ಬೆಳಗಾವಿ: ವೈದ್ಯಕಿಯ ವಲಯದಲ್ಲಿ ಈಚೆಗೆ ಹೋಮಿಯೋಪಥಿಕ್ ಪದ್ಧತಿ ಜನಪ್ರಿಯಾಗುತ್ತಿದೆ. ದೇಶದಲ್ಲೇ ಮಾದರಿಯಾಗಿರುವಂತೆ ಬೆಳಗಾವಿ ಮಹಾನಗರದಲ್ಲಿ ಅತ್ಯಾಧುನಿಕ ಸಲಕರಣೆ ಹಾಗೂ ಸುಸಜ್ಜಿತ ಕಟ್ಟಡದಲ್ಲಿ ಕೆಎಲ್ಇ ಹೋಮಿಯೋಪಥಿಕ್ ಆಸ್ಪತ್ರೆ ಮತ್ತು ಕಾಲೇಜು ನಡೆಸಲಾಗುತ್ತಿದೆ ಎಂದು ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.
ಶುಕ್ರವಾರ ಕೆಎಲ್ಇ ಉನ್ನತ ಶಿಣ ಮತ್ತು ಸಂಶೋಧನಾ ಅಕಾಡೆಮಿ ಹಾಗೂ ಕೆಎಲ್ಇ ವಿಶ್ವವಿದ್ಯಾಲಯದ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ವತಿಯಿಂದ ಬಸವನ ಕುಡಚಿಯಲ್ಲಿ ನಿರ್ಮಿಸಿರುವ ಸಂಕಲ್ಪ ಕೆಎಲ್ಇ ವೆಲ್ನೆಸ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಿಟ್ಜರ್ಲೆಂಡ್ನಲ್ಲಿ ಸಂಪೂರ್ಣವಾಗಿ ಹೋಮಿಯೋಪಥಿಕ್ ಪದ್ಧತಿ ಅನುಸರಿಸುತ್ತಿದ್ದಾರೆ. ಕೆಎಲ್ಇ ಸಂಸ್ಥೆಯಿಂದ ಬೆಳಗಾವಿ ಮಹಾನಗರದ ಜನತೆಗೆ ಹೋಮಿಯೋಪಥಿಕ್ ಸೌಲಭ್ಯ ಕೈಗೆಟುಕುತ್ತಿದೆ. ಇಲ್ಲಿನ ಹೋಮಿಯೋಪಥಿಕ್ ಸೌಲಭ್ಯಗಳಿಂದಾಗಿ ಸ್ವಿಟ್ಜರ್ಲ್ಯಾಂಡ್ನಿಂದ ಇಬ್ಬರು ಕೆಎಲ್ಇ ಸಂಸ್ಥೆಗೆ ಅಭ್ಯಸಿಸಲು ಬಂದಿದ್ದಾರೆ. ಹೋಮಿಯೋಪಥಿಕ್ ಕಲಿತು ಅಲೋಪಥಿಕ್ ಬೋಧಿಸಬೇಡಿ. ಕಡ್ಡಾಯವಾಗಿ ಹೋಮಿಯೋಪಥಿಕ್ ಚಿಕಿತ್ಸೆಯನ್ನೇ ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಅನಿಲ ಬೆನಕೆ ಮಾತನಾಡಿ, ವೈದ್ಯರು ದೇವರಿಗೆ ಸಮಾನ. ಬಸವನ ಕುಡಚಿ ಎಂಬ ಹಳ್ಳಿಯಲ್ಲಿ ಉತ್ತಮ ಆರೋಗ್ಯ ಸೇವೆ ಸಿಗಬೇಕು ಎಂದು ಸಂಕಲ್ಪ ವೆಲ್ನೆಸ್ ಆರಂಭಿಸಿರುವುದಕ್ಕೆ ಕೆಎಲ್ಇ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರಲ್ಲದೆ, ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಚಾರ್ಯ ಡಾ. ಎಂ.ಎ.ಉಡಚನಕರ್ ಮಾತನಾಡಿ, ಕೇಂದ್ರದಲ್ಲಿ ಚಿಕಿತ್ಸೆ ಮಾತ್ರವಲ್ಲದೆ, ಕಾಯಿಲೆಗಳು ಬಾರದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತು ಜಾಗೃತಿ ಮೂಡಿಸಲಾಗುವುದು. ಅಮೃತ ಮಹೋತ್ಸವ ಸಂದರ್ಭದಲ್ಲಿರುವ ಡಾ.ಪ್ರಭಾಕರ್ ಕೋರೆ ಅವರಿಗೆ ಈ ವೆಲ್ನೆಸ್ ಅರ್ಪಿಸುತ್ತಿದ್ದೇವೆ ಎಂದರು.
ಕಾಹೇರ ಕುಲಸಚಿವ ಡಾ.ವಿ.ಎ.ಕೋಟಿವಾಲೆ, ನಗರಸೇವಕರಾದ ಬಸವರಾಜ ಮೊದಗೇಕರ, ರಾಜಶೇಖರ ಡೋಣಿ, ಡಾ. ಎಚ್. ಬಿ. ರಾಜಶೇಖರ, ಡಾ.ವಿ.ಡಿ.ಪಾಟೀಲ, ಡಾ.ಎಂ.ಎಸ್.ಗಣಾಚಾರಿ, ಡಾ.ಸುಹಾಸ ಕುಮಾರಶೆಟ್ಟಿ, ಡಾ.ಸುನೀಲ ಜಲಾಲಪುರೆ ಸೇರಿ ವಿದ್ಯಾರ್ಥಿಗಳು ಇದ್ದರು. ಡಾ. ಶಿಲ್ಪಾ ಪಾಟೀಲ ನಿರೂಪಿಸಿದರು. ಡಾ. ನಾಗರಾಜ ಹವಳದ ವಂದಿಸಿದರು.