ಸಂಕೇಶ್ವರ, ಬೆಳಗಾವಿ: ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ವರ್ಷ 12 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಇಲ್ಲಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 66ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಖಾನೆಯಲ್ಲಿ ಪ್ರತಿದಿನ 50 ಸಾವಿರ ಲೀ. ಸಾಮರ್ಥ್ಯದ ಇಥೆನಾಲ್ ಘಟಕ ಸ್ಥಾಪನೆಯ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಸಹಕಾರಿ ಕಾರ್ಖಾನೆ ವಾರ್ಷಿಕ 6 ಸಾವಿರ ಕೋಟಿ ರೂ.ಕ್ಕಿಂತ ಅಧಿಕ ವಹಿವಾಟು ನಡೆಸುವ ಮೂಲಕ ಪ್ರಗತಿ ಪಥದತ್ತ ಸಾಗುತ್ತಿದೆ. ಸದಸ್ಯರು ತಾವು ಬೆಳೆದ ಕಬ್ಬನ್ನು ಕಾರ್ಖಾನೆಗೆ ಪೂರೈಸಿ ದಿ.ಅಪ್ಪಣಗೌಡ ಪಾಟೀಲ ಸ್ಥಾಪಿಸಿದ ಕಾರ್ಖಾನೆ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಒಂಬತ್ತು ಬಾರಿ ಶಾಸಕರಾಗಿದ್ದ ಉಮೇಶ ಕತ್ತಿ ಇಂದು ನಮ್ಮ ನಡುವೆ ಇಲ್ಲದಿರಬಹುದು. ಆದರೆ, ಅವರು ಮಾಡಿರುವ ಅಭಿವೃದ್ಧಿ ಕಾಮಗಾರಿಗಳು ಎಂದಿಗೂ ಜೀವಂತವಾಗಿರುತ್ತವೆ. 1985ರಲ್ಲಿ ನಮ್ಮ ತಂದೆಯನ್ನು ಕಳೆದುಕೊಂಡಾಗ ನನಗೆ ಹಾಗೂ ಅಣ್ಣನಿಗೆ ತಂದೆ-ತಾಯಿಯಾಗಿದ್ದ ಈ ಭಾಗದ ಜನತೆಯ ಸೇವೆ ಮಾಡಲು ಸದಾ ಸಿದ್ಧರಿದ್ದೇವೆ ಎಂದು ಭಾವುಕರಾದರು.
ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ನಿಖಿಲ್ ಕತ್ತಿ ಮಾತನಾಡಿ, ಕಳೆದ ಹಂಗಾಮಿನಲ್ಲಿ ಕಾರ್ಖಾನೆ 9.53 ಲಕ್ಷ ಮೆ.ಟನ್ ಕಬ್ಬು ನುರಿಸಿ ಶೇ.11.59 ಇಳುವರಿಯೊಂದಿಗೆ 11.05 ಲಕ್ಷ ಕ್ವಿಂಟಾಲ್ ಸಕ್ಕರೆ ಉತ್ಪಾದಿಸಿದ್ದು, ಪ್ರಸಕ್ತ ವರ್ಷ ಡಿಸ್ಟಿಲರಿ ಘಟಕದ ಸ್ಪಿರಿಟ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳದ ಜತೆಗೆ ಇಥೆನಾಲ್ ಘಟಕ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಚಿವ ಉಮೇಶ ಕತ್ತಿ ಸೇರಿದಂತೆ ಪ್ರಸಕ್ತ ವರ್ಷ ಅಗಲಿದ ಗಣ್ಯರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಕರ್ಕಿನಾಯಿಕ ವಾರ್ಷಿಕ ವರದಿ ಓದಿದರು. ಶ್ರೀಶೈಲಪ್ಪ ಮಗದುಮ್ಮ, ಮಹಾವೀರ ನಿಲಜಗಿ, ಸುನೀಲ ಪರ್ವತರಾವ್, ಎನ್.ಬಿ.ಪಾಟೀಲ, ಅಣ್ಣಾಸಾಹೇಬ ಪಾಟೀಲ, ಅಪ್ಪಾಸಾಹೇಬ ಶಿರಕೋಳಿ, ಶಿವನಾಯಿಕ ನಾಯಿಕ, ಪರಗೌಡ ಪಾಟೀಲ, ಸುರೇಶ ಬೆಲ್ಲದ, ಸುರೇಶ ದೊಡ್ಡಲಿಂಗನವರ, ಬಸವರಾಜ ಮರಡಿ, ಬಸವರಾಜ ಕಲ್ಲಟ್ಟಿ, ರಾಜೇಂದ್ರ ಪಾಟೀಲ, ಕಲಗೌಡ ಪಾಟೀಲ, ಕಲ್ಲಣ್ಣ ಚೌಗಲಾ, ಅಣ್ಣಪ್ಪ ಪಾಟೀಲ, ವಿಜಯ ಶೇರೆಕರ, ಸುಭಾಷ ಪಾಟೀಲ, ಅಶೋಕ ಚಂದಪ್ಪಗೋಳ, ಪರಗೌಡ ಪಾಟೀಲ, ಗುರುರಾಜ ಕುಲಕರ್ಣಿ, ದುಂಡಪ್ಪ ಹೆದ್ದೂರಿ, ಸತ್ಯಪ್ಪ ನಾಯಿಕ, ಶ್ರೀಕಾಂತ ಹತನೂರೆ, ಸಂಜಯ ಶಿರಕೋಳಿ, ಶಿವಾನಂದ ಮುಡಸಿ, ಪ್ರಶಾಂತ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಸುಭಾಷ ನಾಶಿಪುಡಿ, ಬಾಬಾಸಾಹೇಬ ಅರಬೋಳೆ ಇತರರಿದ್ದರು.