ಜಮ್ಮು-ಕಾಶ್ಮೀರ: ದೇಶದಲ್ಲಿ ಪರಿಸರ ಸಂರಕ್ಷಣೆ, ಸಾಮಾಜಿಕ ಸೌಹಾರ್ದತೆ ಹಾಗೂ ಸಾಂಪ್ರದಾಯಿಕ ಕುಟುಂಬ ಪದ್ದತಿಯನ್ನು ಭದ್ರಪಡಿಸುವ ನಿಟ್ಟಿನಲ್ಲಿ ಸಂಘ ಮತ್ತು ಅದರ ಅಂಗಸಂಸ್ಥೆಗಳು ಕೆಲಸ ಮಾಡಬೇಕೆಂದು ಆರ್ಎಸ್ಎಸ್ನ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ಮೂರು ದಿನಗಳ ಜಮ್ಮು-ಕಾಶ್ಮೀರ ಪ್ರವಾಸದಲ್ಲಿರುವ ಮೋಹನ್ ಭಾಗವತ್, ಆರ್ಎಸ್ಎಸ್ ಸಹಭಾಗಿತ್ವದಲ್ಲಿ ಆಯೋಜನೆಗೊಂಡಿದ್ದ ಸಮನ್ವ ಬೈಠಕ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದಾರೆ.
ಆರ್ಎಸ್ಎಸ್ ಸಂದೇಶವನ್ನು ಪ್ರತಿ ಮನೆಗೂ ತಲುಪುವಂತೆ ಸಾಂಸ್ಥಿಕ ಜಾಲಗಳನ್ನು ಮತ್ತಷ್ಟು ಹರಡುವ ಅಗತ್ಯವಿದೆ. 2025ರಲ್ಲಿ ಆರ್ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ನಿಟ್ಟಿನಲ್ಲಿ ನಾವು ನಮ್ಮ ಜಾಲವನ್ನು ಮತ್ತಷ್ಟು ಹರಡಬೇಕಿದೆ.
ಇದನ್ನೂ ಓದಿ: ಉದ್ಯೋಗಾಕಾಂಕ್ಷಿ ಆತ್ಮಹತ್ಯೆ ಪ್ರಕರಣ; ತೆಲಂಗಾಣದಲ್ಲಿ ಯುವಕರ ಕನಸು, ಆಕಾಂಕ್ಷೆಗಳ ಹತ್ಯೆ ಮಾಡಲಾಗಿದೆ: ರಾಹುಲ್ ಗಾಂಧಿ
ದೇಶದಲ್ಲಿ ಪರಿಸರ ಸಂರಕ್ಷಣೆ, ಸಾಮಾಜಿಕ ಸೌಹಾರ್ದತೆ ಹಾಗೂ ಸಾಂಪ್ರದಾಯಿಕ ಕುಟುಂಬ ಪದ್ದತಿಯನ್ನು ಭದ್ರಪಡಿಸುವ ನಿಟ್ಟಿನಲ್ಲಿ ಸಂಘ ಮತ್ತು ಅದರ ಅಂಗಸಂಸ್ಥೆಗಳು ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಿದೆ. ಗ್ರಾಮಗಳ ಅಭಿವೃದ್ಧಿ ಮತ್ತು ಗ್ರಾಮೀಣ ಆರ್ಥಿಕತೆಗಾಗಿ ನಾವು ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯತೆ ಇದೆ ಎಂದು ಹೇಳಿದ್ದಾರೆ.
ಸಮನ್ವ ಬೈಠಕ್ ಕಾರ್ಯಕ್ರಮದಲ್ಲಿ 38 ಸಂಘಟನೆಯ 100ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಇದಲ್ಲದೆ ಸಭೆಯಲ್ಲಿ ವಿವಿಧ ಸಾಮಾಜಿಕ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು.