ದೇವರಹಿಪ್ಪರಗಿ: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಯಾವುದೇ ರೀತಿಯ ಸಂಚಾರ ದಟ್ಟಣೆಯಾಗದಂತೆ ಸಾರ್ವಜನಿಕರು ಸಹಕರಿಸಬೇಕು. ಬಸ್ ನಿಲ್ದಾಣದ ಎದುರಿಗೆ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಬಾರದು ಎಂದು ಪಿಎಸ್ಐ ರಾಜು ಬೀಳಗಿ ಹೇಳಿದರು.
ಪಟ್ಟಣ ಪಂಚಾಯಿತಿ ಸಹಯೋಗದೊಂದಿಗೆ ಪಟ್ಟಣದ ನಾಡಕಚೇರಿ ಎದುರಿನಿಂದ ಮೊಹರೆ ಹನುಮಂತರಾಯ ವೃತ್ತದವರೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ವ್ಯಾಪಾರಸ್ಥರು, ತಳ್ಳು ಗಾಡಿಗಳು, ವಾಹನ ನಿಲುಗಡೆ ಮಾಡುವುದನ್ನು ಶನಿವಾರ ತೆರವುಗೊಳಿಸಿ ಮಾತನಾಡಿದ ಅವರು, ಪಟ್ಟಣದ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಹೋಗಿರುವುದರಿಂದ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬಸ್ ನಿಲ್ದಾಣದ ಬಳಿ ಯಾವುದೇ ರೀತಿಯ ಇಕ್ಕಟ್ಟಾಗದಂತೆ ನೋಡಿಕೊಳ್ಳಬೇಕು. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಬಾರದು. ರಸ್ತೆ ಮೇಲೆ ವ್ಯಾಪಾರ ವಹಿವಾಟು ನಡೆಸಬಾರದು ಸರಾಗ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.
ಇದೇ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿ ಕುಳಿತ ವ್ಯಾಪರಸ್ಥರು, ತಳ್ಳು ಗಾಡಿಗಳು, ಸೇರಿದಂತೆ ದ್ವಿಚಕ್ರ ವಾಹನ ನಿಲ್ಲದಂತೆ ಎಚ್ಚರಿಕೆ ನೀಡಿ ಗಡಿ ಗುರುತಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ ಅವರ ನೇತೃತ್ವದಲ್ಲಿ ನಾಡಕಚೇರಿಯಿಂದ ಮೊಹರೆ ಹನುಮಂತರಾಯ ವೃತ್ತದವರೆಗೆ ಜೆಸಿಬಿ ಮೂಲಕ ಸ್ವಚ್ಛಗೊಳಿಸಿ ಗಡಿ ಗುರುತಿಸಲಾಯಿತು. ಈ ಕಾಯಾಚರಣೆಯಲ್ಲಿ ಪಪಂ ಕಿರಿಯ ಆರೋಗ್ಯಾಧಿಕಾರಿ ಫಿರೋಜ ಮುಲ್ಲಾ, ಮಾರ್ತಾಂಡ ಗುಡಿಮನಿ ಸೇರಿದಂತೆ ಪಪಂ ಹಾಗೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.