ಕಿಕ್ಕೇರಿ: ಒತ್ತಡದ ಬದುಕಿನಲ್ಲಿ ಆರೋಗ್ಯವಂತಾಗಿರಲು ಆಹಾರ ಶೈಲಿ ಮುಖ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ವೀರೇಶಪ್ಪ ತಿಳಿಸಿದರು.
ಹೋಬಳಿಯ ಗೋವಿಂದನಹಳ್ಳಿ ಯೋಜನೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಿರಿಧಾನ್ಯ ಆಹಾರ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳೆಯುವ ಆಹಾರವೇ ವಿಷವಾಗುತ್ತಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ, ನೀರು ಎಲ್ಲವೂ ವಿಷವಾಗುತ್ತಿದ್ದು, ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶವಿಲ್ಲದೆ ರೋಗಗಳಿಗೆ ಕಾರಣವಾಗುತ್ತಿದೆ. ಸಿರಿಧಾನ್ಯ ಬೆಳೆಯಲು ಹೆಚ್ಚು ಶ್ರಮವಿಲ್ಲ. ಬೆಳೆಯುವ ಆಸಕ್ತಿ ಬೇಕಿದೆ ಎಂದರು.
ಸಿರಿಧಾನ್ಯಗಳಾದ ನವಣೆ, ಸಾಮೆ, ಬರಗು, ಜೋಳ, ರಾಗಿ, ಕೂರಲು, ಆರ್ಕದಂತಹ ಧಾನ್ಯಗಳಲ್ಲಿ ನಾರಿನಾಂಶ ಹೆಚ್ಚಿದ್ದು, ರೋಗನಿರೋಧಕ ಶಕ್ತಿ, ಆರೋಗ್ಯ ಎಲ್ಲವೂ ಸಿಗಲಿದೆ ಎಂದರು.
ಸಿರಿಧಾನ್ಯಗಳಿಂದ ಪಾಯಸ, ಉಪ್ಪಿಟ್ಟು, ಮೊಸರನ್ನ, ಬಾತು, ಸಿಹಿ ತಿನಿಸು ಪದಾರ್ಥಗಳನ್ನು ಸ್ಥಳದಲ್ಲಿಯೇ ತಯಾರಿಸಿ ಪ್ರಾತ್ಯಕ್ಷಿಕೆ ನೀಡಲಾಯಿತು. ಕೊರಲೆ ರಘು ಮಾತನಾಡಿದರು. ಜ್ಞಾನವಿಕಾಸ ಕೇಂದ್ರದ ಮೇಲ್ವಿಚಾರಕಿ ಮಾದಲಾಂಬಿಕೆ, ಸೇವಾ ಪ್ರತಿನಿಧಿ ರತ್ನಮ್ಮ, ಮೇಲ್ವಿಚಾರಕಿ ರೇಣುಕಾ ಹಾಜರಿದ್ದರು.