More

    13 ಸಾವಿರ ಸಾರಿಗೆ ಸಿಬ್ಬಂದಿ ನೇಮಕ; ಚಾಲಕ-ನಿರ್ವಾಹಕ ಮೆಕ್ಯಾನಿಕ್​ಗಳ ಭರ್ತಿ ಶೀಘ್ರ

    ಬೆಂಗಳೂರು: ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ 28.94 ಕೋಟಿ ರೂ.ಗೇರಿದೆ. ದಿನದ ಆದಾಯ 4.74 ಕೋಟಿ ರೂ. ದಾಟಿದೆ. ಯೋಜನೆಗೆ ಇನ್ನಷ್ಟು ಶಕ್ತಿ ತುಂಬಲು 13 ಸಾವಿರ ಚಾಲಕ ಕಮ್ ಕಂಡಕ್ಟರ್, ಮೆಕ್ಯಾನಿಕ್​ಗಳನ್ನು ನೇಮಿಸಿಕೊಳ್ಳಲು ಹಾಗೂ ನಾಲ್ಕು ಸಾವಿರ ಹೊಸ ಬಸ್ ಖರೀದಿಸಲು ತೀರ್ವನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಗೆ ಸುದೀರ್ಘ ಮೂರುವರೆ ತಾಸುಗಳ ಉತ್ತರ ನೀಡಿದ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಮುನ್ನೋಟ ಇದೆ ಎನ್ನುತ್ತಾ ಐದು ಗ್ಯಾರಂಟಿಗಳನ್ನು ಕೇಂದ್ರೀಕರಿಸಿ ಮಾತನಾಡಿದರು.

    ಐದರಲ್ಲಿ ಮೂರು ಗ್ಯಾರಂಟಿಗಳು ಜಾರಿಯಾಗಿವೆ. ಅತ್ತೆ, ಸೊಸೆ, ವಾರಗಿತ್ತಿ ಅಥವಾ ಮಗಳು ಯಾರೇ ಇರಲಿ, ಮನೆಯೊಡತಿಗೆ ಮಾಸಿಕ ಎರಡು ಸಾವಿರ ರೂ. ಭತ್ಯೆ ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ಇದೇ ತಿಂಗಳಲ್ಲಿ ಶುರುವಾಗಲಿದೆ. ಆ.16ರಿಂದ ಮನೆಯೊಡತಿ ಬ್ಯಾಂಕ್ ಖಾತೆಗೆ ಎರಡು ಸಾವಿರ ರೂ. ಜಮೆಯಾಗಲಿದೆ. ಪದವೀಧರ ಮತ್ತು ಡಿಪ್ಲೊಮಾ ವ್ಯಾಸಂಗ ಪೂರೈಸಿದ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ‘ಯುವನಿಧಿ’ ಯೋಜನೆ ಡಿಸೆಂಬರ್​ನಲ್ಲಿ ಜಾರಿಯಾಗಲಿದೆ ಎಂದರು. ‘ಶಕ್ತಿ’ ಯೋಜನೆಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.

    ವೆಚ್ಚದ ಲೆಕ್ಕ: ಐದು ಗ್ಯಾರಂಟಿಗಳಿಗೆ ವಾರ್ಷಿಕ ಒಟ್ಟು 52 ಸಾವಿರ ಕೋಟಿ ರೂ. ಬೇಕಾಗುತ್ತದೆ. ಪ್ರಸಕ್ತ ವರ್ಷದ ಉಳಿದ ಅವಧಿಗೆ 35,410 ಕೋಟಿ ರೂ. ಅಗತ್ಯವಿದ್ದು, ಅಷ್ಟೂ ಮೊತ್ತವನ್ನು ಬಜೆಟ್​ನಲ್ಲಿ ಮೀಸಲಿಡಲಾಗಿದೆ. ಜನ-ಸಾಮಾನ್ಯರ ಮೇಲೆ ತೆರಿಗೆ ಭಾರ ಹೊರಿಸದೆ ಗ್ಯಾರಂಟಿಗಳ ವೆಚ್ಚ ಸರಿದೂಗಿಸಲಿದ್ದೇವೆ. ಅಬಕಾರಿ ತೆರಿಗೆ, ನೋಂದಣಿ ಮತ್ತು ಮುದ್ರಾಂಕ, ಗಣಿಗಾರಿಕೆ ಶುಲ್ಕ ಹೆಚ್ಚಿಸಿದ್ದು, ವಾಣಿಜ್ಯ ತೆರಿಗೆ ಸಂಗ್ರಹ ಗುರಿ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ 13,500 ಕೋಟಿ ರೂ. ಸಂಗ್ರಹದ ನಿರೀಕ್ಷೆಯಿದೆ. ಜತೆಗೆ ಎಂಟು ಸಾವಿರ ಕೋಟಿ ರೂ. ಸಾಲ ಪಡೆಯಲಾಗುತ್ತಿದೆ. ಮೊದಲ ಬಾರಿಗೆ 12,522 ಕೋಟಿ ರೂ. ರಾಜಸ್ವ ಕೊರತೆ ಬಜೆಟ್ ಮಂಡಿಸಿದ್ದು, ಮುಂದಿನ ವರ್ಷದಿಂದ ಉಳಿತಾಯ ಬಜೆಟ್ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಖರ್ಚಿನ ಲೆಕ್ಕವನ್ನು ಸದನದ ಮುಂದಿಟ್ಟರು.

    ಶೋಷಿತರಿಗೂ ‘ಗೃಹಜ್ಯೋತಿ’: ಭಾಗ್ಯಜ್ಯೋತಿ, ಕುಟೀರಜ್ಯೋತಿ ಹಾಗೂ ಅಮೃತ ಜ್ಯೋತಿ ಯೋಜನೆಗಳ ಫಲಾನುಭವಿಗಳನ್ನು ಗೃಹಜ್ಯೋತಿ ಯೋಜನೆಗೆ ವ್ಯಾಪ್ತಿಗೆ ಸೇರಿಸಲು ಸಚಿವ ಸಂಪುಟ ಸಭೆ ಗುರುವಾರ ಅನುಮೋದಿಸಿದೆ. ಕುಟೀರ ಜ್ಯೋತಿಗೆ ಮಾಸಿಕ 40, ಅಮೃತಜ್ಯೋತಿಗೆ 75 ಯೂನಿಟ್ ವಿದ್ಯುತ್ ಉಚಿತ ಪೂರೈಕೆಗೆ ಸಮ್ಮತಿಸಲಾಗಿದೆ. ಫಲಾನುಭವಿ ಕುಟುಂಬಗಳು ಇಷ್ಟೊಂದು ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮಾಡಿಕೊಂಡಿರುವುದು ವಿರಳ. ಆದರೂ ವಾರ್ಷಿಕ ಸರಾಸರಿ ಆಧರಿಸಿ ಶೇ.10 ಹೆಚ್ಚುವರಿ ಯೂನಿಟ್ ಸೇರಿಸಿ ಉಚಿತವಾಗಿ ಪೂರೈಸಲಾಗುತ್ತದೆ. ಎಲ್ಲರಿಗೂ 200 ಯೂನಿಟ್ ಫ್ರೀ ಎಂದಿದ್ದರೂ ವಾರ್ಷಿಕ ಸರಾಸರಿ ಮಾನದಂಡ ವಿಧಿಸಲಾಗಿದೆ. ವಿದ್ಯುತ್ ದುರ್ಬಳಕೆ ಮತ್ತು ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು ಈ ಮಾನದಂಡದ ಮುಖ್ಯ ಉದ್ದೇಶವೆಂದು ಸಿದ್ದರಾಮಯ್ಯ ಸಮಜಾಯಿಷಿ ನೀಡಿದರು.

    ಈತ ಗಂಡಸಿಯ ಸಾಹಸಿ: ಚಿರತೆಯನ್ನು ಹಿಡಿದು ಬೈಕ್​ಗೆ ಕಟ್ಟಿಕೊಂಡು ಹೋಗಿ ಅರಣ್ಯ ಇಲಾಖೆಗೆ ಒಪ್ಪಿಸಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts