ಹಾಸನ : ಪ್ರತಿ ವರ್ಷದಂತೆ ಈ ವರ್ಷವು ಕೂಡ ರಂಜಾನ್ ಹಬ್ಬದ ಅಂಗವಾಗಿ ಗುರುವಾರ ನಗರದ ಹೊಸಲೈನ್ ರಸ್ತೆ ಬಳಿಯ ಹಳೇ ಈದ್ಗಾ ಮೈದಾನದ ಆವರಣದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಜಾಗದ ಕೊರತೆಯಿಂದ ಮತ್ತು ತಡವಾಗಿ ಬಂದವರು ರಸ್ತೆ ಮೇಲೆ ನಿಂತು ಪ್ರಾರ್ಥನೆ ಸಲ್ಲಿಸಿದರು.
ಈದ್ಗಾ ಸಮಿತಿ ಅಧ್ಯಕ್ಷ ಸಮೀರ್ ಖಾನ್ ಮಾತನಾಡಿ, 30 ದಿನಗಳ ಕಾಲ ಉಪವಾಸವನ್ನು ಮಾಡಿ ಕೊನೆಯ ದಿವಸ ಪ್ರಾರ್ಥನೆಯೊಂದಿಗೆ ರಂಜಾನ್ ಉಪವಾಸ ಮುಕ್ತಾಯಗೊಳಿಸಿದ್ದೇವೆ. ಈ ದಿನ ವಿಶೇಷ ಪ್ರಾರ್ಥನೆಯೊಂದಿಗೆ ಜಗತ್ತಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಈಗ ಬರಗಾಲ ಎದುರಾಗಿದ್ದು, ಉತ್ತಮ ಮಳೆಯಾಗಿ ನಾಡು ಸುಭೀಕ್ಷವಾಗಿಲೆಂದು ವಿಶೇಷ ಪ್ರಾರ್ಥನೆ ಮಾಡಲಾಗಿದೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಮುಸ್ಲಿಂರಿಗೆ ಶುಭ ಹಾರೈಸುವ ಮೂಲಕ ಮತ ಸೆಳೆಯುವ ಪ್ರಯತ್ನ ಮಾಡಿದರು. ಶಾಸಕ ಎಚ್.ಪಿ.ಸ್ವರೂಪ್ ಮಾತನಾಡಿ, ಪ್ರತಿವರ್ಷವೂ ಕೂಡ ಮುಸ್ಲಿಂರು ರಂಜಾನ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನನ್ನ ಗೆಲುವಿಗೆ ಕಾರಣಕರ್ತರಾಗಿದ್ದು ಇದೇ ಮುಸಲ್ಮಾನವರು. ಅವರಿಗೆಲ್ಲ ಕೃತಜ್ಞತೆ ಹೇಳಿ ಹಬ್ಬದ ಶುಭಾಶಯ ಹೇಳಲು ಬಂದಿದ್ದೇನೆ. ಕಳೆದ ವರ್ಷ ಬಂದಾಗ ನಾನು ಶಾಸಕನಾಗಿರಲಿಲ್ಲ. ಈಗ ಶಾಸಕನಾಗಿ ಬಂದಿದ್ದೇನೆ. ಆ ಋಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ಹಾಸನ ವಿಧಾನಸಭೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಮಾತನಾಡಿ, ಒಂದು ತಿಂಗಳ ಕಾಲ ಉಪವಾಸ ವ್ರತ ಮುಗಿಸಿ ರಂಜಾನ್ ಹಬ್ಬ ಆಚರಿಸುವ ನಿಟ್ಟಿನಲ್ಲಿ ಹಳೆಯ ಈದ್ಗಾ ಮೈದಾನದಲ್ಲಿ ಮುಸ್ಲಿಂರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರೆಲ್ಲ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾರೆ. ನಾವೆಲ್ಲರೂ ಕೂಡ ಸಹೋದರತ್ವ, ಸಹಬಾಳ್ವೆಯಿಂದ ಬಾಳಬೇಕು ಎಂದು ಕರೆ ನೀಡಿದರು.
ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸುಮುಖ ರಘು, ಸಯ್ಯದ್ ಅಕ್ಬರ್, ಹೊಂಬೇಶ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಎಚ್.ಕೆ. ಜವರೇಗೌಡ, ಬನವಾಸೆ ರಂಗಸ್ವಾಮಿ, ಕೃಷ್ಣಕುಮಾರ್, ಮಲ್ಲಿಗೆವಾಳ್ ದೇವಪ್ಪ, ರಂಜಿತ್ ಗೊರೂರು, ಜಾವಗಲ್ ಮಂಜುನಾಥ್, ಪ್ರಕಾಶ್, ರಾಮಚಂದ್ರ ಇತರರು ಮುಸ್ಲಿಂ ಬಾಧವರಿಗೆ ಶುಭ ಹಾರೈಸಿದರು.