ಆಂಧ್ರಪ್ರದೇಶ: ಅಪಘಾತಗಳು ಅಥವಾ ಗಂಭೀರ ವೈದ್ಯಕೀಯ ಸಮಸ್ಯೆಗಳು ಉಂಟಾದಾಗ ಆಂಬ್ಯುಲೆನ್ಸ್ಗಳು ರೋಗಿಗಳನ್ನು ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಬಹುಮುಖ್ಯವಾದ ಪಾತ್ರ ವಹಿಸುತ್ತವೆ. ಆದರೆ, ಗುಡ್ಡಗಾಡು ಪ್ರದೇಶ ಹಾಗೂ ದೂರದ ಹಳ್ಳಿಗಳಲ್ಲಿ ಆಂಬ್ಯುಲೆನ್ಸ್ ಕೊರತೆಯಿಂದ ರೋಗಿಗಳನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಈ ವಿಚಾರವನ್ನು ಅರಿತ ವಿದ್ಯಾರ್ಥಿಯೊಬ್ಬ ಹೊಸ ಆವಿಷ್ಕಾರ ಮಾಡಿದ್ದಾನೆ.
ಹತ್ತು ಸಾವಿರ ರೂ. ವೆಚ್ಚದಲ್ಲಿ ತಯಾರಾಯ್ತು ಸೈಕಲ್ ಆಂಬುಲೆನ್ಸ್: ಗುಂಟೂರು ಜಿಲ್ಲೆಯ ಕೊಲ್ಲಿಪರ ಮಂಡಲದ ಅತ್ತೋಟದವರಾದ ಗೋವರ್ಧನ ನಾಯ್ಡು, 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಗೋವರ್ಧನ ನಾಯ್ಡು ಸೈಕಲ್ ಆಂಬ್ಯುಲೆನ್ಸ್ ತಯಾರಿಸಿದರೆ ವಿಜ್ಞಾನ ಶಿಕ್ಷಕ ರಾಯಪತಿ ಶಿವನಾಗೇಶ್ವರರಾವ್ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಬಳಸುವಂತೆ ಈ ಸೈಕಲ್ ವಿನ್ಯಾಸ ಮಾಡಿದ್ದಾರೆ. ಕೇವಲ ಹತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ಸೈಕಲ್ ಆಂಬುಲೆನ್ಸ್ ತಯಾರಿಸಿದ್ದಾರೆ.
ಆಂಬ್ಯುಲೆನ್ಸ್ ವಿಶೇಷತೆ?: ಬೈಸಿಕಲ್ನ ಹಿಂಭಾಗದಲ್ಲಿ ಎರಡು ಚಕ್ರಗಳನ್ನು ಹೊಂದಿರುವ ಸ್ಟ್ರೆಚರ್ ಅನ್ನು ಅಳವಡಿಸಲಾಗಿದೆ. ಬಿಸಿಲು ಮತ್ತು ಮಳೆಯನ್ನು ತಡೆಯುವಂತೆ ಡಿಸೈನ್ ಮಾಡಲಾಗಿದೆ.
ಪ್ರಥಮ ಚಿಕಿತ್ಸಾ ಕಿಟ್, ಆಮ್ಲಜನಕ ಸಿಲಿಂಡರ್, ಪಲ್ಸ್ ಮೀಟರ್, ಬಿಪಿ ಯಂತ್ರವನ್ನು ಒಳಗೊಂಡಿದೆ. ಇವುಗಳ ಜತೆಗೆ ಸೌರಶಕ್ತಿ ಚಾಲಿತ ಫ್ಯಾನ್, ಸೈರನ್, ಲೈಟ್ಗಳನ್ನು ಅಳವಡಿಸಲಾಗಿದೆ. ಮಾರ್ಗದರ್ಶಕ ಶಿವನಾಗೇಶ್ವರ ರಾವ್ ಶಿಕ್ಷಕರ ಪ್ರೋತ್ಸಾಹದಿಂದ ಇವೆಲ್ಲವನ್ನೂ ವಿನ್ಯಾಸಗೊಳಿಸಲಾಗಿದೆ ಎಂದು ವಿದ್ಯಾರ್ಥಿ ಹೇಳಿದ್ದಾನೆ.
ಪ್ರಶಸ್ತಿ: ಈ ಮಾದರಿಯು ಇನ್ಸ್ಪೈರ್ ಈವೆಂಟ್ನಲ್ಲಿ ರಾಷ್ಟ್ರೀಯ ಬಹುಮಾನವನ್ನು ಗೆದ್ದಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ಕೈಯಿಂದ ವಿದ್ಯಾರ್ಥಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾನೆ. ಶೀಘ್ರದಲ್ಲೇ ಜಪಾನ್ನಲ್ಲಿ ನಡೆಯಲಿರುವ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಅವರು ತಮ್ಮ ಮಾದರಿಯನ್ನು ಪ್ರದರ್ಶಿಸಲು ಅನುಮತಿ ಪಡೆದರು. ಈ ಬಗ್ಗೆ ಸಹ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಸಂತಸ ವ್ಯಕ್ತಪಡಿಸಿದರು.