ನರಗುಂದ: ಮೊಬೈಲ್ ಆಪ್ ಮೂಲಕ ನಡೆಸಿರುವ ಬೆಳೆ ಸಮೀಕ್ಷೆ ಮುಗಿಯುವ ಹಂತಕ್ಕೆ ಬಂದಿದೆ. ಆದ್ದರಿಂದ ಕೃಷಿಗೆ ಸಂಬಂಧಿಸಿದ ಸರ್ಕಾರದ ಯಾವುದೇ ಸವಲತ್ತು ಪಡೆಯಲು ರೈತರು ತಪ್ಪದೆ ಬೆಳೆ ಸಮೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಹೇಳಿದರು.
ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯಿಂದ ತಾಲೂಕಿನ ಕೊಣ್ಣೂರ ಭಾಗದ ರೈತರ ಜಮೀನುಗಳಲ್ಲಿ ಕೈಗೊಂಡಿರುವ ಬೆಳೆ ಸಮೀಕ್ಷೆ ಕಾರ್ಯವನ್ನು ಶುಕ್ರವಾರ ಪರಿಶೀಲಿಸಿ ಅವರು ಮಾತನಾಡಿದರು.
ರೈತರು ತಮ್ಮ ಜಮೀನಿನ ಬೆಳೆಗಳ ಮಾಹಿತಿ ಮತ್ತು ಅಂಕಿ ಅಂಶಗಳನ್ನು ಸಮೀಕ್ಷೆಯಲ್ಲಿ ಸರಿಯಾಗಿ ನಮೂದಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಬೆಳೆ ದರ್ಶಕ 2020 ಆಪ್ ಅನ್ನು ಬಿಡುಗಡೆ ಮಾಡಲಾಗಿದೆ. ಬೆಳೆ ವಿವರ, ವಿಸ್ತೀರ್ಣದ ಮಾಹಿತಿ, ಜಿಪಿಎಸ್, ಫೋಟೋ, ಸಮೀಕ್ಷೆ ಮಾಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆ, ಮೇಲ್ವಿಚಾರಕರ ಅಂಗೀಕಾರ ಎಲ್ಲ ಮಾಹಿತಿಯನ್ನು ಆಪ್ ಮುಖಾಂತರ ತಿಳಿದುಕೊಳ್ಳಬಹುದು ಎಂದರು.
ಒಂದು ವೇಳೆ ಬೆಳೆ ಸಮೀಕ್ಷೆಯ ವಿವರ ತಪ್ಪಾಗಿದ್ದಲ್ಲಿ ತಕ್ಷಣವೇ ಆಪ್ ಮುಖಾಂತರ ಆಕ್ಷೇಪಣೆ ಸಲ್ಲಿಸಬಹುದು. ತದನಂತರ ಮೇಲ್ವಿಚಾರಕರು ರೈತರ ಆಕ್ಷೇಪಣೆಗಳನ್ನು ಪರಿಶೀಲಿಸಿ ಅವುಗಳನ್ನು ಇತ್ಯರ್ಥಪಡಿಸುತ್ತಾರೆ ತಿಳಿಸಿದರು. ಕೃಷಿ ಅಧಿಕಾರಿಗಳಾದ ನವೀನಕುಮಾರ ಪಾಟೀಲ, ಶ್ರೀಶೈಲ ಅಂಗಡಿ, ಇದ್ದರು.