ಬೈಲಹೊಂಗಲ, ಬೆಳಗಾವಿ: ಸಂಪಗಾಂವ ಗ್ರಾಮದಿಂದ ಯರಗೊಪ್ಪ ಕ್ರಾಸ್ವರೆಗಿನ 2 ಕಿ.ಮೀ. ರಸ್ತೆ, ಹಾಗೂ ಕಳೆದ ಜೂನ್ ತಿಂಗಳಲ್ಲಿ 20 ಲಕ್ಷ ರೂ. ಅನುದಾನದಲ್ಲಿ ಡಾಂಬರೀಕರಣವಾದ ಯರಗೊಪ್ಪ ಕ್ರಾಸ್ದಿಂದ 1 ಕಿಮೀ ಅಂತರದ ಯರಗೊಪ್ಪ ಗ್ರಾಮ ಸಂಪರ್ಕಿಸುವ ರಸ್ತೆಗಳು ತಗ್ಗು-ಗುಂಡಿಗಳಿಂದ ಕೂಡಿದ್ದು, ರಸ್ತೆಯಲ್ಲಿ ಗುಂಡಿ ಇದೆಯೋ ಅಥವಾ ಗುಂಡಿಯಲ್ಲಿ ರಸ್ತೆ ಇದೆಯೋ ತಿಳಿಯದಾಗಿದೆ.
ರಸ್ತೆಗೆ ಹಾಕಿದ ಡಾಂಬರ್ ಮಾಯವಾಗಿದ್ದು, ಜಲ್ಲಿ ಕಲ್ಲು ಅಲಲ್ಲಿ ಶೇಖರಣೆಗೊಂಡು ಅಪೈಘಾತಗಳಿಗೆ ಎಡೆಮಾಡಿಕೊಡುವಂತಾಗಿದೆ. ಮಳೆ ಬಂದಾಗ ರಸ್ತೆಯ ಮೇಲೆ ನೀರು ಸಂಗ್ರಹವಾಗಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. ಒಂದು ಕಿಮೀ ಸಂಚರಿಸಲು ಅರ್ಧ ಗಂಟೆ ಸಮಯ ವ್ಯಯ ಮಾಡಬೇಕಾಗಿದೆ. ಅಲ್ಲದೆ, ಗ್ರಾಮದ ತಿರುವಿನ ರಸ್ತೆ ಅಂಚಿನ ಪಕ್ಕದಲ್ಲಿರುವ ಬಾವಿಯೊಂದಕ್ಕೆ ತಡಗೋಡೆ ಇಲ್ಲದ್ದರಿಂದಾಗಿ ಅದು ಅಪಾಯಕ್ಕೆ ಹಾತೊರೆಯುತ್ತಿದೆ.
ತಗ್ಗು ಗುಂಡಿಗಳಿಂದ ಕೂಡಿರುವ ರಸ್ತೆಯನ್ನು ಹಲವು ವರ್ಷಗಳು ಕಳೆದರೂ ಸುಧಾರಣೆ ಮಾಡಲು ಯಾವ ಅಧಿಕಾರಿಯೂ ಕ್ರಮ ತೆಗೆದುಕೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಯರಗೊಪ್ಪದ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆಯು ಇಲ್ಲದ್ದರಿಂದ ಅಲ್ಲಿರುವ ವಿದ್ಯಾರ್ಥಿಗಳು ದಿನನಿತ್ಯ ತರಗತಿಗೆ ಸರಿಯಾಗಿ ಹಾಜರಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ಮಳೆ ಗಾಳಿ ಎನ್ನದೆ ಕಾಲ್ನಡಿಗೆಯಲ್ಲಿ ನಡೆದು ಶಾಲೆಗೆ ಹೋಗುವ ಅನಿವಾರ್ಯತೆ ಅಲ್ಲಿನ ವಿದ್ಯಾರ್ಥಿಗಳಿಗೆ ಎದುರಾಗಿದೆ.
ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಆದರೆ, ಸದುಪಯೋಗ ಪಡೆದು ಗ್ರಾಮದ ಅಭಿವೃದ್ಧಿ ಮಾಡಬೇಕಾದ ಅಧಿಕಾರಿ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷೃ ವಹಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ರಸ್ತೆ ಸೇರಿ ಇನ್ನಿತರ ಮೂಲ ಸವಲತ್ತು ಕಲ್ಪಿಸಿಕೊಡುವ ಸೂಕ್ತ ವ್ಯವಸ್ಥೆ ಮಾಡಬೇಕಿದೆ ಎಂದು ಸ್ಥಳೀಯರ ಆಗ್ರಹಿಸಿದ್ದಾರೆ.