ಚನ್ನಮ್ಮ ಕಿತ್ತೂರು: ಪಕ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಎರಡು ಲಾರಿ ಹಾಗೂ ನಾಲ್ವರನ್ನು ಸ್ಥಳೀಯ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.
ಕೊಪ್ಪಳ ಜಿಲ್ಲೆಯ ಕವಲೂರದ ಸಂತೋಷ ಅಶೋಕ ಕಾಮೋಜಿ (21), ಮಹೇಶ ಶರಣಯ್ಯ ಕುರವತ್ತಿಮಠ (20), ಸವದತ್ತಿ ತಾಲೂಕಿನ ಕಗರಾಳ ಗ್ರಾಮದ ಬುಡಾನ್ಸಾಬ ಅಗಸರ(24), ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಸುಲೇಮಾನ್ ಅಗಸರ(20) ಬಂಧಿತರು. ಇನ್ನೋರ್ವ ಆರೋಪಿ ಹಾನಗಲ್ ತಾಲೂಕಿನ ಹಿರೂರನ ಸಿದ್ದನಗೌಡ ಚನ್ನಬಸಪ್ಪ ಪಾಟೀಲ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಿತ್ತೂರು ಪೋಲಿಸರು ತಿಳಿಸಿದ್ದಾರೆ. ಹಾವೇರಿಯಿಂದ ಮಹಾರಾಷ್ಟ್ರಕ್ಕೆ ಅಕ್ಕಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಎರಡು ಲಾರಿಗಳಲ್ಲಿ ಸಾಗಿಸುತ್ತಿದ 12 ಲಕ್ಷ ರೂ.ಮೌಲ್ಯದ ತಲಾ 50 ಕೆಜಿ ತೂಕದ 1,040 ಚೀಲ, ಎರಡು ಲಾರಿ, 4 ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.
ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿತ್ತೂರು ವೃತ್ತ ನಿರೀಕ್ಷಕ ಮಂಜುನಾಥ ಕುಸಗಲ್, ಪಿಎಸ್ಐ ದೇವರಾಜ ಉಳ್ಳಾಗಡ್ಡಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.