ಶಿಕಾರಿಪುರ: ತಾಲೂಕಿನ ಕಸಬಾ ಏತ ನೀರಾವರಿ ಯೋಜನೆಗೆ ಅ.19ರಂದು ಸಿಎಂ ಯಡಿಯೂರಪ್ಪ ಚಾಲನೆ ನೀಡುವರು ಎಂದು ಲೋಕಸಭಾ ದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ಕೃಷಿ ಇಲಾಖೆ ಮತ್ತು ಕೃಷಿ ಪ್ರಮಾಣ ಸಂಸ್ಥೆ ಸೋಮವಾರ ಆಯೋಜಿಸಿದ್ದ ಸಾವಯವ ಕೃಷಿ ಮತ್ತು ಪ್ರಮಾಣೀಕರಣ ತರಬೇತಿ, ಕಿಸಾನ್ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ಈ ಯೋಜನೆಯಿಂದ 7 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.
ಶಿವಮೊಗ್ಗ ಜಿಲ್ಲೆಯ ಜತೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಇತರೆಡೆ ಕಾಳುಮೆಣಸು, ಏಲಕ್ಕಿ ಸೇರಿ ವಿವಿಧ ಸಾಂಬಾರ ಪದಾರ್ಥ ಬೆಳೆಯುತ್ತಿದ್ದಾರೆ. ಹೀಗಾಗಿ ಶಿವಮೊಗ್ಗ-ಭದ್ರಾವತಿ ನಡುವೆ 100 ಎಕರೆ ಪ್ರದೇಶದಲ್ಲಿ ಸ್ಪೈಸ್ ಪಾರ್ಕ್ ನಿರ್ವಿುಸಲು ಚಿಂತಿಸಲಾಗಿದೆ. ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಶಿಕಾರಿಪುರದಲ್ಲಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಅತ್ಯಧಿಕ ರಾಸಾಯನಿಕ ಬಳಕೆಯಿಂದ ಭೂಮಿಗೆ ವಿಷಪ್ರಾಶನವಾದಂತಾಗಿದೆ. ರೈತರು ಸಾವಯವ ಕೃಷಿ ಪದ್ಧತಿಗೆ ಆದ್ಯತೆ ನೀಡಬೇಕು. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಅನುದಾನ ನೀಡಿವೆ. ಬಿ.ಎಸ್.ಯಡಿಯೂರಪ್ಪ ಡಿಸಿಎಂ ಆಗಿದ್ದಾಗ ಸಾವಯವ ಕೃಷಿಗೆ 200 ಕೋಟಿ ರೂ. ಅನುದಾನ ನೀಡಿದ್ದರು. ಸಿಎಂ ಆದ ಬಳಿಕ ಹಲವು ಯೋಜನೆ ಜಾರಿಗೆ ತಂದಿದ್ದಾರೆ ಎಂದು ಶ್ಲಾಘಿಸಿದರು.
ತಾಪಂ ಅಧ್ಯಕ್ಷ ಉಡುಗಣಿ ಪ್ರಕಾಶ್, ಮೆಸ್ಕಾಂ ನಿರ್ದೇಶಕ ರಾಮಾ ನಾಯಕ್, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಮಿಲಿಟರಿ ಬಸವರಾಜ್, ಭದ್ರಾ ಕಾಡಾ ಸದಸ್ಯ ರುದ್ರಮೂರ್ತಿ, ಜಿಪಂ ಸದಸ್ಯರಾದ ಮಮತಾ ಸಾಲಿ, ರೇಣುಕಾ ಹನುಮಂತಪ್ಪ, ಸಹಾಯಕ ಕೃಷಿ ನಿರ್ದೇಶಕ ಕಿರಣ್ಕುಮಾರ್, ಮಂಜುನಾಥ್ ಇತರರಿದ್ದರು.