ಹಾವೇರಿ: ಸಾರಿಗೆ ನೌಕರರ ಮುಷ್ಕರ ಎಂದಿನಂತೆ ಭಾನುವಾರವೂ ಮುಂದುವರಿದಿದೆ. ಆದರೆ, ಸರ್ಕಾರದ ಕೆಲ ಕಠಿಣ ಕ್ರಮಗಳಿಗೆ ಹೆದರಿರುವ ಅನೇಕ ನೌಕರರು ಕೆಲಸಕ್ಕೆ ಹಾಜರಾಗುತ್ತಿದ್ದು, ಬಸ್ಗಳ ಓಡಾಟ ಎಂದಿಗಿಂತ ಹೆಚ್ಚಾಗಿದೆ. ಇದರಿಂದ ಖಾಸಗಿ ವಾಹನಗಳಿಗೆ ದುಪ್ಪಟ್ಟು ದರ ನೀಡಿ ಪ್ರಯಾಣಿಸುತ್ತಿದ್ದ ಕೆಲ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಭಾನುವಾರ ಜಿಲ್ಲೆಯಲ್ಲಿ 140 ಬಸ್ಗಳು ಸಂಚಾರ ನಡೆಸಿವೆ. ಹಾವೇರಿಯಿಂದ ಶಿಗ್ಗಾಂವಿ ಮಾರ್ಗವಾಗಿ ಹುಬ್ಬಳ್ಳಿಗೆ ಹೆಚ್ಚಿನ ಬಸ್ಗಳು ಸಂಚರಿಸಿದರೆ, ಹಾವೇರಿ-ರಾಣೆಬೆನ್ನೂರ, ಹಾವೇರಿ-ಬ್ಯಾಡಗಿ, ಹಾವೇರಿ-ಹಿರೇಕೆರೂರ, ಹಾವೇರಿ-ಹಾನಗಲ್ಲ, ಹಾವೇರಿಯಿಂದ ಸವಣೂರ ಮಾರ್ಗವಾಗಿ ಗದಗಗೆ ಒಂದೊಂದು ಬಸ್ಗಳು ಸಂಚಾರ ಆರಂಭಿಸಿದವು.
ಸರ್ಕಾರ ದಿನೇದಿನೇ ನೌಕರರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತಿರುವುದರಿಂದ ಆತಂಕಕ್ಕೆ ಒಳಗಾಗಿರುವ ಚಾಲಕರು, ನಿರ್ವಾಹಕರು ಸೇರಿ 250ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯಕ್ಕೆ ಈಗಾಗಲೇ ಹಾಜರಾಗಿದ್ದಾರೆ. ಇದರಿಂದ ಭಾನುವಾರ ಜಿಲ್ಲೆಯ 6 ಡಿಪೋಗಳಿಂದ 140 ಬಸ್ಗಳು ಸಂಚರಿಸಿದವು. ಪ್ರಮುಖ ಸ್ಥಳಗಳ ನಡುವೆ ಬಸ್ಗಳು ಓಡಾಟ ಆರಂಭಿಸಿದ್ದರಿಂದ ಪ್ರಯಾಣಿಕರು ಬಸ್ನಲ್ಲೇ ಪ್ರಯಾಣಿಸಲು ಅನುಕೂಲವಾಯಿತು. ಭಾನುವಾರ ಹಿರೇಕೆರೂರಿನಿಂದ 30 ಬಸ್ಗಳು ಸಂಚರಿಸಿದವು. ರಾಣೆಬೆನ್ನೂರನಿಂದ ಅತಿಹೆಚ್ಚು 38 ಬಸ್ಗಳು ಓಡಾಡಿದವು. ಹಾವೇರಿ 37, ಬ್ಯಾಡಗಿ 18, ಹಾನಗಲ್ಲ 11 ಹಾಗೂ ಸವಣೂರನಿಂದ 7 ಬಸ್ಗಳು ಸಂಚರಿಸಿದವು. ಇದಲ್ಲದೇ ಬೇರೆ ಜಿಲ್ಲೆಗಳಿಂದಲೂ ಬಸ್ಗಳು ಆಗಮಿಸಿದವು. ಹುಬ್ಬಳ್ಳಿ, ಶಿರಸಿ, ದಾವಣಗೆರೆಯಿಂದಲೂ ಜಿಲ್ಲೆಯ ವಿವಿಧ ಕಡೆ ಬಸ್ಗಳು ಬಂದಿದ್ದವು.
ಖಾಸಗಿ ವಾಹನಗಳಿಗೆ ಪ್ರಯಾಣಿಕರ ಕೊರತೆ: ಬಸ್ ನಿಲ್ದಾಣದಲ್ಲಿ ಟೆಂಪೋ, ಖಾಸಗಿ ಬಸ್ಗಳು ಬಂದು ನಿಂತಿದ್ದರೂ ಅವು ಖಾಲಿ ನಿಲ್ಲುವಂತಾಯಿತು. ಬಸ್ಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಟೆಂಪೋಗಳು ನಿಲ್ದಾಣದಿಂದ ಜಾಗ ಖಾಲಿ ಮಾಡಿದವು.
ಡಾ. ಕೇಲಗಾರ ಭೇಟಿ, ಸಿಬ್ಬಂದಿ ಮನವೊಲಿಕೆ
ಎನ್ಡಬ್ಲ್ಯುಕೆಎಸ್ಆರ್ಟಿಸಿ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ. ಬಸವರಾಜ ಕೇಲಗಾರ ಭಾನುವಾರ ರಾಣೆಬೆನ್ನೂರ ನಗರದ ಹೊರವಲಯದ ಮಾಗೋಡ ರಸ್ತೆಯ ಸಾರಿಗೆ ಘಟಕಕ್ಕೆ ಭೇಟಿ ನೀಡಿ ಸಿಬ್ಬಂದಿಯೊಂದಿಗೆ ರ್ಚಚಿಸಿದರು. ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಅಲ್ಲದೆ, ಸರ್ಕಾರ ಸಿಬ್ಬಂದಿ ಮೇಲೆಯೂ ಕಠಿಣ ಕ್ರಮ ಜರುಗಿಸಲಿದೆ. ಆದ್ದರಿಂದ ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಮನವಿ ಮಾಡಿದರು. ಕೇಲಗಾರ ಅವರ ಮಾತು ಕೇಳಿದ ಕೆಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಭರವಸೆ ನೀಡಿದರು.