ಮೂಡಿಗೆರೆ: ಯುವ ಜನರು ಜನ ಸೇವೆ ಮಾಡಿದರೆ ಸಮಾಜ ಬಹಳಷ್ಟು ಸುಧಾರಿಸುತ್ತದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ತಾಲೂಕು ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಗೆ ನೂತನ ಆಂಬುಲೆನ್ಸ್ ನೀಡಿ ಮಾತನಾಡಿ, ತುರ್ತು ಸಂದರ್ಭದಲ್ಲಿ ಕೆಲವೊಮ್ಮೆ ಸರ್ಕಾರಿ ಆಂಬುಲೆನ್ಸ್ಗಳು ಲಭ್ಯವಿರುವುದಿಲ್ಲ. ಆಗ ರೋಗಿಗಳು ಖಾಸಗಿ ಆಂಬುಲೆನ್ಸ್ ಮೊರೆ ಹೋಗುವುದು ಅನಿವಾರ್ಯ. ಆಂಬುಲೆನ್ಸ್ ಹೊಂದಿರುವ ಸಮಾಜ ಸೇವಕರಿಗೂ ರೋಗಿಗಳ ಸೇವೆ ಮಾಡಲು ಅವಕಾಶ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.
ಸ್ಥಳೀಯ ಸಮಾಜ ಸೇವಕರು ಕೆಲಸ ಮಾಡುತ್ತಿರುವುದರಿಂದ ಜಿಲ್ಲೆಯ ಬಹಳಷ್ಟು ಜನರಿಗೆ ಅನುಕೂಲವಾಗಿದೆ. ಅಂಥ ಪುಣ್ಯದ ಕೆಲಸದಲ್ಲಿ ಸಾಮಾಜಿಕ ಸೇವಾ ಸಕ್ರಿಯ ಸಂಸ್ಥೆ ತೊಡಗಿಸಿಕೊಂಡಿದೆ ಎಂದು ಶ್ಲಾಘಿಸಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಜಾತಿ, ಧರ್ಮ, ಭಾಷೆ ಲೆಕ್ಕಿಸದೆ ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿರುವ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಗೆ ಸರ್ಕಾರ ಅಗತ್ಯ ನೆರವು ಒದಗಿಸಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಅಧ್ಯಕ್ಷ ಫಿಶ್ ಮೋಣು, ಪಪಂ ಸದಸ್ಯರಾದ ಎಚ್.ಪಿ.ರಮೇಶ್, ಎಂ.ಎ.ಹಂಝ, ಮುಖಂಡರಾದ ಜಾಕೀರ್ ಹುಸೇನ್, ಎ.ಸಿ.ಆಯೂಬ್ ಹಾಜಿ, ಅಬ್ದುಲ್ ರಹಿಮಾನ್, ಎಲ್.ಬಿ.ರಮೇಶ್, ಬಿ.ಎಚ್.ಮಹಮ್ಮದ್, ಡಾ. ಕಿರಣ್, ಎಂ.ಸಿ.ಹೂವಪ್ಪ. ಎಂ.ಎಸ್.ಇಬ್ರಾಹಿಂ, ಇಸಾಕ್ ಭೂತನಕಾಡು, ಹುಸೇನ್ ಬಾಷಾ, ಮಹಮ್ಮದ್ ಜುಬೇರ್, ಪ್ರವೀಣ್ ಪೂಜಾರಿ ಇತರರಿದ್ದರು.