ಮನೋಹರ ಕಮ್ಮಾರ ಹಿರೇಬಾಗೇವಾಡಿ, ಬೆಳಗಾವಿ: ಒಂದು ಕಾಲದಲ್ಲಿ ನಾಟಕ, ಸಭೆ-ಸಮಾರಂಭ, ಚುನಾವಣೆ ಪ್ರಚಾರ ಸಭೆಗಳು ನಡೆದು ಪ್ರಸಿದ್ಧಿಯಾಗಿದ್ದ ಇಲ್ಲಿನ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿರುವ ರಂಗಮಂದಿರ ಇಂದು ಉಪಯೋಗವಿಲ್ಲದೆ ಹಾಳು ಕೊಂಪೆಯಾಗಿದೆ, ಅನೈತಿಕ ಚಟುವಟಿಕೆಗಳಿಗೆ ತಾಣವಾಗಿದೆ.
ಮದ್ಯದ ಬಾಟಲ್ಗಳು, ಟೆಟ್ರಾ ಪ್ಯಾಕೆಟ್ಗಳು, ಗುಟ್ಕಾ, ಸಿಗರೇಟು, ಬೀಡಿ ಇತರ ಗಲೀಜು ವಸ್ತುಗಳನ್ನು ತುಂಬಿಕೊಂಡು, ಹಂದಿ-ನಾಯಿಗಳ ಹಾವಳಿ, ಮಲಮೂತ್ರ ವಿಸರ್ಜನೆಯಿಂದ ರಂಗಮಂದಿರ ಗಬ್ಬೆದ್ದು ನಾರುತ್ತಿದೆ. ಜತೆಗೆ ಕಾನೂನು ಬಾಹಿರ ಚಟುವಟಿಕೆಗಳ ತಾಣವಾಗಿ ಪರಿವರ್ತನೆಯಾಗುತ್ತಿದೆ.
ಗ್ರಾಮದ ರಂಗಕಲಾ ಪ್ರೇಮಿ ಮಲ್ಲಪ್ಪ ಹುಲಿಕವಿ ಎಂಬಾತರು ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ 2002ರಲ್ಲಿ 2.5 ಲಕ್ಷ ರೂ. ವೆಚ್ಚದಲ್ಲಿ ಈ ರಂಗಮಂದಿರ ನಿರ್ಮಿಸಿದ್ದರು. ಕೆಲ ವರ್ಷಗಳವರೆಗೆ ನಾಟಕಗಳು, ರಾಜಕೀಯ ಸಮಾರಂಭ ಇತ್ಯಾದಿಗಳಿಗೆ ಇದು ವೇದಿಕೆಯಾಗಿತ್ತು. ಆದರೆ, ಇಂದು ಯಾವುದೇ ಕಾರ್ಯಕ್ರಮ ನಡೆಯದ್ದರಿಂದ ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಅನೈತಿಕ ಚಟುವಟಿಕೆಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ರಂಗಮಂದಿರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಸದ್ಬಳಕೆ ಮಾಡಿಕೊಳ್ಳಲು ಗಮನ ಹರಿಸಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ. ಜತೆಗೆ ಇಲ್ಲಿನ ಶಾಲಾ ಆಡಳಿತ, ಶಿಕ್ಷಣ ಇಲಾಖೆಯವರು, ಸಾರ್ವಜನಿಕರು ರಂಗಮಂದಿರದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.