ಹುಬ್ಬಳ್ಳಿ: ಇಲ್ಲಿಯ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ವಾಹನಗಳ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಹಳೇ ಬಸ್ ನಿಲ್ದಾಣದಿಂದ ಕೆಲ ಬಸ್ಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಇನ್ನೂ ಚರ್ಚೆ ಹಂತದಲ್ಲೇ ಉಳಿದಿದೆ.
ನಗರದ ಹೊಸೂರಲ್ಲಿ ಬಿಆರ್ಟಿಎಸ್ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ನಿರ್ವಿುಸಲಾಗಿರುವ ಪ್ರಾದೇಶಿಕ ಬಸ್ ನಿಲ್ದಾಣವನ್ನು ಫೆ. 2ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಲೋಕಾರ್ಪಣೆಗೊಳಿಸಿದ್ದಾರೆ.
ಹಾಗೆ ನೋಡಿದರೆ ಉದ್ಘಾಟನೆಯಾದ ಮರುದಿನದಿಂದಲೇ ಹಳೇ ಬಸ್ ನಿಲ್ದಾಣದ ದೂರ ಪ್ರಯಾಣದ ಬಸ್ಗಳು ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣಕ್ಕೆ ಬರಲಿವೆ ಎಂದು ಈ ಮೊದಲು ವಾಯವ್ಯ ಸಾರಿಗೆ ಅಧಿಕಾರಿಗಳು ಹೇಳಿದ್ದರು. ಯಾವಯಾವ ಬಸ್ಗಳನ್ನು ಸ್ಥಳಾಂತರ ಮಾಡಬೇಕೆಂದು ನಿರ್ಧರಿಸಲು ಮುಖ್ಯ ಸಂಚಾರ ವ್ಯವಸ್ಥಾಪಕರ ನೇತೃತ್ವದ ಸಮಿತಿ ಕೂಡ ರಚಿಸಲಾಗಿತ್ತು. ಆದಾಗ್ಯೂ ಇದುವರೆಗೆ ಯಾವುದೇ ನಿರ್ಧಾರವಾಗಿಲ್ಲ.
ಸೋಮವಾರ ಯಾವುದೇ ಬಸ್ಗಳು ಅಲ್ಲಿಗೆ ಬರಲಿಲ್ಲ. ಹಳೇ ಬಸ್ ನಿಲ್ದಾಣದಿಂದಲೇ ಎಲ್ಲ ಬಸ್ಗಳು ಕಾರ್ಯಾಚರಣೆ ಮುಂದುವರಿಸಿವೆ. ಉದ್ಘಾಟಿತ ಹೊಸೂರ ನಿಲ್ದಾಣದಲ್ಲಿ ಸದ್ಯಕ್ಕೆ ಸ್ಥಳಾಂತರದ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ.
ಏನು ಸಮಸ್ಯೆ: ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣ ಸುಸಜ್ಜಿತವಾಗಿ ನಿರ್ವಣವಾಗಿರುವುದೇನೋ ನಿಜ. ಆದರೆ, ಉಣಕಲ್ಲ ಕ್ರಾಸ್ನಿಂದ ಹೊಸೂರ ವಾಣಿ ವಿಲಾಸ್ ವೃತ್ತದವರೆಗೆ (ಬಸ್ ನಿಲ್ದಾಣದ ಹಿಂಬದಿ) ಸಿಆರ್ಎಫ್ ನಿಧಿಯಡಿ ಚತುಷ್ಪಥ ನಿರ್ಮಾಣ ಕಾಮಗಾರಿ ನಡೆದಿದ್ದು, ಸಂಚಾರಕ್ಕೆ ಅಲಭ್ಯವಾಗಿದೆ. ಬರುವ ಮಾರ್ಚ್ ಅಂತ್ಯದವರೆಗೂ ಕಾಮಗಾರಿ ನಡೆಯಲಿದೆ ಎಂಬುದು ಕಾಮಗಾರಿ ಕೈಗೊಂಡಿರುವ ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳ ಹೇಳಿಕೆ.
ಬಸ್ ನಿಲ್ದಾಣಕ್ಕೆ ಅದುವೇ ಮುಖ್ಯ ರಸ್ತೆಯಾಗಲಿದೆ. ಕಾಮಗಾರಿ ಮುಗಿಯುವವರೆಗೆ ಹೊಸೂರ ಡಿಪೋ ಮೂಲಕ ಪ್ರವೇಶ ನೀಡಿ ಹಿಂಬದಿಯಿಂದ ಹೊರ ಹೋಗುವ ಬಸ್ಗಳಿಗೆ ಅವಕಾಶ ನೀಡುವ ಬಗ್ಗೆಯೂ ಆಲೋಚನೆ ಮಾಡಲಾಗಿತ್ತು. ಆದರೆ, ಯಾವುದನ್ನೂ ನಿರ್ಧಾರ ಮಾಡಿಲ್ಲ.
ಎಷ್ಟು ಬಸ್ ಬರಲಿವೆ: ಹಳೇ ಬಸ್ ನಿಲ್ದಾಣಕ್ಕೆ ನಿತ್ಯ 3700 ಬಸ್ಗಳು ಬಂದು ಹೋಗುತ್ತವೆ. ಅದರಲ್ಲಿ ಈಗಾಗಲೇ ಹೊಸ ಬಸ್ ನಿಲ್ದಾಣಕ್ಕೆ 319 ಬಸ್ ಸ್ಥಳಾಂತರ ಮಾಡಲಾಗಿದೆ. ಹೊಸೂರ ಪ್ರಾದೇಶಿಕ ನಿಲ್ದಾಣಕ್ಕೆ ಮೊದಲ ಹಂತದಲ್ಲಿ 300ಕ್ಕೂ ಹೆಚ್ಚು ಬಸ್ ಸ್ಥಳಾಂತರಿಸುವ ಉದ್ದೇಶ ಇದೆ. ಉಪನಗರ ಹಾಗೂ ನಗರ ಸಾರಿಗೆ ಬಸ್ಗಳು ಯಥಾ ಪ್ರಕಾರ ಹಳೇ ಬಸ್ ನಿಲ್ದಾಣದಿಂದ ಹೊರಡಲಿವೆ ಎಂದು ವಾಯವ್ಯ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ ತಿಳಿಸಿದ್ದಾರೆ.
ಹಿಂಬದಿ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಹೊಸೂರ ಬಸ್ ನಿಲ್ದಾಣಕ್ಕೆ ಮೊದಲ ಹಂತದಲ್ಲಿ ಸುಮಾರು 300 ಬಸ್ ಸ್ಥಳಾಂತರ ಮಾಡಲಾಗುವುದು. ಪ್ರಯೋಗಾರ್ಥ ಸಂಚಾರ ಆರಂಭಿಸುವ ಕುರಿತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಶೀಘ್ರ ರ್ಚಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
| ಸಂತೋಷಕುಮಾರ, ಸಿಟಿಎಂ, ವಾಯವ್ಯ ಸಾರಿಗೆ ಸಂಸ್ಥೆ