ಚಾಮರಾನಗರ: ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಶ್ರೀ ಗೋಪಾಲಸ್ವಾಮಿ ದೇವಸ್ಥಾನವನ್ನು 10 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೊದ್ಧಾರ ಕಾಮಗಾರಿಗೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಶನಿವಾರ ಚಾಲನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಳ್ಯ ಗ್ರಾಮದ ಜನತೆ ದೈವದ ಕಾರ್ಯಗಳನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸುತ್ತಾರೆ. ದೇವರ ಪೂಜೆ ಹಾಗೂ ಇನ್ನಿತರ ಧಾರ್ಮಿಕ ಆಚರಣೆಗಳನ್ನು ಉತ್ಸಾಹದಿಂದ ಒಗ್ಗೂಡಿ ಮಾಡುತ್ತಾರೆ. ಇಲ್ಲಿ ಸುಮಾರು 30 ವಿವಿಧ ದೇವಾಲಯಗಳಿವೆ.
ಅದರಲ್ಲಿ ಪುರಾತನ ದೇವಾಲಯವಾದ ಶ್ರೀ ಗೋಪಾಲಸ್ವಾಮಿ ದೇವಾಲಯ ಜೀಣೋದ್ಧಾರ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದರು.
ಗ್ರಾಮದ ಯಜಮಾನರಾದ ಗೋಪಾಲನಾಯಕ, ಜಗದೀಶ್ ಮುಕುಂದ, ವಿಶ್ವಮೂರ್ತಿ ನಾಯಕ, ಸೀಗನಾಯಕ, ಮುಖಂಡರಾದ ಶಿವಮೂರ್ತಿ, ಮಂಜೇಶ್ ಮತ್ತಿತರಿದ್ದರು.