ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಬ್ಯಾನಳ್ಳಿ ಗ್ರಾಮದಲ್ಲಿ ಮುಕ್ತಾಯ ಹಂತ ತಲುಪಿದ ಜಲಜೀವನ ಮಿಷನ್ ಯೋಜನೆ ಕಾಮಗಾರಿಯನ್ನು ಜಿ.ಪಂ. ಸಿಇಒ ಪ್ರಿಯಾಂಗಾ ಎಂ. ಸೋಮವಾರ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಜಿಲ್ಲೆಯ 227 ಗ್ರಾಮಗಳನ್ನು ಮಾ. 2022ರೊಳಗೆ ಕೊಳಚೆ ಮುಕ್ತ ಗ್ರಾಮಗಳನ್ನಾಗಿ ಮಾಡುವ ಗುರಿ ಇದೆ. ಪ್ರತಿ ತಾಲೂಕಿನ 10 ಶಾಲೆಗಳ ಆಟದ ಮೈದಾನ ಸೇರಿ ಜಿಲ್ಲೆಯ ಒಟ್ಟು 100 ಶಾಲೆಗಳ ಆಟದ ಮೈದಾನಗಳನ್ನು ಅಭಿವೃದ್ಧಿಪಡಿಸಲಾಗುವುದು. ಜಿಪಂ, ತಾಪಂ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅನುದಾನದಲ್ಲಿ ಹೋಬಳಿಗೆ ಒಂದು ಮಾದರಿ ಅಂಗನವಾಡಿ ತೆರೆದು ಬೇಕಾಗುವ ಸಾಮಗ್ರಿ ಮತ್ತು ಬಾಲ ಸ್ನೇಹಿ ಪೇಂಟಿಂಗ್ ಮಾಡಿಸಲಾಗುವುದು ಎಂದರು. ಶಾಲೆಯ ಕಟ್ಟಡ ಹಾಗೂ ಶೌಚಗೃಹ ರಿಪೇರಿ ಮಾಡಿಸಲಾಗುವುದು. ಪ್ರಸಕ್ತ ವರ್ಷ ನರೇಗಾ ಯೋಜನೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಆ ಗ್ರಾಮವನ್ನು ಕೊಳಚೆ ಮುಕ್ತ ಮಾಡಲಾಗುವುದು. ಈ ಹಿಂದೆ ಬಾಚಣಕಿ ಗ್ರಾಪಂಗೆ ಭೇಟಿ ನೀಡಿ ನರೇಗಾ ಕಾಮಗಾರಿ ವೀಕ್ಷಣೆ ಮಾಡಿದ್ದೇನೆ. ಜಲಜೀವನ ಮಿಷನ್ ಯೋಜನೆಯಡಿ ಬಾಚಣಕಿ ಜಲಾಶಯದ ನೀರನ್ನು ಇಂದೂರ ಮತ್ತು ಕೊಪ್ಪಕ್ಕೆ ನೀಡುವ ಬಗ್ಗೆ ಪ್ರಸ್ತಾವನೆ ಇದ್ದ ಕಾರಣ ಜಲಾಶಯಕ್ಕೆ ಮತ್ತು ಮಾದರಿ ಅಂಗನವಾಡಿಗೆ ಭೇಟಿ ನೀಡಿದ್ದೇನೆ ಎಂದರು. ನಂತರ ಅವರು ಜಲಜೀವನ ಮಿಷನ್ ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ತಾಪಂ ಇಒ ಪ್ರವೀಣ ಕಟ್ಟಿ, ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಟಿ.ವೈ. ದಾಸನಕೊಪ್ಪ, ರಾಜೇಶ್ವರಿ ಕದಂ, ಜಿಪಂ ಇಂಜಿನಿಯರ್ ಪ್ರದೀಪ ಭಟ್ಟ ಇದ್ದರು.