ಬೆಳಗಾವಿ: ಇಲ್ಲಿನ ಶಾಹು ನಗರದ ವಿನಾಯಕ ಕಾಲನಿಯಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ಜಾಗದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ತಡೆಯುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ಥಳೀಯ ನಿವಾಸಿಗಳು ಶುಕ್ರವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ವಿನಾಯ ಕಾಲನಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಾರ್ವಜನಿಕ ಉದ್ಯಾನ, ಸರ್ಕಾರಿ ಆಸ್ಪತ್ರೆ ಇತರ ಸಾರ್ವಜನಿಕ ಉದ್ದೇಶಕ್ಕಾಗಿ 2 ಎಕರೆ ಮೀಸಲಿಟ್ಟಿದ್ದರು. ಈ ಪ್ರದೇಶದಲ್ಲಿ ನಿತ್ಯ ಸ್ಥಳೀಯ ನಿವಾಸಿಗಳು, ವಯೋವೃದ್ಧರು ವಾಯು ವಿಹಾರಕ್ಕೆ ಬಳಕೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರ (ಬುಡಾ)ವು ಆ ಜಾಗವನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ನೀಡಿದ್ದು, ತಕ್ಷಣ ತಡೆ ಹಿಡಿಯಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.
ಹನುಮಾನ ದೇವಸ್ಥಾನದ ಪಕ್ಕದಲ್ಲಿರುವ ಸುಮಾರು 8 ಗುಂಟೆ ಜಾಗದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರು ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೆ, ಶಾಲೆಯ ಆಟದ ಮೈದಾನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಸಾರ್ವಜನಿಕ ಸ್ಥಳವನ್ನು ವಾಪಸ್ ಪಡೆದುಕೊಳ್ಳಬೇಕು. ಅಲ್ಲದೆ, ಬುಡಾ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮೂಲಕ ನಿವಾಸಿಗರು ವಿನಂತಿಸಿದರು.
ಶ್ರೇಯಸ್ ನಾಕಾಡಿ, ಕೆ.ಬಿ. ಖಡಕಬಾವಿ, ವಿಜಯ ಭಾಸ್ಕರ್, ರವಿ ಭಾಗಿ, ಸಂಜಯ ಪಾಟೀಲ, ರವಿ ರುದ್ರಾಪುರ, ಮಹಾಂತೇಶ ಹಂಚಣ್ಣವರ, ಪ್ರಶಾಂತ ಬಿದರೆ ಇತರರಿದ್ದರು.