ಬಸವಕಲ್ಯಾಣ: ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗುಟ್ಕಾ ಸಾಗಿಸುತಿದ್ದ ವಾಹನದ ಮೇಲೆ ದಾಳಿ ನಡೆಸಿದ ಪೊಲೀಸ್ ತಂಡ ೧೫.೫೫ ಲಕ್ಷ ರೂ.ಮೌಲ್ಯದ ಗುಟ್ಕಾ ಜಪ್ತಿ ಮಾಡಿ, ಇಬ್ಬರನ್ನು ಗುರುವಾರ ಬಂಧಿಸಿದೆ.
ಬೆಂಗಳೂರು ಮೂಲದ ಶಾರುಖ್ ಹಾಗೂ ಹುಮನಾಬಾದ್ ತಾಲೂಕಿನ ಮರಕುಂದಾ ಗ್ರಾಮದ ಅಬ್ದುಲ್ ಫಯಾಜ್ ಬಂಧಿತರು. ಖಚಿತ ಮಾಹಿತಿ ಮೇರೆಗೆ ತಾಲೂಕಿನ ಉಮ್ಮಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ ೬೫ರ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಗುಟ್ಕಾ ಸಾಗಿಸುತಿದ್ದ ಒಂದು ಕಂಟೇನರ್ ಲಾರಿ ಹಾಗೂ ಗುಟ್ಕಾ ಪ್ಯಾಕೆಟ್ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗುಟ್ಕಾ ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಎಸ್ಪಿ ಚನ್ನಬಸವಣ್ಣ ಲಂಗೋಟಿ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಸವಕಲ್ಯಾಣ ಗ್ರಾಮೀಣ ಠಾಣೆಯ ಪಿಎಸ್ಐ ಅಂಬರೀಶ ವಾಗ್ಮೊರೆ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.