ಬೀರೂರು: ಪಟ್ಟಣದ ಹಾಲಪ್ಪ ಬಡಾವಣೆಯಲ್ಲಿ ಭಾನುವಾರ ಹಿಂದು ಮಹಾಸಭಾ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ಮುಸ್ಲಿಮರು ವಿಶೇಷ ಪೂಜೆ ನೆರವೇರಿಸಿ, ನೃತ್ಯ ಮಾಡಿದರು. ದಣಿದವರಿಗೆ ನೀರು, ಹಣ್ಣು ಹಂಪಲು ನೀಡಿ ಸೌಹಾರ್ದ ಸಂದೇಶ ಸಾರಿದರು. ಎಲ್ಲ ಜಾತಿ, ಧರ್ಮಗಳಲ್ಲಿ ಸಾಮರಸ್ಯ ಮೂಡಿಸುವ ಚಿಂತನೆಯೊಂದಿಗೆ ಪ್ರತಿ ವರ್ಷ ಉತ್ಸವ ಹಮ್ಮಿಕೊಳ್ಳಲಾಗುತ್ತಿತ್ತು. ಈ ಸಂದರ್ಭದಲ್ಲಿ ಮದೀನ ಮಸೀದಿ ಹಾಗೂ ಮುಸ್ಲಿಮ್ ಸಮಾಜದಿಂದ ಹಣ್ಣು ಮತ್ತು ಕುಡಿಯುವ ನೀರು ವಿತರಿಸಿದ್ದು ವಿಶೇಷವಾಗಿತ್ತು. ಧಾರ್ವಿುಕ ಕಾರ್ಯಕ್ರಮದಲ್ಲಿ ಪೂಜೆ, ಭಜನೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪಟಾಕಿ, ಜಯಘೊಷ ಹಾಗೂ ಡಿಜೆಯೊಂದಿಗೆ ಭಾವೈಕ್ಯ ಗಣೇಶ ಮೂರ್ತಿಯನ್ನು ಬೀರೂರಿನ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಉದ್ದಕ್ಕೂ ಹಿಂದು, ಮುಸ್ಲಿಮ್ ಯುವಕರೆಲ್ಲ ಸೇರಿ ಭರ್ಜರಿ ಸ್ಟೆಪ್ ಹಾಕಿ ಸಂಭ್ರಮಿಸಿದರು. ರಸ್ತೆಯ ಅಕ್ಕಪಕ್ಕದಲ್ಲಿ ನಿಂತಿದ್ದ ಜನ ಗಣೇಶನ ಮೂರ್ತಿಗೆ ಪ್ರಾರ್ಥನೆ ಸಲ್ಲಿಸಿದರು. ಪಟ್ಟಣ ಸಮೀಪದ ದೇವನಕೆರೆಯಲ್ಲಿ ಜಲಸ್ತಂಭನ ಮಾಡಲಾಯಿತು. ಮುಂಜಾಗ್ರತಾ ಕ್ರಮವಾಗಿ ಬೀರೂರು, ಕಡೂರು ಹಾಗೂ ಬೇರೆ ಠಾಣೆಗಳಿಂದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.