ಹಳಿಯಾಳ: ಲಾಕ್ಡೌನ್ ಸಡಿಲಿಕೆ ಬಳಿಕ ಸಾರ್ವಜನಿಕರು ಹಾಗೂ ವರ್ತಕರು ಕಡ್ಡಾಯವಾಗಿ ಪಾಲಿಸಬೇಕಾದ ಅವಶ್ಯಕ ನಿಯಮಗಳ ಬಗ್ಗೆ ತಾಲೂಕಾಡಳಿತ ಶುಕ್ರವಾರ ಪಟ್ಟಣದಲ್ಲಿ ಜಾಗೃತಿ ಅಭಿಯಾನ ನಡೆಸಿತು.
ತಹಸೀಲ್ದಾರ್ ವಿದ್ಯಾಧರ ಗುಳಗುಳೆ, ಸಿಪಿಐ ಬಿ.ಎಸ್. ಲೋಕಾಪುರ, ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಹೆಸ್ಕಾಂ ಎಇಇ ಹಾಗೂ ಹಳಿಯಾಳ ಹೋಬಳಿ ನೋಡಲ್ ಅಧಿಕಾರಿ ರವೀಂದ್ರ ಮೆಟಗುಡ್ಡ ನೇತೃತ್ವದ ಅಧಿಕಾರಿಗಳ ನಿಯೋಗವು ಪಟ್ಟಣದ ಮುಖ್ಯ ರಥಬೀದಿಯಲ್ಲಿ ಮಾಸ್ಕ್ ಧರಿಸುವುದರ ಬಗ್ಗೆ ಹಾಗೂ ಪರಸ್ಪರ ಅಂತರ ಕಾಪಾಡುವ ಕುರಿತು ಪೇಟೆಗೆ ಬಂದ ಸಾರ್ವಜನಿಕರಿಗೆ ಹಾಗೂ ವಿವಿಧ ಅಂಗಡಿಗಳ ಮಾಲೀಕರಿಗೆ ಪಾಠ ಮಾಡಿದರು. ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಅಂಗಡಿಗಳನ್ನು ತೆರೆಯಬೇಕು. ಗ್ರಾಹಕರು ಅನಗತ್ಯವಾಗಿ ಅಂಗಡಿ ಎದುರು ನಿಲ್ಲಲು ಅವಕಾಶ ನೀಡಬಾರದು ಅಂಗಡಿಕಾರರಿಗೆ ಸೂಚಿಸಿದರು.
ಮೂರು ಅಂಗಡಿಗಳಿಗೆ ಬೀಗ: ಇದೇ ಸಂದರ್ಭದಲ್ಲಿ ಲಾಕ್ಡೌನ್ ನಿಯಮ ಪಾಲನೆಯಲ್ಲಿ ಅಸಡ್ಡೆ ತೋರಿದ ಮೂರು ಅಂಗಡಿಗಳಿಗೆ ತಾಲೂಕಾಡಳಿತ ಬೀಗ ಜಡಿಯಿತು. ಮಾಸ್ಕ್ ಧರಿಸದೆ ಪೇಟೆಯಲ್ಲಿ ಖರೀದಿಗೆ ಬಂದ ಐದು ಜನರಿಗೆ ದಂಡ ವಿಧಿಸಲಾಯಿತು. ಅನಗತ್ಯವಾಗಿ ಬೈಕ್ನಲ್ಲಿ ಓಡಾಡುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿದರು.