ಬೂದಿಕೋಟೆ : ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಮನೆಗೆ ಬರುತ್ತಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಜಿ.ಮಂಜುನಾಥ್ (36) ಅವರ ಅಂತ್ಯಸಂಸ್ಕಾರ ಬುಧವಾರ ಸ್ವಗ್ರಾಮ ಕೋಡಗುರ್ಕಿ ಕಾಲನಿಯಲ್ಲಿ ನೆರವೇರಿತು.
ಬಂಗಾರಪೇಟೆ ತಾಲೂಕು ಬೂದಿಕೋಟೆ ಹೋಬಳಿ ಕೋಡಗುರ್ಕಿ ಕಾಲನಿಯ ಜಿ.ಮಂಜುನಾಥ್ ಅವರ ಸೇವೆಯನ್ನು ಮೆಚ್ಚಿದ್ದ ಅಧಿಕಾರಿಗಳು ಬ್ಯಾಡ್ಜ್ ಕೊಟ್ಟು ಗೌರವಿಸಿದ್ದರು. ಜ.31ರಂದು ನಿವೃತ್ತಿ ಹೊಂದಿದ ಇವರು ೆ.2ರಂದು ಸ್ವಗ್ರಾಮಕ್ಕೆ ಮರಳಿದ್ದರು. ಆದರೆ, ಮಂಗಳವಾರ ಮನೆಗೆ ಬಂದ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ಗ್ರಾಮವೇ ಕಂಬನಿ ಮಿಡಿದಿದೆ.
ಪತಿಯ ಬರುವಿಕೆಗಾಗಿ ಪತ್ನಿ ಅಶ್ವಿನಿ 6 ತಿಂಗಳಿಂದ ಕಾಯುತ್ತಿದ್ದರು. ಮಕ್ಕಳೂ ತಂದೆಯ ಆಗಮನದ ನಿರೀಕ್ಷೆಯಲ್ಲಿದ್ದರು. ಸ್ವಗ್ರಾಮದಲ್ಲಿ ದೊಡ್ಡ ಮನೆ ಕಟ್ಟಿ ಜೀವನ ಸಾಗಿಸುವ ಕನಸು ಮಂಜುನಾಥ್ ಅವರದ್ದಾಗಿತ್ತು. ಕರೆ ಮಾಡಿದಾಗಲೆಲ್ಲ ದೇಶ ಸೇವೆ, ಕೆಲಸ ಎಂದು ಹೇಳುತ್ತಿದ್ದರು. ಮನೆಗೆ ಮರಳಿ ಬಂದು ಮಾತನಾಡುವ ಮುನ್ನವೇ ನಮ್ಮೆಲ್ಲರನ್ನೂ ಅಗಲಿದರು ಎಂದು ಅಶ್ವಿನಿ ಕಣ್ಣೀರು ಹಾಕಿದರು.
ಮಾಜಿ ಯೋಧರ ಗೌರವ:
ಕೋಡಗುರ್ಕಿ ಕಾಲನಿಯಲ್ಲಿ ಮೃತ ಯೋಧ ಮಂಜುನಾಥ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕೋಲಾರ ಜಿಲ್ಲಾ ಮಾಜಿ ಯೋಧರ ಟ್ರಸ್ಟ್ನ ಹತ್ತಾರು ಸದಸ್ಯರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ತಹಸೀಲ್ದಾರ್ ದಯಾನಂದ, ಜಿಪಂ ಸದಸ್ಯ ಬಿ.ವಿ.ಮಹೇಶ್ ಸೇರಿ ನೂರಾರು ಜನರು ಪಾಲ್ಗೊಂಡಿದ್ದರು.
ಮುಖ್ಯರಸ್ತೆಯಲ್ಲಿ ಮೆರವಣಿಗೆ:
ಯೋಧನ ಮೃತದೇಹವನ್ನು ತೆರೆದ ವಾಹನದಲ್ಲಿ ಇರಿಸಿ, ಮೆರವಣಿಗೆ ಮಾಡಲಾಯಿತು. ರಸ್ತೆಯಲ್ಲಿ ಶಾಲಾ-ಕಾಲೇಜಿನ ಮಕ್ಕಳು ಹಾಗೂ ಸಾರ್ವಜನಿಕರು ಭಾರತ್ ಮಾತಾಕೀ ಜೈ ಎಂಬ ೋಷಣೆಯೊಂದಿಗೆ ಅಂತಿಮ ವಿದಾಯ ಹೇಳಿದರು.
5 ಎಕರೆ ಭೂಮಿ ಕೊಡಿಸುವ ಭರವಸೆ
ಮಂಜುನಾಥ್ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಸರ್ಕಾರದಿಂದ 5 ಎಕರೆ ಜಮೀನು ಕೊಡಿಸುವುದಾಗಿ ಹಾಗೂ ಯೋಧನ ಪತ್ನಿಗೆ ಉದ್ಯೋಗ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ನಾವಿಬ್ಬರೂ ಜತೆಯಾಗಿ ಸೇನೆಗೆ ಸೇರಿಕೊಂಡಿದ್ದೆವು. 17 ವರ್ಷ ಸೇವೆ ಸಲ್ಲಿಸಿ ಇಬ್ಬರೂ ಒಟ್ಟಾಗಿಯೇ ನಿವೃತ್ತಿಯಾದೆವು. ಮಂಜುನಾಥ್ ಅವರು ಬೆಂಗಳೂರು, ಸಿಖಂದರಾಬಾದ್, ಜಮ್ಮು ಮತ್ತು ಕಾಶ್ಮೀರದ ಉಘಂಪುರ ಸೇರಿ 8 ಕಡೆ ಕಾರ್ಯನಿರ್ವಹಿಸಿದ್ದರು. ಇಬ್ಬರೂ ಮುಂದೆ ಪೊಲೀಸ್ ಇಲಾಖೆ ಸೇರಲು ಉದ್ದೇಶಿಸಿದ್ದೆವು. ಅರ್ಜಿಯನ್ನೂ ಸಿದ್ಧಪಡಿಸಿದ್ದೆವು. ಆದರೆ, ಮಂಜುನಾಥ್ ಅವರು ವಿಧಿಯಾಟಕ್ಕೆ ಬಲಿಯಾದರು.
ನವೀನ್, ಸ್ನೇಹಿತ, ಮಾಜಿ ಯೋಧ