ಹಾವೇರಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದ್ದು, ಗುರುವಾರ ಮೂವರು ನರ್ಸ್, ಇಬ್ಬರು ಪೊಲೀಸ್ ಪೇದೆಗಳು, ಒಬ್ಬರು ಸರ್ಕಾರಿ ವೈದ್ಯ ಸೇರಿ 18 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಹಾವೇರಿ ತಾಲೂಕಿನಲ್ಲಿ 8, ರಾಣೆಬೆನ್ನೂರ ತಾಲೂಕು 5, ಹಾನಗಲ್ಲ 2, ಶಿಗ್ಗಾಂವಿ 2, ಬ್ಯಾಡಗಿ ತಾಲೂಕಿನಲ್ಲಿ ಒಬ್ಬರಿಗೆ ಸೋಂಕು ಖಚಿತವಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 230ಕ್ಕೇರಿದೆ. ಗುರುವಾರ 50 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 112 ಪ್ರಕರಣಗಳು ಸಕ್ರಿಯವಾಗಿವೆ.
ಹಾವೇರಿ ತಾಲೂಕಿನ ಕನವಳ್ಳಿಯ 55 ವರ್ಷದ ಪುರುಷ, 45 ವರ್ಷದ ಮಹಿಳೆ, 27ವರ್ಷದ ಪುರುಷ, 23 ವರ್ಷದ ಯುವತಿ, ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಆಗಿದ್ದ 27 ವರ್ಷದ ಮಹಿಳೆ, 20 ವರ್ಷದ ಯುವತಿ, 32 ವರ್ಷದ ಪುರುಷ, ಭೂವೀರಾಪುರದ ಕಂಟೇನ್ಮೆಂಟ್ ಜೋನ್ನ 27 ವರ್ಷದ ಮಹಿಳೆ, ರಾಣೆಬೆನ್ನೂರ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯ ಬ್ಯಾಡಗಿ ತಾಲೂಕಿನ ಕದರಮಂಡಲಗಿಯ 32 ವರ್ಷದ ಪುರುಷ, ರಾಣೆಬೆನ್ನೂರ ತಾಲೂಕು ಬೆನಕನಕೊಂಡದ 22 ವರ್ಷದ ಮಹಿಳೆ, 31 ವರ್ಷದ ಮಹಿಳೆ, ಸಿದ್ಧೇಶ್ವರ ನಗರದ 42 ವರ್ಷದ ಪುರುಷ, 40 ವರ್ಷದ ಮಹಿಳೆ, ಬಸವೇಶ್ವನಗರ 46 ವರ್ಷದ ಪುರುಷ, ಶಿಗ್ಗಾಂವಿ ತಾಲೂಕು ಹೊಸೂರಯತ್ನಳ್ಳಿ ಗ್ರಾಮದ 70 ವರ್ಷದ ಪುರುಷ, ಮೈಸೂರಗೆ ಹೋಗಿದ್ದ ಬಂದಿದ್ದ ಬಂಕಾಪುರದ ಚೌಡನಕೇರಿಯ 40 ವರ್ಷದ ಪುರುಷ. ಹಾನಗಲ್ಲ ತಾಲೂಕು ಬೊಮ್ಮನಹಳ್ಳಿ ಗ್ರಾಮದ 35 ವರ್ಷದ ಮಹಿಳೆ, ಹೋತನಹಳ್ಳಿಯ ಕಂಟೇನ್ಮೆಂಟ್ ಜೋನ್ನ 26 ವರ್ಷದ ಪುರುಷನಿಗೆ ಗುರುವಾರ ಸೋಂಕು ದೃಢಪಟ್ಟಿದೆ.
ಹಾವೇರಿ ತಾಲೂಕು ಕನವಳ್ಳಿ ಗ್ರಾಮದ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿದೆ. ರಾಣೆಬೆನ್ನೂರಿನ ಬೆನಕೊಂಡದ ಮಹಿಳೆಯ ಪ್ರಾಥಮಿಕ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಸರ್ಕಾರಿ ವೈದ್ಯ ಮೂಲತಃ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದವರಾಗಿದ್ದು, ರಾಣೆಬೆನ್ನೂರ ಸರ್ಕಾರಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಕರ್ತವ್ಯ ನಿರ್ವಹಿಸುತ್ತಿದ್ದರು. ಜು. 1ರಿಂದ ಜು. 4ರ ವರೆಗೆ ಕದರಮಂಡಲಗಿ ಗ್ರಾಮದ ಸ್ವಂತ ಮನೆಯಲ್ಲಿ ಉಳಿದಿದ್ದರು. ಐಎಲ್ಐ ಲಕ್ಷಣದ ಕಾರಣ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. ಇವರು ಜು. 6ರಿಂದ 8ರವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ರಾಣೆಬೆನ್ನೂರ ತಾಲೂಕು ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಜು. 8ರಂದು ರಾತ್ರಿ ಕೋವಿಡ್ ಪಾಸಿಟಿವ್ ಬಂದಿದೆ. ಐದು ಜನರನ್ನು ಪ್ರಾಥಮಿಕ ಸಂರ್ಪತರೆಂದು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ದ್ವಿತೀಯ ಸಂರ್ಪತರ ಪತ್ತೆ ಕಾರ್ಯ ನಡೆದಿದೆ.
ಹಾನಗಲ್ಲ ತಾಲೂಕು ಬೊಮ್ಮನಹಳ್ಳಿ ಮಹಿಳೆ ಕಂಟೇನ್ಮೆಂಟ್ ಜೋನ್ನಲ್ಲಿದ್ದರು. ಬಂಕಾಪುರದ 40ವರ್ಷದ ಪುರುಷ ಕಳೆದ 10ದಿನಗಳ ಹಿಂದೆ ಮೈಸೂರಗೆ ಹೋಗಿ ಬಂದಿದ್ದ. ಐಎಲ್ಐ ಕಾರಣ ಜು. 4ರಂದು ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. ಜು. 8ರಂದು ಪಾಸಿಟಿವ್ ಬಂದಿದೆ. ನಿಯಮಾನುಸಾರ ಸೋಂಕಿತರ ನಿವಾಸವಿರುವ ಪ್ರದೇಶದ 100ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಲಾಗಿದೆ. ನಗರ ಪ್ರದೇಶದ 200ಮೀ ಪ್ರದೇಶವನ್ನು ಹಾಗೂ ಸೋಂಕಿತರ ಸಂಪೂರ್ಣ ಗ್ರಾಮಗಳನ್ನು ಬಫರ್ ಜೋನ್ ಆಗಿ ಘೊಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.
ಹುಬ್ಬಳ್ಳಿ ಕಿಮ್ಸ್ನಲ್ಲಿ ಒಬ್ಬ ಸಾವು: ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಿಗ್ಗಾಂವಿ ತಾಲೂಕಿನ ಕೋವಿಡ್ ಸೋಂಕಿತ ವ್ಯಕ್ತಿ ಬುಧವಾರ ಮೃತಪಟ್ಟಿದ್ದಾನೆ. ಸರ್ಕಾರದ ಮಾರ್ಗಸೂಚಿ ಅನುಸಾರ ಶಿಗ್ಗಾಂವಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಈ ವ್ಯಕ್ತಿಯನ್ನು ಧಾರವಾಡ ಜಿಲ್ಲಾ ಕೋವಿಡ್-19 ಸೋಂಕಿತರೆಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಗುಣವಾದ ಐವತ್ತು ಜನ: ಕರೊನಾ ಸೋಂಕಿನಿಂದ ಚಿಕಿತ್ಸೆಗೆ ದಾಖಲಾಗಿದ್ದ 50ಜನ ಗುರುವಾರ ಗುಣವಾಗಿ ಬಿಡುಗಡೆ ಗೊಂಡಿದ್ದಾರೆ. ಅದರಲ್ಲಿ ಶಿಗ್ಗಾಂವಿ ತಾಲೂಕಿನ 32, ಸವಣೂರ 7, ಹಾನಗಲ್ಲ 6, ಹಿರೇಕೆರೂರ 3, ರಾಣೆಬೆನ್ನೂರಿನ ಇಬ್ಬರು ಗುಣವಾಗಿದ್ದಾರೆ.
ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ವಿರೋಧಿಸಿ ಪ್ರತಿಭಟನೆ
ರಾಣೆಬೆನ್ನೂರ: ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಬಾರದು ಎಂದು ಆಗ್ರಹಿಸಿ ಆಸ್ಪತ್ರೆಯ ಸುತ್ತಲಿನ ನಿವಾಸಿಗಳು ನಗರಸಭೆ ಸದಸ್ಯರ ನೇತೃತ್ವದಲ್ಲಿ ಗುರುವಾರ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ನಗರಸಭೆ ಸದಸ್ಯ ನಿಂಗರಾಜ ಕೋಡಿಹಳ್ಳಿ ಮಾತನಾಡಿ, ಆಸ್ಪತ್ರೆಯ ಹಿಂಬದಿಯಲ್ಲಿ ಕರೊನಾ ರೋಗಿಗಳಿಗೆ 35 ಬೆಡ್ನ ತಾತ್ಕಾಲಿಕ ಆಸ್ಪತ್ರೆ ಮಾಡಲಾಗಿದೆ. ಈಗಾಗಲೇ ಅದರಲ್ಲಿ ರೋಗಿಗಳು ಇದ್ದಾರೆ. ಇದರಿಂದಾಗಿ ಆಸ್ಪತ್ರೆಯ ಹಿಂಬದಿಯ ಕಾಂಪೌಂಡ್ಗೆ ಹೊಂದಿಕೊಂಡಿರುವ ಮನೆಗಳ ಜನ ಭಯಭೀತರಾಗಿದ್ದಾರೆ.
ರೋಗಿಗಳು ಕಿಟಕಿಗಳಿಂದ ಉಗುಳುವುದು, ಹ್ಯಾಂಡ್ ಗ್ಲೌಸ್ ಎಸೆಯುವುದು ಮಾಡಿದರೆ ಅದರಿಂದ ಮತ್ತೊಬ್ಬರಿಗೆ ರೋಗ ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಆದ್ದರಿಂದ ಕೋವಿಡ್ ರೋಗಿಗಳಿಗೆ ಜನವಸತಿ ಪ್ರದೇಶದಿಂದ ದೂರವಿರುವ ಹುಣಸೆಕಟ್ಟೆ ಅಥವಾ ಬೇರೆ ಸ್ಥಳದಲ್ಲಿ ತಾತ್ಕಾಲಿಕವಾಗಿ ಆಸ್ಪತ್ರೆ ನಿರ್ವಿುಸಿಕೊಡಬೇಕು. ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ವ್ಯವಸ್ಥೆ ಕಲ್ಪಿಸಬಾರದು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬಂದ ಪಿಎಸ್ಐ ಪ್ರಭು ಕೆಳಗಿನಮನಿ ಹಾಗೂ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಗೋಂವಿದರಾಜು ಮಾತನಾಡಿ, ಜಿಲ್ಲಾಡಳಿತದ ತೀರ್ವನದಂತೆ ತಾಲೂಕು ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ರೋಗಿಗಳು ಯಾವುದೇ ಕಾರಣಕ್ಕೂ ಉಗುಳುವುದನ್ನು ಮಾಡುವುದಿಲ್ಲ. ಹ್ಯಾಂಡ್ಗ್ಲೌಸ್ ಸೇರಿ ಇತರ ಯಾವುದೇ ವಸ್ತುಗಳನ್ನು ಹೊರಗಡೆ ಹಾಕುವುದಿಲ್ಲ. ಎಲ್ಲವನ್ನು ಕೂಡಲೆ ಸುಟ್ಟು ಹಾಕಲಾಗುತ್ತದೆ ಎಂದು ಮನವರಿಕೆ ಮಾಡಿದರು. ಇದಕ್ಕೆ ಪ್ರತಿಭಟನಾಕಾರರು ಒಪ್ಪದ ಕಾರಣ ‘ನಿಮ್ಮ ಮನವಿ ಏನಿದೆ ಎಂಬುದು ಬರೆದು ಕೊಡಿ. ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಅಲ್ಲಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪಿಎಸ್ಐ ಪ್ರಭು ಹೇಳಿದರು. ಇದಕ್ಕೆ ಒಪ್ಪಿದ ಪ್ರತಿಭಟನಾಕಾರರು ಮನವಿ ಸಲ್ಲಿಸಿ, ಪ್ರತಿಭಟನೆ ಹಿಂಪಡೆದರು. ನಗರಸಭೆ ಸದಸ್ಯರಾದ ಸಿದ್ದಪ್ಪ ಬಾಗಲರ, ರಮೇಶ ಕರಡೆಣ್ಣನವರ, ಚಂದ್ರಪ್ಪ ಕಂಬಳಿ, ಬಸಪ್ಪ ಕಂಬಳಿ, ಆನಂದ ಅಡಿವೇರ, ಆನಂದ ಹುಲಬನ್ನಿ, ಹನುಮಂತಪ್ಪ ದೇವರಗುಡ್ಡ, ಬಾಬು ಕಂಬಳಿ ಇತರರಿದ್ದರು.