ಚೆನ್ನೈ: ಮೂಢನಂಬಿಕೆಯಿಂದ ಎಂತೆಂತಹ ಸಮಸ್ಯೆಗಳಾಗಬಹುದು ಎನ್ನುವುದು ಇತ್ತೀಚಿನ ಕೆಲ ಘಟನೆಗಳಲ್ಲಿ ಗೊತ್ತಾಗಿದೆ. ಆದರೂ ಎಚ್ಚೆತ್ತುಕೊಳ್ಳದ ವ್ಯಕ್ತಿಯೊಬ್ಬ ಟೈಫಾಯ್ಡ್ನಿಂದ ಬಳಲುತ್ತಿದ್ದ ಮಗಳಿಗೆ ಭೂತ ಹಿಡಿದಿದೆಯೆಂದು ಚಿಕಿತ್ಸೆ ಕೊಡಿಸದೆ, ಮಂತ್ರವಾದಿ ಬಳಿ ಕರೆದುಕೊಂಡ ಹೋದ ಪರಿಣಾಮ ಯುವತಿ ಕೊನೆಯ ಉಸಿರೆಳೆಯುವಂತಾಗಿದೆ.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ನಿವಾಸಿ ಥರಾಣಿ (19) ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಒಂಬತ್ತು ವರ್ಷಗಳ ಹಿಂದೆ ಆಕೆಯ ತಾಯಿ ಮೃತಳಾಗಿದ್ದಳಂತೆ. ತಾಯಿಯ ನೆನಪಾದಾಗೆಲ್ಲ ಥರಾಣಿ ಆಕೆಯ ಸಮಾಧಿಯ ಬಳಿ ಹೋಗಿ ಕುಳಿತೆದ್ದು ಬರುತ್ತಿದ್ದಳಂತೆ. ಇತ್ತೀಚೆಗೆ ಹಾಗೆ ಸಮಾಧಿ ಬಳಿ ಹೋಗಿ ಬಂದಾಗಿನಿಂದ ಆಕೆ ಆರೋಗ್ಯ ಹದಗೆಟ್ಟಿದೆ. ಮಗಳ ಮೇಲೆ ಹೆಂಡತಿಯ ಭೂತ ಸೇರಿಕೊಂಡಿದೆ. ಆದ್ದರಿಂದಲೇ ಆಕೆ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ ಎಂದು ಆಕೆಯ ತಂದೆ ಕಲ್ಪನೆ ಮಾಡಿಕೊಂಡಿದ್ದಾನೆ.
ಮಗಳ ಮೇಲೆ ಹೆಂಡತಿಯ ಭೂತವಿದ್ದು, ಅದನ್ನು ಬಿಡಿಸಬೇಕೆಂದು ಮಂತ್ರವಾದಿಯೊಬ್ಬರ ಬಳಿ ಮಗಳನ್ನು ಕರೆದುಕೊಂಡು ಹೋಗಿದ್ದಾನೆ. ಆ ಮಂತ್ರವಾಗಿ ಥರಾಣಿಯನ್ನು ಒಂದು ಬಾಕ್ಸ್ನೊಳಗೆ ಕೂಡಿಟ್ಟು, ಅದರೊಳಗೆ ಹೊಗೆ ಹಾಕಿದ್ದಾನೆ. ಮೊದಲೇ ಅನಾರೋಗ್ಯಕ್ಕೆ ಈಡಾಗಿದ್ದ ಥರಾಣಿ ಹೊಗೆ ತಾಳಲಾರದೆ ಅಲ್ಲೇ ಎಚ್ಚರ ತಪ್ಪಿ ಬಿದ್ದಿದ್ದಾಳೆ. ಅದಾದ ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಥರಾಣಿಗೆ ಟೈಫಾಯ್ಡ್ ಆಗಿರುವುದಾಗಿ ತಿಳಿಸಿದ್ದಾರೆ.
ಮಗಳಿಗೆ ಟೈಫಾಯ್ಡ್ ಆಗಿರುವುದು ಗೊತ್ತಾದರೂ ಅಪ್ಪ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಲ್ಲ. ಬದಲಾಗಿ ಆಕೆಯನ್ನು ಇನ್ನೊಬ್ಬ ಮಂತ್ರವಾದಿ ಬಳಿ ಕರೆದುಕೊಂಡು ಹೋಗಿದ್ದಾನೆ. ಅನಾರೋಗ್ಯ ತೀವ್ರವಾಗಿದ್ದು ಆಕೆ ನಡೆದಾಡಲೂ ಕಷ್ಟವಾಗುವ ಸ್ಥಿತಿ ತಲುಪಿದ್ದಾಳೆ. ಅದಾದ ನಂತರ ಆಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಆದರೆ ಆರೋಗ್ಯ ಸಂಪೂರ್ಣವಾಗಿ ಕ್ಷೀಣಿಸಿದ್ದರಿಂದಾಗಿ ಆಕೆ ಅಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.
ಅನಾರೋಗ್ಯದಿಂದ ಥರಾಣಿ ಸಾವನ್ನಪ್ಪಿರುವುದಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಶವಪರೀಕ್ಷೆಯ ವರದಿಯ ಆಧಾರದ ಮೇಲೆ ಬದಲಾಯಿಸಲಾಗುವುದು ಎಂದು ಹೇಳಲಾಗಿದೆ. (ಏಜೆನ್ಸೀಸ್)
ನವ ದಂಪತಿಗೆ ಪೆಟ್ರೋಲ್, ಸಿಲಿಂಡರ್ ಗಿಫ್ಟ್! ಸ್ನೇಹಿತರೆಂದರೆ ಹೀಗಿರಬೇಕು ಎನ್ನುತ್ತಿದ್ದಾರೆ ನೆಟ್ಟಿಗರು