ಯ ಅವರನ್ನು ವಿಧಾನಸಭೆಯ ಮಧ್ಯಂತರ ಸ್ಪೀಕರ್ ಆಗಿ ನೇಮಿಸಲಾಗುವುದು ಎಂದು ವರದಿಗಳು ಹೇಳಿವೆ. (ಏಜೆನ್ಸೀಸ್)