ದೊಡ್ಡಬಳ್ಳಾಪುರ ಗ್ರಾಮಾಂತರ: ಕೋಳಿ ತಿನ್ನುವುದರಿಂದ ಕರೊನಾ ಸೋಂಕು ಹರಡುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಕುಕ್ಕುಟೋಮದ್ಯಕ್ಕೆ ಭಾರಿ ಹೊಡೆತ ಬಿದ್ದಿದ್ದು ತಾಲೂಕಿನ ಮಧುರೆ ಸಮೀಪದ ಪುಟ್ಟಯ್ಯನ ಅಗ್ರಹಾರದಲ್ಲಿ 10 ಸಾವಿರ ಕೋಳಿಗಳನ್ನು ಸೋಮವಾರ ಜೀವಂತ ಸಮಾಧಿ ಮಾಡಲಾಗಿದೆ.
ರಾಜಗೋಪಾಲ ಎಂಬುವರು 10 ಸಾವಿರ ಕೋಳಿಗಳನ್ನು ಹೊಲದಲ್ಲಿ ಗುಂಡಿ ತೋಡಿ ಸಮಾಧಿ ಮಾಡಿದ್ದಾರೆ. ಕೋಳಿಗೆ ಕರೊನಾ ಸೋಂಕಿನ ವದಂತಿ ಹಬ್ಬಿದ್ದು ಯಾರೊಬ್ಬರೂ ಕೋಳಿ ಖರೀದಿಗೆ ಬರುತ್ತಿಲ್ಲ. ಲಕ್ಷಾಂತರ ರೂ. ಬಂಡವಾಳ ಹಾಕಿ ಕೋಳಿ ಸಾಕಿದ್ದು, ಖರೀದಿದಾರರಿಲ್ಲದೆ ವ್ಯಾಪಾರ ಸಂಪೂರ್ಣ ನೆಲಕಚ್ಚಿದೆ ಎಂದು ರಾಜಗೋಪಾಲ ಅಳಲು ತೋಡಿಕೊಂಡಿದ್ದಾರೆ.
ಉಚಿತ ಕೋಳಿಯೂ ಬೇಡ: ಸಾಕಿರುವ ಕೋಳಿಗಳನ್ನು ಉಚಿತವಾಗಿ ನೀಡಿದರೂ ಯಾರೂ ಕೊಳ್ಳಲು ಮುಂದೆ ಬರುತ್ತಿಲ್ಲ.
ಕೆಲವೆಡೆ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನರಲ್ಲಿ ಮತ್ತಷ್ಟು ಆತಂಕ ಮನೆಮಾಡಿದೆ. ಹಕ್ಕಿಜ್ವರ ಹಾಗೂ ಕರೊನಾ ಭೀತಿ ಕೋಳಿ ಸಾಕಣೆ ಮೇಲೆ ದುಷ್ಪರಿಣಾಮ ಬೀರಿರುವುದು ಕಂಡುಬಂದಿದೆ.
3 ತಿಂಗಳಿನಿಂದ ಸಾಕಿರುವ ಕೋಳಿಗಳನ್ನು ಕೊಂಡುಕೊಳ್ಳಲು ಯಾರೂ ಮನಸ್ಸು ಮಾಡುತ್ತಿಲ್ಲ. ಕೂಲಿಯವರಿಗೆ ಹಣ ನೀಡಲಾಗದ ಪರಿಸ್ಥಿತಿ ಇದೆ. ಉಚಿತವಾಗಿ ಕೊಡುತ್ತೇವೆ ಎಂದರೂ ಕೋಳಿ ತೆಗೆದುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ.
ರಾಜಗೋಪಾಲ
ರೈತ, ಪುಟ್ಟಯ್ಯನ ಅಗ್ರಹಾರ